ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಡಿಕೆಶಿ ಮೇಲುಗೈ?
ಅಳೆದು ತೂಗಿ, ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ ಚುನಾವಣೆಗೆ ತಮ್ಮ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅಭ್ಯರ್ಥಿ ಆಯ್ಕೆಗೆ ಪರಾಮರ್ಶೆ ಮಾಡುವ ಸಂದರ್ಭದಲ್ಲಿ ಈ ಇಬ್ಬರ ಹೆಸರು ಅಷ್ಟಾಗಿ ಪ್ರಸ್ತಾವನೆಗೂ ಬಂದಿರಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು ಎನ್ನುವ ಚರ್ಚೆಯ ವೇಳೆ ಎಸ್.ಆರ್.ಪಾಟೀಲ್, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಐವಾನ್ ಡಿಸೋಜಾ ಮುಂತಾದವರ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಅಚ್ಚರಿ ಎನ್ನುವಂತೆ ಎಂ.ನಾಗರಾಜ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕರುಣಿಸಿದೆ.
Breaking: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ: ವಿಜಯೇಂದ್ರಗೆ ಇಲ್ಲ ಟಿಕೆಟ್
ಎಲ್ಲರ ಲೆಕ್ಕಾಚಾರ ತಲೆಕೆಳಗಾಗುವಂತೆ ಅಭ್ಯರ್ಥಿ ಆಯ್ಕೆಯ ಹಿಂದೆ ಡಿ.ಕೆ.ಶಿವಕುಮಾರ್ ಅವರ ಕೊನೆಯ ಕ್ಷಣದಲ್ಲಿ ದೆಹಲಿಯಲ್ಲಿ ನಡೆಸಿದ ತಂತ್ರಗಾರಿಕೆಯ ಫಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಗೊಲ್ಲ ಮತ್ತು ಮುಸ್ಲಿಂ ಸಮುದಾಯದ ಮುಖಂಡರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆಹಾಕಿದೆ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಹೈಕಮಾಂಡಿಗೆ ಪ್ರತ್ಯೇಕ ಪಟ್ಟಿಯನ್ನು ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಜೊತೆಗೆ, ಇಬ್ಬರು ನಾಯಕರನ್ನು ಕಾಂಗ್ರೆಸ್ ವರಿಷ್ಠರು ಕರೆಸಿಕೊಂಡಿದ್ದರು. ಇದಾದ ನಂತರ, ಭಾನುವಾರ (ಮೇ 22) ತಡರಾತ್ರಿ ಡಿಕೆಶಿ ದೆಹಲಿಗೆ ತೆರಳಿ ಅಲ್ಲೇ ಇದ್ದು, ಪಟ್ಟಿ ಸಿದ್ದಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
'ಡಿಕೆಶಿ-ಸಿದ್ದರಾಮಯ್ಯ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು'
ಉತ್ತರ ಕರ್ನಾಟಕ ಭಾಗದ ಪ್ರಭಾವೀ ಮುಖಂಡ ಎಸ್.ಆರ್.ಪಾಟೀಲ್
ಉತ್ತರ ಕರ್ನಾಟಕ ಭಾಗದ ಪ್ರಭಾವೀ ಮುಖಂಡ ಎಸ್.ಆರ್.ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ಡಿಕೆಶಿ ಒತ್ತಾಯವಾಗಿತ್ತು. ಆದರೆ, ಇದಕ್ಕೆ ಸಿದ್ದರಾಮಯ್ಯನವರ ವಿರೋಧವಿತ್ತು ಎಂದು ಹೇಳಲಾಗಿತ್ತು. ಇವರಿಬ್ಬರ ನಡುವಿನ ಸಂಘರ್ಷಕ್ಕೆ ಉಸ್ತುವಾರಿಯೂ ಸಾಕ್ಷಿಯಾಗಿದ್ದರು. ಇದರಿಂದಾಗಿ, ಅಭ್ಯರ್ಥಿ ಘೋಷಣೆ ತಡವಾಯಿತು ಎನ್ನುವ ಮಾತು ಕೇಳಿ ಬರುತ್ತಿದೆ. ಎಸ್.ಆರ್.ಪಾಟೀಲ್ ಹೆಸರನ್ನು ವರಿಷ್ಠರು ಆಯ್ಕೆ ಮಾಡುವುದು ಕಷ್ಟ ಎನ್ನುವ ಮಾಹಿತಿ ದೊರೆತಾಗ, ಡಿಕೆಶಿ ಬೇರೊಂದು ಗೇಂ ಪ್ಲ್ಯಾನ್ ಮಾಡಿದರು ಎನ್ನುವ ಸುದ್ದಿ ಚಾಲ್ತಿಯಲ್ಲಿದೆ.
ನಾಗರಾಜ ಯಾದವ್ ಹೆಸರನ್ನು ಪ್ರಸ್ತಾವಿಸಿ ಅವರನ್ನು ಅಭ್ಯರ್ಥಿಯನ್ನಾಗಿಸುವಲ್ಲಿ ಯಶಸ್ವಿ
ಒಬಿಸಿ ಕೋಟಾದಲ್ಲಿ ಮಾಜಿ ಸಚಿವರೂ ಆಗಿರುವ ಎಂ.ಆರ್.ಸೀತಾರಾಂ ಅವರ ಹೆಸರನ್ನು ಸಿದ್ದರಾಮಯ್ಯ ಮುನ್ನಲೆಗೆ ತಂದರು. ಅದಕ್ಕೆ ಪ್ರತಿತಂತ್ರ ಹಣೆದ ಡಿ.ಕೆ.ಶಿವಕುಮಾರ್, ಇದೇ ಕೋಟದಲ್ಲಿ ನಾಗರಾಜ ಯಾದವ್ ಹೆಸರನ್ನು ಪ್ರಸ್ತಾವಿಸಿ ಅವರನ್ನು ಅಭ್ಯರ್ಥಿಯನ್ನಾಗಿಸುವಲ್ಲಿ ಯಶಸ್ವಿಯಾದರು. ಯಾದವ ಸಮುದಾಯಕ್ಕೆ ಸೇರಿದ ನಾಗರಾಜ ಯಾದವ್, ಪಕ್ಷದ ನಿಷ್ಟಾವಂತ ಕಾರ್ಯಕರ್ತನೆಂದೇ ಹೆಸರು ಪಡೆದಿದ್ದಾರೆ.
ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಪರಿಗಣಿಸುವಂತೆ ನೋಡಿಕೊಂಡರು
ಇನ್ನು ಅಲ್ಪಸಂಖ್ಯಾತ ಕೋಟಾದಲ್ಲೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆಯ್ಕೆ ಬೇರೆಬೇರೆಯದ್ದಾಗಿತ್ತು. ಸಿದ್ದರಾಮಯ್ಯನವರು ಐವಾನ್ ಡಿಸೋಜ ಬೆಂಬಲಿಸಿದ್ದರು. ಆದರೆ, ಅಂತಿಮ ಹಂತದಲ್ಲಿ ಡಿಕೆಶಿ, ಅಬ್ದುಲ್ ಜಬ್ಬಾರ್ ಅವರ ಹೆಸರನ್ನು ಪರಿಗಣಿಸುವಂತೆ ನೋಡಿಕೊಂಡರು. ಇದರ ಜೊತೆಗೆ, ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಅಲ್ಪಸಂಖ್ಯಾತ ಮುಖಂಡರು ಪ್ರತ್ಯೇಕ ಪತ್ರವನ್ನೂ ಹೈಕಮಾಂಡಿಗೆ ಬರೆದಿದ್ದರು.
ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಆಯ್ಕೆಯ ಹೊರತಾಗಿ ಅಭ್ಯರ್ಥಿ ಆಯ್ಕೆ
ನಾಗರಾಜ ಯಾದವ್ ಮತ್ತು ಅಬ್ದುಲ್ ಜಬ್ಬಾರ್ ಆಯ್ಕೆಯ ಹಿಂದೆ ಕೆಪಿಸಿಸಿ ಅಧ್ಯಕ್ಷರು ತಮ್ಮ ಕೈಮೇಲಾಗುವಂತೆ ನೋಡಿಕೊಂಡರು ಎನ್ನುವ ಮಾತು ಕೇಳಿ ಬರುತ್ತಿದೆ. ಈ ಹಿಂದೆ ಹಲವು ಬಾರಿ ಸಿದ್ದರಾಮಯ್ಯನವರ ಮಾತಿಗೆ ಹೈಕಮಾಂಡ್ ಅಂಗಣದಲ್ಲಿ ಬೆಲೆ ಸಿಗುತ್ತಿತ್ತು ಎನ್ನುವುದು ಕೆಪಿಸಿಸಿ ಪಡಶಾಲೆಯಲ್ಲಿ ಕೇಳಿ ಬರುತ್ತಿದ್ದ ಮಾತು. ಕೆಲವೊಂದು ಮೂಲಗಳ ಪ್ರಕಾರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರ ಆಯ್ಕೆಯ ಹೊರತಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.