ಚನ್ನಪಟ್ಟಣದಲ್ಲಿಯೂ ಕಾಂಗ್ರೆಸ್ ಗಿಫ್ಟ್ ಕೂಪನ್ ಕುತಂತ್ರ: ಎಳೆ ಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ
ರಾಮನಗರ, ಅಕ್ಟೋಬರ್ 31: ರಾಮನಗರ ಸೇರಿದಂತೆ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ ಗಳನ್ನು ಹಂಚಿ ವ್ಯಾಪಕ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದರು.
ಚನ್ನಪಟ್ಟಣದಲ್ಲಿ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು; ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ₹3,000,₹5000 ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್ ಗಳನ್ನು ಬೆಂಗಳೂರಿನ ಲುಲು ಮಾಲ್ ಗೆ ಹೋಗಿ ಕೊಡಿ, ಅಲ್ಲಿಗೆ ಹೋಗಿ ನಿಮಗೆ ಬೇಕಾದ ವಸ್ತುವನ್ನು ಖರೀದಿ ಮಾಡಿ ಎಂದು ಆಮಿಷ ಒಡ್ಡಿದ್ದರು. ಇದನ್ನು ನಂಬಿ ಕೂಪನ್ ಹಿಡಿದುಕೊಂಡು ಲುಲು ಮಾಲ್ ಗೆ ಹೋದರೆ ಅಲ್ಲಿ ಕೂಪನ್ ಇಲ್ಲ, ವಸ್ತುಗಳೂ ಇಲ್ಲ ಎಂದು ಕೂಪನ್ ಅಕ್ರಮವನ್ನು ಕೇಂದ್ರ ಸಚಿವರು ಎಳೆ ಎಳೆಯಾಗಿ ಬಿಡಿಸಿಟ್ಟರು.

ಕಾಂಗ್ರೆಸ್ ಪಕ್ಷವು ವಾಮಮಾರ್ಗದಲ್ಲಿ ಚುನಾವಣೆಗಳನ್ನು ಗೆಲ್ಲುವ ಚಾಳಿ ಮಾಡಿಕೊಂಡಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿಯೂ ಕೂಪನ್ ಷಡ್ಯಂತ್ರ ಮಾಡಲು ಕಾಂಗ್ರೆಸ್ ಹೊರಟಿದೆ. ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾಡಿದರು.
ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ಟಾರ್ಗೆಟ್ ಅಲ್ಲ, ನಾನು ಟಾರ್ಗೆಟ್ ಆಗಿದ್ದೇನೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ. ಉಪ ಚುನಾಣೆಯಲ್ಲಿ ನಿಖಿಲ್ ಸೋಲಿಸಲು ಕಾಂಗ್ರೆಸ್ ದೊಡ್ಡ ಕುತಂತ್ರ ರೂಪಿಸಿದೆ. ಅದರಿಂದ ನನ್ನ ಮುಂದಿನ ಬೆಳವಣಿಗೆ ಕುಗ್ಗಿಸಬಹುದು ಎಂದು ಅವರು ಲೆಕ್ಕಾಚಾರ ಮಾಡಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕೆಂದು ಹೊರಟಿದ್ದಾರೆ. ನಾನು ಕೇಂದ್ರ ಮಂತ್ರಿಯಾಗಿರುವುದನ್ನು ಅವರು ಸಹಿಸುತ್ತಿಲ್ಲ. ಅವರಿಗೆ ನಿಖಿಲ್ ಗಿಂತ ನಾನೇ ದೊಡ್ಡ ಟಾರ್ಗೆಟ್ ಆಗಿದ್ದೇನೆ. ಅವರ ಯಾವುದೇ ಕುತಂತ್ರಗಳು ಚನ್ನಪಟ್ಟಣ ಜನತೆ ಮುಂದೆ ನಡೆಯಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆ ಕಾಲದಿಂದಲೇ ಜೆಡಿಎಸ್ ಪಕ್ಷವನ್ನು ಮುಗಿಸಬೇಕು ಎಂದು ಷಡ್ಯಂತ್ರ ಮಾಡಿ 19 ಸ್ಥಾನಕ್ಕೆ ಜೆಡಿಎಸ್ ಇಳಿಸಿದರು. ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎಂದು ಅಪಪ್ರಚಾರ ಮಾಡಿದರು. ಆದರೆ, ಯಾರೊಬ್ಬರನ್ನೂ ಅಲುಗಾಡಿಸಲು ಅವರಿಂದ ಆಗಲಿಲ್ಲ ಎಂದುಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದರು.
ಮುಸ್ಲಿಂ ಮತಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಟಾರ್ಗೆಟ್ ಮಾಡಿವೆ ಎನ್ನುವುದು ಸರಿಯಲ್ಲ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಯಾವಾಗಲೂ ಟಾರ್ಗೆಟ್ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರು ಯಾರನ್ನಾದರೂ ಟಾರ್ಗೆಟ್ ಮಾಡಿಕೊಳ್ಳಲಿ. ನಾವು ಮಾತ್ರ ನಮ್ಮ ಕೆಲಸಗಳ ಆಧಾರದ ಮೇಲೆ ಮತ ಕೊಡಿ ಎಂದು ಕೇಳುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಾಂಗ್ರೆಸ್ ಯಾವ ಮಟ್ಟಿಗೆ ಮುಸ್ಲಿಮರನ್ನು ಟಾರ್ಗೆಟ್ ಮಾಡಿದೆ ಎನ್ನುವುದಕ್ಕೆ ಶಿಗ್ಗಾಂವಿ ಕಾಂಗ್ರೆಸ್ ಮುಖಂಡ ಸೈಯದ್ ಅಜೀಂಪೀರ್ ಖಾದ್ರಿ ಅವರನ್ನು ಕಿಡ್ನಾಪ್ ಮಾಡಿ, ಅವರನ್ನು ಕಳೆದ ಒಂದು ವಾರದಿಂದ ಕೂಡಿ ಹಾಕಿಕೊಂಡಿದ್ದಾರೆ. ಖಾದ್ರಿ ಅವರಿಂದ ನಾಮಪತ್ರ ವಾಪಸ್ ತೆಗೆಸಲು ಹೊರಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ನಾಮಪತ್ರ ವಾಪಸ್ ತೆಗೆಸುತ್ತಿದ್ದಾರೆ. ಒಂದು ವಾರದಿಂದ ಈ ರೀತಿಯ ರಾಜಕೀಯ ನಡೆಯುತ್ತಿದೆ. ಖಾದ್ರಿಯವರನ್ನು ಒಂದು ವಾರ ಕೂಡಿ ಹಾಕಿಕೊಳ್ಳುವ ಅವಶ್ಯಕತೆ ಏನಿತ್ತು ಇವರಿಗೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಒಬ್ಬ ಮಂತ್ರಿ ಖಾದ್ರಿಯವನ್ನು ಗೃಹ ಬಂಧನದಲ್ಲಿ ಇರಿಸಿಕೊಂಡು ಜತೆಯಲ್ಲಿ ಇದನ್ನೆಲ್ಲ ಮಾಡಿಸುತ್ತಿದ್ದಾರೆ. ಅವರಲ್ಲಿ ಗೆಲುವಿನ ವಿಶ್ವಾಸದ ಕೊರತೆ ಎಷ್ಟಿದೆ ಎಂಬುದು ಇದರಿಂದ ಗೊತ್ತಾಗುತ್ತಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಚನ್ನಪಟ್ಟಣ ನಗರ ಪ್ರದೇಶದ ಹಲವಾರು ವಾರ್ಡ್ ಗಳಿಗೆ ಭೇಟಿ ಕೊಟ್ಟಿದ್ದೇನೆ. ಹಲವು ನಾಯಕರ ಮನೆಗಳಿಗೂ ಭೇಟಿ ಕೊಟ್ಡಿದ್ದೇನೆ. ಅಲ್ಪಸಂಖ್ಯಾತ ಮಹಿಳೆಯರು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಾರೆ. ಯಾವುದೇ ಅಪಪ್ರಚಾರಕ್ಕೆ ಬಲಿಯಾಗದೆ ನಿಮ್ಮ ಪರವಾಗಿದ್ದೇವೆ. ನಮ್ಮ ಕಷ್ಟಗಳನ್ನ ಬಗೆಹರಿಸಿ, ಮತ ಕೊಡುವುದಾಗಿ ಮಹಿಳೆಯರು ಹೇಳಿದ್ದಾರೆ. ಕಾಂಗ್ರೆಸ್ನ ಅಪಪ್ರಚಾರ ಇಲ್ಲಿ ಫಲ ಕೊಡಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.












Click it and Unblock the Notifications