ಉಡುಗೊರೆ: ಬಿಜೆಪಿ ಜನಪ್ರಿಯತೆ ಸಹಿಸಲಾಗದೇ ಕಾಂಗ್ರೆಸ್ನಿಂದ ಅಗೌರವದ ಕೆಲಸ: ಸುಧಾಕರ್
ಬೆಂಗಳೂರು, ಅಕ್ಟೋಬರ್ 30: ಬಿಜೆಪಿಯು ಜನೋಪಯೋಗಿ ಕೆಲಸಗಳ ಮೂಲಕ ಜನಪ್ರಿಯತೆ ಪಡೆಯುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರ ಹಾಗೂ ಪತ್ರಕರ್ತರ ಗೌರವ ಹಾಳು ಮಾಡಲು ಪ್ರಯತ್ನಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಕರ್ನಾಟಕದ ಪತ್ರಿಕಾ ಮಿತ್ರರು ವಿಶೇಷವಾದ ಗೌರವ ಹೊಂದಿದ್ದಾರೆ. ಉತ್ತಮ ಕೆಲಸ ಮೂಲಕ ಜನಪ್ರಿಯತೆ ಪಡೆಯುತ್ತಿರುವ ಬಿಜೆಪಿಗೆ ಗೌರವ ಹಾಳು ಮಾಡುವ ಕೆಲಸವಾಗಿದೆ. ಹಬ್ಬದ ಸಂದರ್ಭದಲ್ಲಿ ಉಡುಗೊರೆ ಕೊಡುವುದು ಹಿಂದೂ ಧರ್ಮದ ಪ್ರತೀತಿ, ಪರಂಪರೆ ಮತ್ತು ಇತಿಹಾಸ. ಬಣ್ಣದ ಹಬ್ಬ ಬಂದಾಗ ಬಣ್ಣ ಹಚ್ಚುತ್ತೇವೆ. ದೀಪಾವಳಿ ಬಂದಾಗ ಪಟಾಕಿಗಳನ್ನು ಸಿಡಿಸಿ, ಉಡುಗೊರೆ-ಸಿಹಿ ನೀಡುತ್ತೇವೆ. ಕಾಂಗ್ರೆಸ್ಗೆ ಹಿಂದೂ ಹಬ್ಬಗಳ ಬಗ್ಗೆ ಇಷ್ಟು ದ್ವೇಷ ಏಕೆ? ಎಂದು ಪ್ರಶ್ನಿಸಿದರು.
ಪತ್ರಕರ್ತರಿಗೆ ಹಣ ನೀಡಿರುವುದು ನಿಜವೇ ಆಗಿದ್ದಲ್ಲಿ, ಕಾಂಗ್ರೆಸ್ಗೆ ಯಾರು ದೂರು ನೀಡಿದ್ದಾರೆ ಎಂದು ತಿಳಿಸಿಲ್ಲ. ಮುಖ್ಯಮಂತ್ರಿ ಕಚೇರಿಯಿಂದ ಹಣ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ಗೆ ಯಾವುದೇ ಮಾಧ್ಯಮದ ಸ್ನೇಹಿತರು ದೂರು ನೀಡಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ. ಸಾಕ್ಷಿ ಇಲ್ಲದೆ ಆಪಾದನೆ ಮಾಡುವುದು ಎಷ್ಟು ಸರಿ ಎಂದು ಸುಧಾಕರ್ ಕಿಡಿ ಕಾರಿದರು.

ಕಾಂಗ್ರೆಸ್ನ ಉಡುಗೊರೆ ಕೊಟ್ಟಿದ್ದು ಬಹಿರಂಗ
ಕಾಂಗ್ರೆಸ್ನವರ ಕಾಲದಲ್ಲಿ ಉಡುಗೊರೆ ಕೊಟ್ಟಿರುವುದು ಹಾಗೂ ಪಡೆದಿರುವುದು ಜಗಜ್ಜಾಹೀರಾಗಿದೆ. ಇಂತಹ ವಿಷಯಗಳಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ರಾಜ್ಯ ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಗಳ ದೊಡ್ಡ ನಾಯಕರಾಗಿದ್ದಾರೆ. ಹಿಂದುಳಿದ ಸಮಾವೇಶವೂ ಕಲಬುರಗಿಯಲ್ಲಿ ಯಶಸ್ವಿಯಾಗಿ ನಡೆದಿದೆ. ಇದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ಪ್ರಿಯಾಂಕ್ ಖರ್ಗೆಯಿಂದ ಉಡುಗೊರೆಗೆ 14 ಲಕ್ಷ ಖರ್ಚು
ಕಾಂಗ್ರೆಸ್ ಅವಧಿಯಲ್ಲಿ ಐಟಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು 40 ಮಂದಿಗೆ ಕಿಯೋನಿಕ್ಸ್ ಮೂಲಕ ಉಡುಗೊರೆ ನೀಡಿದ್ದರು. ಸಿಎಸ್ಆರ್ ನಿಧಿಯಡಿ 40 ಲ್ಯಾಪ್ಟಾಪ್ಗನ್ನು 14.09 ಲಕ್ಷ ರೂ. ವೆಚ್ಚದಲ್ಲಿ ನೀಡಿದ್ದರು. ಇವರು ಯಾವ ನೈತಿಕತೆಯಿಂದ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.
ಪೊಲೀಸ್ ಅಧಿಕಾರಿ ನಂದೀಶ್ ಅವರದ್ದು ಸಹಜ ಸಾವಾಗಿದೆ. ಅವರೇನೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡರು. ಅನುಪಮ ಶೆಣೈ ರಾಜೀನಾಮೆ ನೀಡಿದರು. ಆದರೆ ನಂದೀಶ್ ಸಾವಿಗೆ ಕಾಂಗ್ರೆಸ್ ರಾಜಕೀಯ ಬಣ್ಣ ಬಳಿದಿದೆ ಎಂದು ತಿರುಗೇಟು ನೀಡಿದರು.

ಮೀಸಲಾತಿಗೆ ಬಿಜೆಪಿ ಕ್ರಮ: ಕಾಂಗ್ರೆಸ್ ಅಪಪ್ರಚಾರ
ಕಂದಾಯ ಇಲಾಖೆಯಿಂದ ಮನೆ ಬಾಗಿಲಿಗೆ ಸೇವೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ 'ನಮ್ಮ ಕ್ಲಿನಿಕ್'ಗಳು ಆರಂಭವಾಗುತ್ತಿವೆ. ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕಾಂಗ್ರೆಸ್ನವರು ಎಸ್ಸಿ, ಎಸ್ಟಿಗೆ ಬೆಣ್ಣೆ ಹಚ್ಚಿಕೊಂಡೇ ಇದ್ದರು. ಆದರೆ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಕ್ರಮ ವಹಿಸಿದೆ. ಇದರಿಂದ ಸರ್ಕಾರಕ್ಕೆ ಜನಪ್ರಿಯತೆ ಹೆಚ್ಚಿದೆ. ಇದನ್ನು ನೋಡಿ ಕಾಂಗ್ರೆಸ್ ಗೆ ಸಹಿಸಿಕೊಳ್ಳಲು ಆಗದೆ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಲೋಕಾಯುಕ್ತದ ಮೇಲೆ ನಂಬಿಕೆ ಇಲ್ಲವೇ?
ಈ ಆರೋಪ ಸಂಬಂಧ ಈಗಾಗಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಆ ಬಗ್ಗೆ ಪಾರದರ್ಶಕವಾಗಿ ತನಿಖೆಯಾಗುತ್ತದೆ. ಇದು ಕಾಂಗ್ರೆಸ್ನವರ ಎಸಿಬಿ ಅಲ್ಲ.ಪ್ರಕರಣಗಳನ್ನು ಮುಚ್ಚಿಹಾಕಲೆಂದೇ ಕಾಂಗ್ರೆಸ್ ಎಸಿಬಿ ಸಂಸ್ಥೆಯನ್ನು ಆರಂಭಿಸಿತು. ಲೋಕಾಯುಕ್ತ ಆಗ ಇದ್ದಿದ್ದರೆ ಪ್ರಕರಣಗಳನ್ನು ಕಾಂಗ್ರೆಸ್ ಮುಚ್ಚಿಹಾಕಲು ಆಗುತ್ತಿರಲಿಲ್ಲ. ನಿಮಗೆ ಲೋಕಾಯುಕ್ತದ ಮೇಲೆ ನಂಬಿಕೆಯೇ ಇಲ್ಲ. ಅದಕ್ಕಾಗಿ ಎಸಿಬಿ ರಚನೆ ಮಾಡಿ ಅಧಿಕಾರಿಗಳನ್ನು ಕೈ ಕೆಳಗೆ ಇಟ್ಟುಕೊಂಡಿದ್ದರು ಎಂದು ಕಾಂಗ್ರೆಸ್ ವಿರುದ್ಧ ಸುಧಾಕರ್ ಚಾಟಿ ಬೀಸಿದರು.












Click it and Unblock the Notifications