ಕರ್ನಾಟಕದಲ್ಲಿ ರಾಹುಲ್ 'ಮೋಡಿ'ಯ ನಿರೀಕ್ಷೆಯಲ್ಲಿ ಕಾಂಗ್ರೆಸ್
ಬೆಂಗಳೂರು, ಡಿಸೆಂಬರ್ 21: ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಬದಲಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವರ್ಚಸ್ಸು ಕರ್ನಾಟಕದಲ್ಲೂ ಸಹಾಯಕ್ಕೆ ಬರಲಿದೆ. ಕರ್ನಾಟದಲ್ಲಿ ರಾಹುಲ್ ಗಾಂಧಿ ಮೋಡಿ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕದಲ್ಲೂ ಚುನಾವಣೆಯ ನೇತೃತ್ವವನ್ನು ರಾಹುಲ್ ಗಾಂಧಿಯವರು ವಹಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂಬುದಾಗಿ ಡಾ. ಜಿ. ಪರಮೇಶ್ವರ್ ಪಿಟಿಐಗೆ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು "ಗುಜರಾತ್ ನಿಂದ ಬದಲಾವಣೆ ಆರಂಭವಾಗಿದೆ," ಎಂದು ಹೇಳಿದ್ದಾರೆ.

"ಬದಲಾವಣೆ ಗುಜರಾತ್ ನಿಂದ ಆರಂಭವಾಗಿದೆ. ಅಪನಗದೀಕರಣ ಮತ್ತು ಜಿಎಸ್ಟಿ ಗುಜರಾತ್ ನಲ್ಲಿ ಬಿಜೆಪಿಗೆ ಹೊಡೆತ ನೀಡುವಲ್ಲಿ ಯಶಸ್ವಿಯಾಗಿವೆ. ಇದು ಒಂದು ವಿಚಾರ. ಇನ್ನೊಂದು ವಿಚಾರವೆಂದರೆ ಸೋನಿಯಾ ಗಾಂಧಿಯವರಿಂದ ರಾಹುಲ್ ಗಾಂಧಿ ನಾಯಕತ್ವವನ್ನು ವಹಿಸಿಕೊಂಡಿದ್ದು. ಇದರಿಂದ ಕಾಂಗ್ರೆಸ್ ಪುನರುಜ್ಜೀವನಗೊಂಡಿದೆ," ಎಂದು ಪರಮೇಶ್ವರ್ ವಿಶ್ಲೇಷಿಸಿದ್ದಾರೆ.
ಪರಮೇಶ್ವರ್ ರಾಜ್ಯದಲ್ಲಿ ತಮ್ಮ ಪ್ರವಾಸ ಆರಂಭಿಸಿದ್ದು ಕಳೆದ ಬಾರಿ ಸೋತ 100 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಲಿದ್ದಾರೆ.
"ಇದು ಜನರ ನಿರ್ಧಾರ. ಗುಜರಾತ್ ಫಲಿತಾಂಶ ನೋಡಿಕೊಂಡು ಕರ್ನಾಟಕದಲ್ಲೂ ರಾಹುಲ್ ಗಾಂಧಿಯವರ ನಾಯಕತ್ವವನ್ನು ತರುತ್ತಾರೆ ಎಂದು ನಂಬಿದ್ದೇನೆ. ಅವರ ವರ್ಚಸ್ಸು ಕರ್ನಾಟಕ ಚುನಾವಣೆಯಲ್ಲಿ ಸಹಾಯಕವಾಗಲಿದೆ," ಎಂದು ಪರಮೇಶ್ವರ್ ಹೇಳಿದ್ದಾರೆ.
ಇದೇ ವೇಳೆ ಅವರು ಕರ್ನಾಟಕದಲ್ಲಿ ಮೋದಿ ಅಲೆಯಿಲ್ಲ. ಇಲ್ಲೇನಿದ್ದರೂ ರಾಜ್ಯದ ವಿಷಯಗಳ ಮೇಲೆ ಚುನಾವಣೆ ನಡೆಯಲಿದೆ ಎಂದಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಮರ್ಥವಾಗಿ ಎದುರಿಸಲಿದ್ದಾರೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications