ಇತಿಹಾಸ ನಿರ್ಮಿಸಲಿದೆ ಈ ಮಳೆಗಾಲದ ವಿಧಾನ ಮಂಡಲ ಅಧಿವೇಶನ!
ಬೆಂಗಳೂರು, ಸೆ. 20: ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನ ಮಂಡಲ ಅಧಿವೇಶನ ನಡೆಸಲು ಹೊಸ ಸವಾಲು ಎದುರಾಗಿದೆ. ಕೊರೊನಾ ವೈರಸ್ ಆತಂಕದ ಮಧ್ಯೆ ಲೋಕಸಭಾ ಅಧಿವೇಶ ನಡೆಯುತ್ತಿದೆ. ಇದೀಗ ನಾಳೆಯಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಸಲ ಹೊಸ ಸವಾಲುಗಳು ಮೂರು ರಾಜಕೀಯ ಪಕ್ಷಗಳಿಗೆ ಎದುರಾಗಿವೆ. ಜೊತೆಗೆ ಕರ್ನಾಟಕ ವಿಧಾನಸಭೆ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಮುಖ್ಯಮಂತ್ರಿ, ಸಚಿವರು, ವಿಪಕ್ಷ ನಾಯಕರು, ಅಧಿಕಾರಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಕಡ್ಡಾಯವಾಗಿ ಮಾರ್ಗಸೂಚಿ ಪಾಲನೆ ಮಾಡಬೇಕಾಗಿದೆ.
ಸುಗ್ರೀವಾಜ್ಞೆ, ಲಾಕ್ಡೌನ್ ಕಾಲದ ಆಡಳಿತ, ಕೋವಿಡ್ ನಿಯಂತ್ರಿಸಲು ವೈದ್ಯಕೀಯ ಸಲಕರಣೆಗಳ ಖರೀದಿ ಹಗರಣ ಸೇರಿದಂತೆ ಹಲವು ಸವಾಲುಗಳು ಸರ್ಕಾರದ ಮುಂದಿವೆ. ನಾಳೆಯಿಂದಲೇ ಅಧಿವೇಶನ ಆರಂಭವಾಗುವುದರಿಂದ ಸಂಪುಟ ವಿಸ್ತರಣೆ ಒತ್ತಡದಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎರಡು ವಾರಗಳ ಬಿಡುವು ಸಿಕ್ಕಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳು ಅಧಿವೇಶನದಲ್ಲಿ ಎದುರಿಸುವ ಕುರಿತು ಪ್ರತ್ಯೇಕ ರಾಜಕೀಯ ತಂತ್ರಗಳನ್ನು ರೂಪಿಸಿಕೊಂಡಿವೆ. ಎಲ್ಲ ರಾಜಕೀಯ ಪಕ್ಷಗಳ ಏನೇನು ತಯಾರಿ ಮಾಡಿಕೊಂಡಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸರ್ಕಾರಕ್ಕೆ ಸುಗ್ರೀವಾಜ್ಞೆಗಳ ಸವಾಲು!
ರಾಜ್ಯ ಬಿಜೆಪಿ ಸರ್ಕಾರಕ್ಕೆ ಈ ಮಳೆಗಾಲದ ಆಧಿವೇಶನ ಸವಾಲಾಗಿದೆ. ಭೂ ಸುಧಾರಣೆ ಕಾಯಿದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆ ತಿದ್ದುಪಡಿ, ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸೇರಿದಂತೆ 19 ಸುಗ್ರೀವಾಜ್ಞೆಗಳನ್ನು ಕಳೆದ 5 ತಿಂಗಳುಗಳ ಅವಧಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿದೆ. ಬಹುತೇಕ ಇಷ್ಟೊಂದು ಪ್ರಮಾಣದಲ್ಲಿ ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಮಂಡನೆ ಆಗುತ್ತಿರುವುದು ಇದೇ ಮೊದಲು.
ಕೇಂದ್ರ ಸರ್ಕಾರದ ಒತ್ತಡ ಇರುವುದರಿಂದ ಈ ಎಲ್ಲ ಸುಗ್ರೀವಾಜ್ಞೆಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಳ್ಳಬೇಕಾದ ಅನಿವಾರ್ಯತೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದೆ. ಒಂದೊಮ್ಮೆ ಸುಗ್ರೀವಾಜ್ಞೆಗಳಿಗೆ ಅಂಗೀಕಾರ ಪಡೆದುಕೊಳ್ಳದೆ ಇದ್ದರೆ ಅವುಗಳಿಗೆ ಕಾನೂನಿನ ರೂಪ ಸಿಗುವುದಿಲ್ಲ. ಅದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮುಖಭಂಗವಾಗಲಿದೆ. ಹೀಗಾಗಿ ಸದನದಲ್ಲಿ ಗದ್ದಲ ಆದಷ್ಟು ಉತ್ತಮ ಎಂಬುದು ಸರ್ಕಾರದ ಬಯಕೆ. ಆದರೆ ಅದಕ್ಕೆ ಕಾಂಗ್ರೆಸ್ ಬೇರೆಯದ್ದೆ ಸಿದ್ಧತೆ ಮಾಡಿಕೊಂಡಿದೆ.

ಕಾಂಗ್ರೆಸ್ ಪಕ್ಷದ ಪ್ರಮುಖ ಅಸ್ತ್ರಗಳು
ಲಾಕ್ಡೌನ್ ಅವಧಿಕ ಲಾಭ ಪಡೆದು ಸರ್ಕಾರ 19 ಕಾಯಿದೆಗಳಿಗೆ ಸುಗ್ರೀವಾಜ್ಞೆಗಳ ಮೂಲಕ ತಿದ್ದುಪಡಿ ತಂದಿರುವುದು ವಿರೋಧ ಪಕ್ಷ ಕಾಂಗ್ರೆಸ್ಗೆ ಅರಿವಿದೆ. ಜೊತೆಗೆ ಈ ಅಧಿವೇಶನದಲ್ಲಿ ಇನ್ನೂ 10 ಕಾಯಿದೆಗಳಿಗೆ ತಿದ್ದುಪಡಿ ತರಲು ಸರ್ಕಾರ ತಿದ್ದುಪಡಿ ವಿಧೇಯಕಗಳ ಮಂಡನೆ ಮಾಡುತ್ತಿದೆ. ಇಷ್ಟೇ ಅಲ್ಲ ಕಳೆದ ಮಾರ್ಚ್ನಲ್ಲಿ ಮೊಟಕು ಗೊಳಿಸಲಾಗಿದ್ದ ಬಜೆಟ್ ಅಧಿವೇಶನದಲ್ಲಿ ಮಂಡನೆ ಆಗಿರುವ ಎರಡು ಪ್ರಮುಖ ಕಾಯಿದೆಗಳಿಗೆ ಅಂಗೀಕಾರ ಪಡೆದುಕೊಳ್ಳಬೇಕಿದೆ. ಹೀಗಾಗಿ ಒಟ್ಟು ಸುಮಾರು 31 ಕಾಯಿದೆಗಳಿಗೆ ಉಭಯ ಸದನಗಳಲ್ಲಿ ಅಂಗೀಕಾರ ಪಡೆದುಕೊಳ್ಳುವುದು ಅಗತ್ಯವಾಗಿದೆ.
ಹೀಗಾಗಿ ಗದ್ದಲ ಮಾಡದೇ ಚರ್ಚೆಯಲ್ಲಿ ಭಾವಹಿಸಲು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ. ಸದನಗಳಲ್ಲಿ ಗದ್ದಲ ಮಾಡಿದರೆ ಚರ್ಚೆ ಇಲ್ಲದೆಯೆ ಸರ್ಕಾರ ಎಲ್ಲ ಕಾಯಿದೆಗಳಿಗೆ ಅನುಮೋದನೆ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಹೀಗಾಗಿ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಎಲ್ಲ ಕಾಯಿದೆಗಳ ಕುರಿತು ಸುದೀರ್ಘ ಚರ್ಚೆ ಮಾಡುವುದಕ್ಕೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಚರ್ಚೆಯ ಮೂಲಕ ಸುಗ್ರೀವಾಜ್ಞೆಗಳಲ್ಲಿನ ರೈತ ವಿರೊಧಿ, ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ಅಂಶಗಳನ್ನು ಜನರಿಗೆ ತಿಳಿಸುವುದು ಕಾಂಗ್ರೆಸ್ ತಂತ್ರ.

ಕಟ್ಟುನಿಟ್ಟಿನ ಹಾಜರಿ ಕಡ್ಡಾಯ
ಜೊತೆಗೆ ಸುಮಾರು 1200 ಪ್ರಶ್ನೆಗಳನ್ನು ಅಧಿವೇಶನದಲ್ಲಿ ಉತ್ತರಿಸಲು ಹಾಕಲಾಗಿದೆ. ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಟ್ಟಲ್ಲಿ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭವಾಗಲಿದೆ. ಜೊತೆಗೆ ನಿಲುವಳಿ ಸೂಚನೆ, ನಿಯಮ 330 ರಡಿ ಚರ್ಚೆ, ಗಮನ ಸೆಳೆಯುವ ಸೂಚನೆಗಳು, ಶೂನ್ಯ ವೇಳೆ ಎಲ್ಲ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದ್ದು, ಪಕ್ಷದ ಎಲ್ಲ ಶಾಸಕರೂ ಗಂಭೀರವಾಗಿ ಪಾಲ್ಗೊಳ್ಳುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
Recommended Video

ಜೆಡಿಎಸ್ ತಂತ್ರ; ಸಮಾನಾಂತರ ದೂರ
ಇನ್ನು ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದಿಂದ ಸಮಾನಾಂತರ ದೂರ ಕಾಪಾಡಿಕೊಂಡು ಅಧಿವೇಶನದಲ್ಲಿ ಭಾಗವಹಿಸಲು ಜೆಡಿಎಸ್ ತೀರ್ಮಾನ ಮಾಡಿದೆ. ಮೈತ್ರಿ ಸರ್ಕಾರದ ಪತನದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮಧ್ಯೆ ವಾಕ್ಸಮರ ಜೋರಾಗಿದ್ದು, ಹೀಗಾಗಿ ಅಧಿವೇಶನದಲ್ಲಿ ಕಾಂಗ್ರೆಸ್ ನಿಲುವುಗಳ ಕುರಿತು ಜೆಡಿಎಸ್ ತಟಸ್ಥವಾಗಿ ಉಳಿಯಲಿದೆ. ಸದನದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಅದರ ನೇರ ಪರಿಣಾಮ ಶಾಸಕರು ಹಾಗೂ ಕಾರ್ಯಕರ್ತರ ಮೇಲಾಗಲಿದೆ. ಹೀಗಾಗಿ ಸರ್ಕಾರ ಪತನವಾಗಲು ಕಾರಣವಾಗಿದ್ದ ಅಂಶಗಳನ್ನು ಜೆಡಿಎಸ್ ಪ್ರಮುಖವಾಗಿ ಪ್ರಸ್ತಾಪ ಮಾಡಲಿದೆ.
ಜೊತೆಗೆ ರೈತ ವಿರೋಧ, ಕಾರ್ಮಿಕ ವಿರೋಧಿ ನೀತಿಗಳೂ ಸೇರಿದಂತೆ ಹಲವು ವಿಚಾರಗಳನ್ನು ಜೆಡಿಎಸ್ ಪ್ರಸ್ತಾಪ ಮಾಡಲು ನಿರ್ಧರಿಸಿದೆ. ಒಟ್ಟಾರೆ, ಮೂರು ರಾಜಕೀಯ ಪಕ್ಷಗಳು ಮಳೆಗಾಲದ ಅಧಿವಶನದಲ್ಲಿ ಚಳಿ ಬಿಟ್ಟು ಭಾಗವಹಿಸಿ ಜನರಸ ಸಮಸ್ಯೆಗಳಿಗೆ ಸ್ಪಂದಿಸಲಿ ಎಂಬುದು ಜನರ ಒತ್ತಾಯ!












Click it and Unblock the Notifications