ಕಾಂಗ್ರೆಸ್ ಕರ್ನಾಟಕವನ್ನು ತಾಲಿಬಾನ್ ಮಾಡುವಂತೆ ಕಾಣುತ್ತಿದೆ!
ಬೆಂಗಳೂರು, ಅಕ್ಟೋಬರ್ 03; ಈದ್ ಮಿಲಾದ್ ಮೆರವಣಿಗೆ ವೇಳೆ ಶಿವಮೊಗ್ಗ ನಗರದ ಹೊರವಲಯದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 60 ಜನರನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಈ ಘಟನೆ ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಟ್ವೀಟ್ ಮಾಡಿದೆ. 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ, ಬಂದಿದ್ದು, ಭಯೋತ್ಪಾದಕರಿಗೆ ಹಾಗೂ ಜಿಹಾದಿ ರಕ್ಕಸರಿಗೆ ಕರ್ನಾಟಕ ಸ್ವರ್ಗವಾಗಿ ಮಾರ್ಪಟ್ಟಿದೆ' ಎಂದು ದೂರಿದೆ.

'ತಾವೆಂತಹ ದೇಶದ್ರೋಹದ ಕೆಲಸವನ್ನು ಮಾಡಿದರೂ, ಕಾಂಗ್ರೆಸ್ ಪಕ್ಷ ನಮ್ಮ ಬೆಂಬಲಕ್ಕಿರಲಿದೆ ಎಂಬ ಕಾರಣಕ್ಕೆ ಜಿಹಾದಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಕಾಂಗ್ರೆಸ್ "ಸಿದ್ದ"ವಾಗಿ ನಿಂತಂತೆ ಕಾಣುತ್ತಿದೆ!!' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಉಲ್ಲೇಖ ಮಾಡದೆ 'ಸಿದ್ದ' ಎಂದು ಟ್ವೀಟ್ ಮಾಡಿದೆ.
ಬಿಜೆಪಿ ಟ್ವೀಟ್; ಬಿಜೆಪಿ ತನ್ನ ಟ್ವೀಟ್ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ನಡೆದ ಕೆಲವು ಘಟನೆಗಳನ್ನು ಉಲ್ಲೇಖ ಮಾಡಿದೆ. ಅವುಗಳು ಕೆಳಗಿನಂತಿವೆ.
* ಉಡುಪಿಯಲ್ಲಿ ಹಿಂದೂ ಯುವತಿಯರ ಖಾಸಗಿ ವಿಡಿಯೋಗಳ ರಹಸ್ಯ ಚಿತ್ರೀಕರಣ.
* ರಾಮನಗರದಲ್ಲಿ ಹಾಡುಹಗಲೇ ಗೋವುಗಳ ಕಳ್ಳತನ ಹಾಗೂ ವಧೆ.
* ರಾಮನಗರದ ಟಿಪ್ಪು ನಗರಕ್ಕೆ ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿಗಳ ಮೇಲೆ ಗುಂಪು ಹಲ್ಲೆ.
* ಭದ್ರಾವತಿಯಲ್ಲಿ ಹಿಂದೂ ಯುವಕನ ಮೇಲೆ, ಜಿಹಾದಿ ಸಂಘಟನೆಗಳಿಂದ ಮಾರಣಾಂತಿಕ ಹಲ್ಲೆ.
* ಹಾಸನದಲ್ಲಿ ಹಾಡುಹಗಲೇ ಗನ್ ಹಿಡಿದು, ಜಿಹಾದಿ ಯುವಕರಿಂದ ಪುಂಡಾಟ.
* ಚಿಕ್ಕಬಳ್ಳಾಪುರದಲ್ಲಿ ಹಿಂದೂ ಯುವಕನ ಮೇಲೆ ಜಿಹಾದಿಗಳ ನೈತಿಕ ಪೊಲೀಸ್ ಗಿರಿ.
* ಶಿವಮೊಗ್ಗದಲ್ಲಿ ಹಿಂದೂಗಳ ಮನೆ, ವಾಹನಗಳ ಮೇಲೆ ಕಲ್ಲೆಸೆತ - ತಲ್ವಾರ್ನಿಂದ ಕೊಲೆ ಯತ್ನ.
ಮತ್ತೊಂದು ಟ್ವೀಟ್ನಲ್ಲಿ ಬಿಜೆಪಿ, 'ಶಿವಮೊಗ್ಗದಲ್ಲಿ ಈ ಹಿಂದೆ ವಿಧ್ವಂಸಕ ಕೃತ್ಯ ಎಸಗಿದ PFI ಗೂಂಡಾಗಳನ್ನೆಲ್ಲಾ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರ್ಕಾರ!. ಪೊಲೀಸ್ ಅಧಿಕಾರಗಳ ಮೇಲೆಯೇ ಮತಾಂಧರು ಕಲ್ಲುತೂರಾಟ ನಡೆಸಿದ್ದು, ಅನೇಕ ಪೊಲೀಸರೇ ಗಾಯಗೊಂಡಿದ್ದರೂ ಅದರ ಬಗ್ಗೆ ಚಕಾರವೆತ್ತದ ನಿಮ್ಮ ಸರ್ಕಾರಕ್ಕೆ ಕನಿಷ್ಟ ಮಾನ ಮರ್ಯಾದೆ ಉಳಿದಿದೆಯೇ?. ನಮ್ಮ ದಕ್ಷ, ಸಮರ್ಥ, ಶಕ್ತಿಯುತ ಪೊಲೀಸ್ ಅಧಿಕಾರಿಗಳ ಕೈ ಕಟ್ಟಿ ಹಾಕಿ ಮೂಲಭೂತವಾದಿಗಳ ತಾಳಕ್ಕೆ ಕುಣಿಯುವ ಹಾಗೆ ಮಾಡಿರುವ ನಿಮ್ಮ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವ ನೈತಿಕತೆಯೂ ಉಳಿದಿಲ್ಲ! ಇನ್ನು ನಾಲ್ಕು ಪೈಸೆಯ ಗೌರವವನ್ನೂ ಉಳಿಸಿಕೊಳ್ಳದ ನಿಮ್ಮ ಸರ್ಕಾರದ ವಿರುದ್ಧ ಯಾವ ಸಂಚಿನ ಅಗತ್ಯವೂ ಇಲ್ಲ. ಗೆದ್ದಲು ಹಿಡಿದ ಮರದ ಅವಸಾನ ಕಟ್ಟಿಟ್ಟ ಬುತ್ತಿ' ಎಂದು ಹೇಳಿದೆ.
ಕರ್ನಾಟಕ ಕಾಂಗ್ರೆಸ್, 'ಶಿವಮೊಗ್ಗದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಕಿಡಿಗೇಡಿಗಳ ಪ್ರಯತ್ನಕ್ಕೆ ಪೊಲೀಸ್ ಅಧಿಕಾರಿಗಳು ಸಮರ್ಥ ರೀತಿಯಲ್ಲಿ ತಡೆದಿದ್ದಾರೆ. ಕೋಮು ಸಂಘರ್ಷದ ಮೂಲಕ ಕಾಂಗ್ರೆಸ್ ಸರ್ಕಾರದ ಹೆಸರು ಕೆಡಿಸಲು ಬಿಜೆಪಿ ಕರ್ನಾಟಕ ಹಲವು ಬಗೆಯಲ್ಲಿ ಷಡ್ಯಂತ್ರ ನಡೆಸಿದೆ, ಇದನ್ನು ನಮ್ಮ ಪೊಲೀಸರು ಸಮರ್ಥವಾಗಿ ನಿಭಾಯಿಸುವ ಶಕ್ತಿ ಹೊಂದಿದ್ದಾರೆ. ಬಿಜೆಪಿಯ ಯಾವ ಸಂಚುಗಳನ್ನು ಯಶಸ್ವಿಯಾಗಲು ಬಿಡುವುದಿಲ್ಲ' ಎಂದು ಟ್ವೀಟ್ ಮಾಡಿತ್ತು.
ಬಿಜೆಪಿ ಮತ್ತೊಂದು ಟ್ವೀಟ್ನಲ್ಲಿ, 'ಮೂಲಭೂತವಾದಿಗಳನ್ನು ಬಿಡುಗಡೆಗೊಳಿಸುವ ಮುಖ್ಯಮಂತ್ರಿ!. ಅಮಾಯಕರೆಂದು ಕ್ಲೀನ್ಚಿಟ್ ಕೊಡುವ ಗೃಹ ಸಚಿವರು!. ಮಾನಸಿಕರಂತೆ ಹೇಳಿಕೆ ಕೊಡುವ ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾಗ ಶಿವಮೊಗ್ಗದಲ್ಲಿ ಗಲಭೆ ನಡೆಯದೆ ಮತ್ತೇನು ತಾನೆ ನಡೆದೀತು?' ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು.












Click it and Unblock the Notifications