ರಾಯಚೂರು: EVM ಪ್ರಾತ್ಯಕ್ಷಿತೆ ವೇಳೆ ಗೊಂದಲ, ಜಿಲ್ಲಾಧಿಕಾರಿಗೆ ಮನವಿ
ರಾಯಚೂರು, ಮಾರ್ಚ್ 28: ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಹಾಗೂ ರಾಜಕೀಯ ಪಕ್ಷಗಳಿಗಾಗಿ ಆಯೋಜಿಸಿದ್ದ ಇವಿಎಂ ಮತದಾನ ಯಂತ್ರದ ಪ್ರಾತ್ಯಕ್ಷಿತೆ ವೇಳೆ ಗೊಂದಲ ಉಂಟಾಗಿ ಇವಿಎಂ ಮೇಲೆ ಗುಮಾನಿ ಪಡುವಂತ ಪರಿಸ್ಥಿತಿ ಉಂಟಾಯಿತು.
ಸ್ಥಳೀಯ ಚುನಾವಣಾ ಅಧಿಕಾರಿಗಳು ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಜಿಲ್ಲೆಯ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕರಿಗೆ ಪ್ರಾತ್ಯಕ್ಷಿತೆ ನೀಡಿದರು. ಆದರೆ ಆ ವೇಳೆ ಇವಿಎಂನಲ್ಲಿ ಒತ್ತಿದ ವೋಟು ಒಂದಾದರೆ ವಿವಿಪ್ಯಾಟ್ ಯಂತ್ರದಲ್ಲಿ ತೋರಿಸಿದ್ದು ಮತ್ತೊಂದು!
ಸಾರ್ವಜನಿಕರೊಬ್ಬರು ಬಹಿರಂಗವಾಗಿ ಪ್ರಾತ್ಯಕ್ಷಿತೆ ಉದ್ದೇಶಕ್ಕೆಂದು ಇವಿಎಂ ನಲ್ಲಿ ದಾಖಲಾಗಿದ್ದ ಕಲ್ಪಿತ ಅಭ್ಯರ್ಥಿಯೊಬ್ಬರಿಗೆ ಮತ ಚಲಾಯಿಸಿದರು. ಆದರೆ ವಿವಿಪ್ಯಾಟ್ ಯಂತ್ರದಲ್ಲಿ ಚಲಾವಣೆಗೊಂಡ ಮತದ ವಿವರ ತಪ್ಪಾಗಿ ತೋರಿಸಿತು.

ಇದರಿಂದ ಅಲ್ಲಿ ನೆರದಿದ್ದ ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರ ಜೊತೆ ಅಧಿಕಾರಿಗಳೂ ಗೊಂದಲಕ್ಕೊಳಗಾದರು. ಆ ನಂತರ ಚುನಾವಣಾ ಅಧಿಕಾರಿಗಳು ವಿವಿಪ್ಯಾಟ್ ಮತ್ತು ಇವಿಎಂ ಗಳನ್ನು ತೆಗೆದು ಪರಿಶೀಲನೆ ನಡೆಸಿ ಯಂತ್ರಗಳಿಗೆ ಹೊಸ ಆದೇಶಗಳನ್ನು ನೀಡಿದ ಬಳಿಕ ಮತ್ತೆ ಬಹಿರಂಗವಾಗಿ ವೋಟಿಂಗ್ ಮಾಡಿದಾಗ ಸರಿಯಾಗಿ ತೋರಿಸಿತು.
ಆದರೆ ಮೊದಲಲ್ಲಿ ಆದ ಗೊಂದಲ ಅಲ್ಲಿದ್ದ ರಾಜಕೀಯ ಮುಖಂಡರಿಗೆ ಮತದಾನ ಯಂತ್ರದ ಬಗ್ಗೆ ಅನುಮಾನ ಮೂಡಿಸಿದ್ದು ಸುಳ್ಳಲ್ಲ.
ಈ ಬಗ್ಗೆ ಸ್ಪಷ್ಟಣೆ ನಿಡಿದ ಅಧಿಕಾರಿಗಳು ಮೊದಲಿಗೆ 60ಕ್ಕೂ ಹೆಚ್ಚು ಜನ ಅಭ್ಯರ್ಥಿಗಳ ಹೆಸರುಗಳನ್ನು ಇವಿಎಂಗೆ ಸೇರಿಸಲಾಗಿತ್ತು ಆದರೆ ವಿವಿಪ್ಯಾಟ್ಗೆ ಇಷ್ಟೊಂದು ಹೆಸರುಗಳ ಆದೇಶ ನೀಡಿರಲಿಲ್ಲ ಹಾಗಾಗಿ ಅದು ತಪ್ಪು ಮಾಹಿತಿ ತೋರಿಸಿತು. ಅದಲ್ಲದೆ ಪ್ರಾತ್ಯಕ್ಷಿತೆಗಾಗಿ ಕೈಗೆ ಸಿಕ್ಕ ವಿವಿಪ್ಯಾಟ್ ಯಂತ್ರವನ್ನು ಸಿಬ್ಬಂದಿ ಹೊತ್ತು ತಂದಿರುವ ಕಾರಣ ಹೀಗೆ ಆಗಿದೆ ಎಂದರು.
ಆದರೆ ಇಷ್ಟಕ್ಕೆ ಸುಮ್ಮನಾಗದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರುದ್ರೇಶ್ ಅವರು ಪ್ರಾತ್ಯಕ್ಷಿತೆಯಲ್ಲಿ ಆದ ಗೊಂದಲ ಮತ್ತು ಪ್ರಾತ್ಯಕ್ಷಿತೆ ನಂತರ ಉಂಟಾದ ಅನುಮಾನಗಳ ಬಗ್ಗೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ಪಕ್ಷದ ಮೂಲಕ ವರದಿ ನೀಡಿ, ಪಾರದರ್ಶಕ ಚುನಾವಣೆ ಮಾಡುವಂತೆ ಮನವಿ ಮಾಡಿದರು.












Click it and Unblock the Notifications