Get Updates
Get notified of breaking news, exclusive insights, and must-see stories!

ಹಳೆ ಹುಲಿಗೆ ಹೊಸ ಸಾರಥ್ಯ, ಕರಾವಳಿ ಕಾಂಗ್ರೆಸಿಗೆ ಪೂಜಾರಿ ರಣತಂತ್ರ

ಮಂಗಳೂರು, ಮಾರ್ಚ್ 23: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಸೃಷ್ಟಿಸಿದೆ. ಅದರಲ್ಲೂ ಕರಾವಳಿಯ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಬಹಳ ಮುಖ್ಯವಾಗಿವೆ. ಆದರೆ ಇವುಗಳನ್ನು ಬಿಜೆಪಿ ಬಿಟ್ಟುಕೊಡಲು ಸಿದ್ದವಿಲ್ಲದೇ ಇರುವುದರಿಂದ ಇಲ್ಲಿ ಜಿದ್ದಾಜಿದ್ದಿನ ಪೈಪೋಟಿಯೇ ಏರ್ಪಟ್ಟಿದೆ.

ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ 13 ವಿಧಾನಸಭಾ ಕ್ಷೇತ್ರಗಳ ಪೈಕಿ 10 ಕಾಂಗ್ರೆಸ್ ಕೈಯಲ್ಲಿವೆ. ಈ ಬಾರಿ ಚುನಾವಣೆಯಲ್ಲಿ ಎಲ್ಲಾ 13 ಕ್ಷೇತ್ರಗಳನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.

ಈ ನಡುವೆ ಬಿಜೆಪಿ ಕೂಡ ಹಠಕ್ಕೆ ಬಿದ್ದಿದ್ದು ತನ್ನ ಭದ್ರಕೋಟೆಯನ್ನು ಮತ್ತೆ ವಶಪಡಿಸಿಕೊಳ್ಳುವ ತವಕದಲ್ಲಿದೆ. ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿಯ ಚಾಣಾಕ್ಯ ಎಂದೇ ಗುರುತಿಸಲಾಗುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಭಯ ಜಿಲ್ಲೆಗಳ ಪ್ರವಾಸ ಮಾಡಿ ತಂತ್ರಗಾರಿಕೆ ರೂಪಿಸಿ ಹೋಗಿದ್ದಾರೆ. ಇದು ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

In Pics: ಕರಾವಳಿಯಲ್ಲಿ ರಾಹುಲ್ ಗಾಂಧಿ ಮಿಂಚಿನ ಸಂಚಾರ

ಅಖಾಡಕ್ಕಿಳಿದ ಆರ್.ಎಸ್.ಎಸ್

ಅಖಾಡಕ್ಕಿಳಿದ ಆರ್.ಎಸ್.ಎಸ್

ಕರಾವಳಿಯಲ್ಲಿ ಬಿಜೆಪಿ ತನ್ನ ಸಂಘಟನಾತ್ಮಕ ಶಕ್ತಿ ಹಾಗು ಹಿಂದುತ್ವದ ಪ್ರಬಲ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಕರಾವಳಿ ಹಿಂದೂ ಸಂಘಟಗಳು ಹಾಗೂ ಆರ್.ಎಸ್.ಎಸ್ ಸಂಪೂರ್ಣವಾಗಿ ಬಿಜೆಪಿ ಪರ ಫೀಲ್ಡ್ ಗೆ ಇಳಿದಿವೆ. ಇದು ಕಾಂಗ್ರೆಸ್ ಮುಖಂಡರ ನಿದ್ದೆ ಗೆಡಿಸಿದೆ. ಬಿಜೆಪಿಯ ಈ ಅಸ್ತ್ರಗಳಿಗೆ ಪ್ರತಿಯಾಗಿ ಕಾಂಗ್ರೆಸ್, ತನ್ನ ಬತ್ತಳಿಕೆಯಲ್ಲಿರುವ ಹಳೆಯ ಅಸ್ತ್ರವನ್ನು ಮರು ಪ್ರಯೋಗಿಸಲು ನಿರ್ಧರಿಸಿದೆ .

ಆ ಅಸ್ತ್ರ ಬೇರಾವುದೂ ಅಲ್ಲ; ತೆರೆಮರೆಗೆ ಸರಿದಿರುವ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸಿಗ ಬಿ. ಜನಾರ್ದನ್ ಪೂಜಾರಿ.

ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಆ ಹಳೆಯ ಅಸ್ತ್ರಕ್ಕೆ ಹೊಳಪು ನೀಡುವ ಕೆಲಸ ಮಾಡಿದ್ದಾರೆ. ಬಿಜೆಪಿಗೆ ಎದುರಾಗಿ ಕಾಂಗ್ರೆಸ್ ತನ್ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರನ್ನು ಬಳಸಲು ಮುಂದಾಗಿದೆ. ಈ ಮೂಲಕ ಕರಾವಳಯಲ್ಲಿ ಪ್ರಬಲ ಬಿಲ್ಲವ ಸಮುದಾಯವನ್ನು ಸೆಳೆಯಲು ತಂತ್ರ ರೂಪಿಸಿದೆ.

ಬಿಲ್ಲವ ಮತ ಬ್ಯಾಂಕ್ ಗೆ ಕನ್ನ

ಬಿಲ್ಲವ ಮತ ಬ್ಯಾಂಕ್ ಗೆ ಕನ್ನ

ಇದಕ್ಕೆ ಕಾರಣವೂ ಇದೆ . ಕರಾವಳಿಯಲ್ಲಿ ಗೆಲುವು ಸಾಧಿಸಲು ಬಿಲ್ಲವ ಸಮಾಜದ ಒಲವು ಬಹಳ ಮುಖ್ಯ . ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೆಳ್ತಂಗಡಿ ಹಾಗು ಸುಳ್ಯ ಹೊರತುಪಡಿಸಿ ಉಳಿದ 6 ರಲ್ಲಿ ಬಿಲ್ಲವರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಈ 6 ಕ್ಷೇತ್ರಗಳಲ್ಲಿ ಬಿಲ್ಲವ ಮತಗಳೇ ನಿರ್ಣಾಯಕವಾಗಿವೆ.

2013ರ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಗೆಲುವು ಅಷ್ಟು ಸುಲಭವಿಲ್ಲ ಎಂಬುದು ಪಕ್ಷದ ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ ಎನ್ನಲಾಗಿದೆ.

ಆದ್ದರಿಂದ ಗೆಲುವಿಗಾಗಿ ಬಿಲ್ಲವ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಆಗ ಕಂಡವರೇ ಹಿರಿಯ ಮುಖಂಡ, ಬಿಲ್ಲವ ಸಮುದಾಯದ ಅನಭಿಷಿಕ್ತ ಮುಂದಾಳು ಬಿ. ಜನಾರ್ದನ ಪೂಜಾರಿ.

ಫಲಿಸುತ್ತಾ ಕಾಂಗ್ರೆಸ್ ತಂತ್ರ?

ಆದರೆ ಕಾಂಗ್ರೆಸಿನ ಈ ತಂತ್ರಗಾರಿಗೆ ಫಲಿಸಲಿದೆಯೇ? ಎಂಬುದೇ ಪ್ರಮುಖ ಪ್ರಶ್ನೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರ ವಿರುದ್ಧ ಜನಾರ್ದನ ಪೂಜಾರಿ ಅಸಮಧಾನ ಹೊಂದಿದ್ದಾರೆ. ಪೂಜಾರಿ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವೆ ಮಾತಕತೆಯೇ ಉಳಿದಿಲ್ಲ. ಇದು ಇತ್ತೀಚೆಗೆ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಶ್ರೀಕ್ಷೇತ್ರ ಕುದ್ರೋಳಿ ದೇವಾಲಯಕ್ಕೆ ಆಗಮಿಸಿದ ಸಂದರ್ಭದಲ್ಲೂ ಗೋಚರಿಸಿದೆ.

ಇನ್ನೊಂದೆಡೆ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರೊಂದಿಗೆ ಪೂಜಾರಿ ಮುನಿಸಿಕೊಂಡಿದ್ದಾರೆ. ಸಚಿವ ರಮಾನಾಥ್ ರೈ ಅವಾಚ್ಯ ಶಬ್ದಗಳಿಂದ ಬಿಲ್ಲವ ಸಮಾಜದ ಮುಖಂಡ ಪೂಜಾರಿ ಅವರನ್ನು ನಿಂದಿಸಿದ್ದರು ಎಂಬ ಆರೋಪವೂ ಇದೆ. ಈ ವಿಚಾರ ನೆನೆದು ಕಾರ್ಯಕ್ರಮ ಒಂದರಲ್ಲಿ ಪೂಜಾರಿ ಕಣೀರು ಹಾಕಿದ ಘಟನೆಯೂ ನಡೆದಿತ್ತು.

ಇದು ಜಿಲ್ಲೆಯ ಜಿಲ್ಲವ ಸಮುದಾಯದವರನ್ನು ಕೆರಳಿಸಿತ್ತು. ಇನ್ನೊಂದೆಡೆ ತನ್ನ ಈವರೆಗಿನ ಗೆಲುವಿಗೆ ಮುಸ್ಲಿಂ ಸಮುದಾಯ ಕಾರಣ ಎಂಬ ಸಚಿವ ರಮಾನಾಥ್ ರೈ ಹೇಳಿಕೆ ಬಂಟ್ವಾಳ ಕ್ಷೇತ್ರದ ಬಿಲ್ಲವರಲ್ಲಿ ಆಕ್ರೋಶ ಹುಟ್ಟುಹಾಕಿತ್ತು.

ಪೂಜಾರಿ-ಸಿದ್ದರಾಮಯ್ಯ ಸಮನ್ವಯ ಸಾಧ್ಯವೇ?

ಪೂಜಾರಿ-ಸಿದ್ದರಾಮಯ್ಯ ಸಮನ್ವಯ ಸಾಧ್ಯವೇ?

ಈ ನಡುವೆ ಬಿಲ್ಲವ ಸಮಾಜದ ಪ್ರಬಲ ಮುಖಂಡ ಹಾಗು ಪೂಜಾರಿ ಅವರ ಬಲಗೈ ಬಂಟ ಎಂದೇ ಗುರುತಿಸಲಾಗುವ ಹರಿಕೃಷ್ಣ ಬಂಟ್ವಾಳ ಬಿಜೆಪಿ ಸೇರ್ಪಡೆಗೊಂಡಿದ್ದು ಬಿಲ್ಲವ ಸಮಾಜವನ್ನು ಕಾಂಗ್ರೆಸ್ ವಿರುದ್ದ ಒಗ್ಗೂಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಲ್ಲಡ್ಕದ ಶಾಲೆಗಳಿಗೆ ಮಕ್ಕಳ ಬಿಸಿಯೂಟದ ಅನುದಾನ ರದ್ದು ಮಾಡಿದ್ದ ರಾಜ್ಯ ಸರಕಾರದ ನಿಲುವಿನ ವಿರುದ್ದ ಜನಾರ್ದನ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಕೂಡ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಇಷ್ಟೆಲ್ಲಾ ಬೆಳವಣಿಗೆ ನಡುವೆಯೂ ಜನಾರ್ದನ್ ಪೂಜಾರಿಯವರನ್ನು ಈ ಚುನಾವಣೆಯಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. 80 ವರ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಸತತ ಸೋಲಿನ ಸಿಂಪತಿ ಪಕ್ಷಕ್ಕೆ ಮತವಾಗಿ ಪರಿವರ್ತನೆ ಆಗಬಹುದು ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.

ಅನಾರೋಗ್ಯದಿಂದ ಬಳಲುತ್ತಿರುವ ಪೂಜಾರಿ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಆದರೆ ಅವರ ಮುಖ ಇಟ್ಟುಕೊಂಡು ಬಿಲ್ಲವ ಮತಗಳನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ನ ಒನ್ ಲೈನ್ ಲೆಕ್ಕಾಚಾರ.

ಈ ಎಲ್ಲಾ ವಿಚಾರ, ವಿಶ್ಲೇಷಣೆಯ ನಂತರ ಜನಾರ್ದನ ಪೂಜಾರಿಯವರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಟ್ಟ ಕಟ್ಟಿ ಗೆಲುವಿನ ದಡ ಸೇರುವ ಕಾಂಗ್ರೆಸ್ ನ ಯತ್ನ ಸಫಲವಾಗುತ್ತಾ ಎಂಬುದೇ ಸದ್ಯದ ಕುತೂಹಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+