ಭಾರತ್ ಬಂದ್ಗೆ ಬೆಂಬಲ ಘೋಷಿಸಿದ ಕರ್ನಾಟಕ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 07: ರೈತರು ಕರೆ ನೀಡಿರುವ ಡಿಸೆಂಬರ್ 8ರ 'ಭಾರತ್ ಬಂದ್'ಗೆ ಕರ್ನಾಟಕ ಕಾಂಗ್ರೆಸ್ ಬೆಂಬಲ ಘೋಷಣೆ ಮಾಡಿದೆ. ಕರ್ನಾಟಕದಲ್ಲಿಯೂ ರೈತ ಸಂಘ ಬಂದ್ ಮಾಡುವುದಾಗಿ ಘೋಷಿಸಿದೆ.
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ನಾವು ರೈತರಿಗೆ ಬೆಂಬಲ ನೀಡುತ್ತೇವೆ. ಅವರು ನಮ್ಮ ಆರ್ಥಿಕತೆಯ ಆಧಾರ ಸ್ತಂಭ" ಎಂದು ಹೇಳಿದರು.
"ರೈತರಿಗೆ ಬೆಂಬಲ ನೀಡಿದ ವಿಶ್ವದ ವಿವಿಧ ನಾಯಕರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮ ಇಡೀ ದೇಶ ರೈತರನ್ನು ಬೆಂಬಲಿಸಬೇಕು" ಎಂದು ಡಿ. ಕೆ. ಶಿವಕುಮಾರ್ ಕರೆ ನೀಡಿದರು.

ರೈತ ಸಂಘದ ಬೆಂಬಲ; ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭಾರತ್ ಬಂದ್ಗೆ ಬೆಂಬಲ ನೀಡಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ಮಾಡಲಾಗುತ್ತದೆ ಎಂದು ಹೇಳಿದೆ.
ಬೆಂಗಳೂರು ನಗರಕ್ಕೆ 10 ಸಾವಿರಕ್ಕೂ ಅಧಿಕ ರೈತರು ಮಂಗಳವಾರ ಆಗಮಿಸಲಿದ್ದಾರೆ. ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ತನಕ ರೈತರು ಬೃಹತ್ ಜಾಥಾ ನಡೆಸಲಿದ್ದು, ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ನಡೆಸಲಿದ್ದಾರೆ.
ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಆದರೆ, ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ರೈತರನ್ನು ಫ್ರೀಡಂಪಾರ್ಕ್ನಿಂದ ಮುಂದೆ ಹೋಗಲು ಪೊಲೀಸರು ಬಿಡುವುದಿಲ್ಲ.
ರಸ್ತೆ ತಡೆ; ವಿವಿಧ ಜಿಲ್ಲೆಗಳಲ್ಲಿಯೂ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಮಹಾನಗರಗಳನ್ನು ಸಂಪರ್ಕಿಸುವ ಹೆದ್ದಾರಿಗಳನ್ನು ತಡೆಯುವುದಾಗಿ ರೈತರು ಘೋಷಣೆ ಮಾಡಿದ್ದಾರೆ.












Click it and Unblock the Notifications