ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಆಶಯ ಈಡೇರಿತೆ?: ಸುಧಾಕರ್
ಬೆಂಗಳೂರು, ಅಕ್ಟೋಬರ್ 24: ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ' ಕರ್ನಾಟಕದಲ್ಲಿ ಮುಕ್ತಾಯಗೊಂಡಿದೆ. ಆದರೆ ಪಾದಯಾತ್ರೆಯಿಂದ ಕಾಂಗ್ರೆಸ್ ಆಶಯ ಈಡೇರಿತೆ? ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ' ಕುರಿತು ಸರಣಿ ಟ್ವಿಟ್ ಮಾಡಿರುವ ಸಚಿವ ಸುಧಾಕರ್ ಪ್ರಶ್ನಿಸಿದ್ಧಾರೆ. ನಾವು ಈ ಯಾತ್ರೆಯ ಉದ್ದೇಶ ಶುದ್ಧಿಯನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಯಾವ ಆಶಯದಿಂದ ಈ ಯಾತ್ರೆ ಕೈಗೊಳ್ಳಲಾಗಿತ್ತು ಆ ಆಶಯ ಈಡೇರಿದಿಯೇ? ಎಂಬ ಸಾರ್ವಜನಿಕರು ಪ್ರಶ್ನೆಗೆ ಕಾಂಗ್ರೆಸ್ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮೊದಲನೆಯದಾಗಿ 'ಭಾರತ್ ಜೋಡೋ' ಎಂಬ ಕಾಂಗ್ರೆಸ್ ಘೋಷ ವಾಕ್ಯವೇ ಹಾಸ್ಯಾಸ್ಪದ ಹಾಗೂ ಪ್ರಶ್ನಾರ್ಹವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ಅಖಂಡತೆ ಭದ್ರವಾಗಿರುವಾಗ ಜೋಡಿಸುವ ಚರ್ಚೆಯು ಕೇವಲ ರಾಜಕೀಯ 'ಸ್ಟಂಟ್' ಆಗಿದೆ. ಒಂದು ಮಿಥ್ಯಾ ವಾದವನ್ನು ಸತ್ಯ ಮಾಡುವ ವ್ಯರ್ಥ ಪ್ರಯತ್ನ ಇದು ಎಂದು ಭಾರತ್ ಜೋಡೋ ಯಾತ್ರೆ ಕುರಿತು ಸಚಿವರು ಕಾಲೆಳೆದಿದ್ದಾರೆ.

ಅಷ್ಟಕ್ಕೂ ಕರ್ನಾಟಕ ರಾಜ್ಯದಲ್ಲಿ ಹಲವು ದಿನಗಳು ನಡೆದ ಪಾದಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಾಗಲಿ, ಕಾಂಗ್ರೆಸ್ ಆಗಲಿ ಒಟ್ಟಾರೆಯಾಗಿ ರಾಜ್ಯಕ್ಕೆ ಕೊಟ್ಟ ಸಂದೇಶ ಏನು? ಎಂಬುದು ಸಂಶೋಧನೆಗೆ ಅರ್ಹವಾದ ವಿಚಾರವಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಜಾತಿ ವಿಭಜನೆ, ಧರ್ಮ ವಿಭಜನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೆ ಜೋಡಿಸುವ ಪ್ರಕ್ರಿಯೆ ಸರಿಯಾದ ಹಾದಿಯಲ್ಲಿದೆ ಎಂದು ವ್ಯಾಖ್ಯಾನಿಸಬಹುದಿತ್ತು. ಆದರೆ ಅಂಥ ಯಾವ ಮಾತುಗಳೂ ನಿಮ್ಮಿಂದ ಬರಲೇ ಇಲ್ಲ ಎಂದು ತಿವಿದರು.
ಕಾಂಗ್ರೆಸ್ಗೆ ಸಿದ್ದರಾಮಯ್ಯ, ಡಿಕೆಶಿ ಒಂದಾಗಿಸುವ ಸವಾಲು
ಭಾರತ್ ಜೋಡೋಆ ಪಾದಯಾತ್ರೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸುವ ವಿಚಾರವೇ ನಿಮಗೆ ದೊಡ್ಡ ಸವಾಲಾಗಿ ಪರಿಣಮಿಸಿರಬಹುದು. ಡೋಲು, ನಗಾರಿ ಬಾರಿಸುವುದರಿಂದ ಒಡೆದ ಮನಸುಗಳ ಜೋಡಣೆ ಸಾಧ್ಯವೇ ಎಂದರು.
ಒಂದು ರಾಜಕೀಯ ಪಕ್ಷದ ಪಾದಯಾತ್ರೆಯ ಆಶಯವು ವಿಸ್ತಾರವಾಗಿರಬೇಕು. ಪಾಯದಾತ್ರೆ ಜನಮಾನಸವನ್ನು ಗೆಲ್ಲುವಂತಿರಬೇಕು. ಆದರೆ ಕಾಂಗ್ರೆಸ್ ಪಾದಯಾತ್ರೆ ಮಾತ್ರ ಇಲ್ಲದ ವಿಚಾರವನ್ನು ಸೃಷ್ಟಿಸಲು ಸಲ್ಲದ ಗದ್ದಲ ಹುಟ್ಟು ಹಾಕುದಂತಿದೆ. ನೀವು ಪಾದಯಾತ್ರೆ ಆರಂಭಿಸಿದಾಗಲೇ ರಾಜಸ್ತಾನದಲ್ಲಿ ಕಾಂಗ್ರೆಸ್ ಕಲಹ ಭುಗಿಲೆದ್ದಿತ್ತು. ಅದು ಪಕ್ಷದ ಸದ್ಯೋಭವಿಷ್ಯದ ಸ್ಥಿತಿಗೆ ಹಿಡಿದ ಕೈಗನ್ನಡಿ ಎಂದು ಸುಧಾಕರ್ ಲೇವಡಿ ಮಾಡಿದ್ದಾರೆ.

ಸುಧಾಕರ್ ಅವರ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಮುಖಂಡರು ಹೇಗೆ ಉತ್ತರಿಸುತ್ತಾರೆ, ಪಾದಯಾತ್ರೆಯ ಆಶಯ ಈಡೇರಿಕೆ ಕುರಿತು ವಿಪಕ್ಷ ನಾಯಕರ ಪ್ರತ್ಯುತ್ತರ ದೊರೆಯಬೇಕಿದೆ.












Click it and Unblock the Notifications