ಕಾಂಗ್ರೆಸ್ ಅಹೋರಾತ್ರಿ ಧರಣಿ: ಇತಿಹಾಸದ ಚಕ್ರಗಳು ತಿರುಗಿದಾಗ
ರಾಷ್ಟ್ರಧ್ವಜದ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪನವರು ಸೇರಿದಂತೆ ಹಲವರು ಧರಣಿ ನಿರತ ಕಾಂಗ್ರೆಸ್ ನಾಯಕರ ಮನವೊಲಿಸಲು ನಡೆಸಿದ ಪ್ರಯತ್ನವೆಲ್ಲಾ ವಿಫಲವಾಗಿದೆ.
ಇನ್ನೊಂದು ಕಡೆ, ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ನಡೆಯುತ್ತಿರುವ ಅಧಿವೇಶನವಿದು, ಕಲಾಪಕ್ಕೆ ತೊಂದರೆ ಮಾಡುತ್ತಿರುವವರನ್ನು ಸದನದಿಂದ ಹೊರಕ್ಕೆ ಹಾಕಿ ಇಲ್ಲದಿದ್ದರೆ ಅನಿದಿರ್ಷ್ಟಾವಧಿಗೆ ಮುಂದೂಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸ್ಪೀಕರ್ ಅವರನ್ನು ಒತ್ತಾಯಿಸಿದ್ದಾರೆ.
ಧರಣಿ ಕೂತ ಕಾಂಗ್ರೆಸ್ ನಾಯಕರ ಮನವೊಲಿಸಲು ಸಿಎಂ, ಸ್ಪೀಕರ್ ಜೊತೆಗೆ ಯಡಿಯೂರಪ್ಪನವರೂ ಬಂದಿದ್ದು ಗಮನಿಸಬೇಕಾದ ವಿಚಾರ. ಇದೇ ಯಡಿಯೂರಪ್ಪನವರು ಒಂಬತ್ತು ವರ್ಷಗಳ ಹಿಂದೆ ಬೆಳಗಾವಿಯ ವಿಕಾಸಸೌಧದಲ್ಲಿ ಅಹೋರಾತ್ರಿ ಧರಣಿ ಕೂತಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಈಶ್ವರಪ್ಪ ಮತ್ತು ಡಿಕೆಶಿ ನಡುವೆ ನಡೆದ ಏಕವಚನದ ವಾಗ್ದಾಳಿ
ಈಶ್ವರಪ್ಪನವರು ರಾಷ್ಟ್ರಧ್ವಜದ ಬಗ್ಗೆ ಮಾತನಾಡಿದ್ದು ಆನಂತರ ಸದನದಲ್ಲಿ ಈಶ್ವರಪ್ಪ ಮತ್ತು ಡಿಕೆಶಿ ನಡುವೆ ನಡೆದ ಏಕವಚನದ ವಾಗ್ದಾಳಿಯಿಂದಾಗಿ ಕಾಂಗ್ರೆಸ್ ಮುಖಂಡರು ಸಚಿವರ ರಾಜೀನಾಮೆ ಪಡೆಯುವ ತನಕ ಧರಣಿ ನಡೆಸುವ ನಿರ್ಧಾರಕ್ಕೆ ಬಂದರು. ಸ್ಪೀಕರ್ ಪರಿಪರಿಯಾಗಿ ಕಾಂಗ್ರೆಸ್ ಮುಖಂಡರನ್ನು ಕೇಳಿಕೊಂಡರೂ, ಸಭೆ ನಡೆಸಿದರೂ ಕೈನಾಯಕರು ಮನಸ್ಸು ಬದಲಿಸಲಿಲ್ಲ. ರಾತ್ರಿಯಿಡೀ ಅಸೆಂಬ್ಲಿಯಲ್ಲೇ ಧರಣಿ ಮುಂದುವರಿಸಲು ನಿರ್ಧರಿಸಿದ್ದರಿಂದ ಸ್ಥಳಕ್ಕೆ ಸ್ಪೀಕರ್, ಸಿಎಂ ಮತ್ತು ಯಡಿಯೂರಪ್ಪನವರು ಮನವೊಲಿಸಲು ಬಂದರು. ಆದರೆ, ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕಾಂಗ್ರೆಸ್ಸಿಗರು ಧರಣಿ ವಾಪಸ್ ಪಡೆಯಲು ನಿರಾಕರಿಸಿದರು.

ಅಸೆಂಬ್ಲಿಯ ಬಾವಿಯಲ್ಲೇ ಕೂತು ಯಡಿಯೂರಪ್ಪ ಪ್ರತಿಭಟನೆ ನಡೆಸಿದ್ದರು
ನವೆಂಬರ್ 25, 2013 ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ, ಯಡಿಯೂರಪ್ಪನವರು ಬೆಳಗಾವಿಯ ವಿಕಾಸ ಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಬಿಜೆಪಿಯೊಂದಿಗಿನ ಮನಸ್ತಾಪದಿಂದ ಕೆಜೆಪಿ ಕಟ್ಟಿ, ಆ ಪಕ್ಷದ ಚಿಹ್ನೆಯಿಂದ ಯಡಿಯೂರಪ್ಪನವರು ಅಸೆಂಬ್ಲಿಗೆ ಆಯ್ಕೆಯಾಗಿದ್ದ ಸಮಯವದು. ಶಾದಿ ಭಾಗ್ಯ ಯೋಜನೆಯು ಎಲ್ಲಾ ವರ್ಗದವರಿಗೆ ಸಿಗುವಂತಾಗಬೇಕು ಎನ್ನುವುದು ಯಡಿಯೂರಪ್ಪನವರ ಧರಣಿಗೆ ಕಾರಣವಾಗಿತ್ತು. ಅಸೆಂಬ್ಲಿಯ ಬಾವಿಯಲ್ಲೇ ಕೂತು ಯಡಿಯೂರಪ್ಪ ಪ್ರತಿಭಟನೆ ನಡೆಸಿದ್ದರು.

ಅಂಬರೀಶ್, ಯಡಿಯೂರಪ್ಪನವರನ್ನು ಬಲವಂತದಿಂದ ಎಬ್ಬಿಸಿ ಅವರ ಸ್ಥಾನದಲ್ಲಿ ಕೂರಿಸಿದ್ದರು
ಆ ವೇಳೆ ವಸತಿ ಸಚಿವರಾಗಿದ್ದ ಅಂಬರೀಶ್ ಅವರು ಯಡಿಯೂರಪ್ಪನವರನ್ನು ಬಲವಂತದಿಂದ ಎಬ್ಬಿಸಿ ಅವರ ಸ್ಥಾನದಲ್ಲಿ ಕೂರಿಸಿದ್ದರು. ಆದರೂ, ಅದಕ್ಕೆ ಜಗ್ಗದ ಯಡಿಯೂರಪ್ಪನವರು ರಾತ್ರಿ ಕೂಡಾ ಧರಣಿ ನಡೆಸಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಶಾದಿ ಭಾಗ್ಯದ ಜೊತೆಗೆ ಮೃತ ಪಟ್ಟ ಕಬ್ಬುಬೆಳೆಗಾರರ ಪರಿಹಾರದ ವಿಚಾರದಲ್ಲೂ ಯಡಿಯೂರಪ್ಪನವರ ಧರಣಿ ಮುಂದುವರಿದಿತ್ತು. ಎರಡು ದಿನಗಳ ಧರಣಿಯ ನಂತರ ಯಡಿಯೂರಪ್ಪನವರು ಅದನ್ನು ಕೈಬಿಡಲು ಒಪ್ಪಿಕೊಂಡರು.

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ
ಬಿಜೆಪಿಯಲ್ಲಿದ್ದ ಬಸವರಾಜ ಬೊಮ್ಮಾಯಿ, ಜೆಡಿಎಸ್ ನಾಯಕರಾದ ರೇವಣ್ಣ, ವೈ.ಎಸ್.ವಿ ದತ್ತಾ ಮುಂತಾದ ನಾಯಕರು ಯಡಿಯೂರಪ್ಪನವರನ್ನು ಸದನದ ಬಾವಿಯಿಂದ ಕರೆದುಕೊಂಡು ಅವರ ಸ್ಥಾನದಲ್ಲಿ ಕೂರಿಸಿದರು. ಅಂದು ಯಡಿಯೂರಪ್ಪನವರ ಮನವೊಲಿಸಲು ಬೊಮ್ಮಾಯಿ ಬಂದಿದ್ದರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈಗ ಬೊಮ್ಮಾಯಿ ಸಿಎಂ ಆಗಿದ್ದಾರೆ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಧರಣಿ ನಿರತ ಸ್ಥಳಕ್ಕೆ ಬೊಮ್ಮಾಯಿ ಜೊತೆಗೆ ಬಂದಿದ್ದರು.












Click it and Unblock the Notifications