ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದ ಸಿದ್ದು, ರಾಜ್ಯದಲ್ಲಿ ಸಿಎಂ ಇರುವುದೇ ಡೌಟ್ ಎಂದ ಎಚ್ಡಿಕೆ
ಬೆಂಗಳೂರು, ಮಾ.05: ರಾಜ್ಯದಲ್ಲಿ ಕೋಮು ವಿಚಾರಗಳು ದಿನೇ ದಿನೇ ವಿಕೋಪಕ್ಕೆ ಹೋಗುತ್ತಿದ್ದು, ಪ್ರತಿಪಕ್ಷಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯದಕ್ಷತೆಯನ್ನು ಪ್ರಶ್ನೆ ಮಾಡಿವೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನಿಯಂತ್ರಣ ಮಾಡದ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ಹೇಳಿದರೆ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ ಎಂಬುದೇ ಡೌಟ್ ಎಂದು ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ದೇವಸ್ಥಾನ, ಮಸೀದಿ, ಚರ್ಚು ಹೀಗೆ ಎಲ್ಲಾ ಕಡೆ ಧ್ವನಿ ವರ್ಧಕಗಳನ್ನು ಹಾಕುತ್ತಾರೆ, ಇದರಿಂದ ಯಾರಿಗೆ ತೊಂದರೆ ಆಗಿದೆ? ಚುನಾವಣಾ ವರ್ಷ ಎಂದು ಈ ರೀತಿ ಬೇಕಂತಲೇ ಕ್ಯಾತೆ ತೆಗೆಯುತ್ತಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಇವೆಲ್ಲ ಸಮಾಜದ ಶಾಂತಿ, ಸಾಮರಸ್ಯ ಹಾಳುಮಾಡುವ ಪ್ರಯತ್ನಗಳು. ಇಂಥಾ ಘಟನೆಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಾಗಲ್ಲ. ರಾಜ್ಯಕ್ಕೆ ಯಾವ ಬಂಡವಾಳ ಹೂಡಿಕೆದಾರರು ಬರಲ್ಲ, ಉದ್ಯೋಗ ಸೃಷ್ಟಿಯಾಗಲ್ಲ, ನಿರುದ್ಯೋಗ ಸಮಸ್ಯೆ ಹೋಗಲ್ಲ, ರಾಜ್ಯದ ಜಿಡಿಪಿ ಬೆಳವಣಿಗೆಯಾಗಲ್ಲ ಎಂದರು.
'ಈ ಎಲ್ಲಾ ಬೆಳವಣಿಗೆಗಳು ಸರ್ಕಾರದ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ. ಮುಖ್ಯಮಂತ್ರಿಗಳು ಮೌನವಾಗಿರುವುದಲ್ಲ, ಎಲ್ಲದಕ್ಕೂ ಕುಮ್ಮಕ್ಕು ನೀಡುತ್ತಿದ್ದಾರೆ. ಆರ್.ಎಸ್.ಎಸ್ ಮತ್ತು ಭಜರಂಗದಳ ಸರ್ಕಾರಕ್ಕೆ ಗೊತ್ತಿಲ್ಲದೆ ಇಷ್ಟೆಲ್ಲಾ ಮಾಡುತ್ತಾ? ಇದನ್ನು ಸರ್ಕಾರ ಹತ್ತಿಕ್ಕಬೇಕು, ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಮಾಜದ ಕೋಮು ಸಾಮರಸ್ಯ ಹಾಳುಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಇದು ನಿಮಗೆ ಮುಂದೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಲು ಬಯಸುತ್ತೇನೆ' ಎಂದರು.

ದಿನೇದಿನೆ ಇಷ್ಟೊಂದು ಅಶಾಂತಿ, ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗುತ್ತಿದ್ದರೂ ಈ ಬಗ್ಗೆ ಮಾತನಾಡದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದು ಎಲ್ಲ ಸಮಾಜ ವಿರೋಧಿ ಕೃತ್ಯಗಳಿಗೆ ಸಹಮತವೋ ಅಥವಾ ಕಾನೂನು ಕ್ರಮ ಜರುಗಿಸಲಾಗದ ಅಸಹಾಯಕತೆಯೋ? ರಾಜ್ಯದ ಹಿತಾಸಕ್ತಿ ಮತ್ತು ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ಹೋಗುವುದು ಒಳಿತು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಇರುವುದೇ ಡೌಟ್:
ಕೆಲವರು ಹೋಗುತ್ತಿರುವ ಮಾರ್ಗ ನೋಡಿದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರಾ? ಸರ್ಕಾರ ಇದೆಯಾ? ಎಂಬುದೇ ಡೌಟ್ ಆಗುತ್ತಿದೆ. ಯಾರೋ ಸರ್ಕಾರ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
'ತೆಲಂಗಾಣ ಸಚಿವರೊಬ್ಬರು ಇಲ್ಲಿನ ಹೂಡಿಕೆದಾರರನ್ನು ಆಂಧ್ರಪ್ರದೇಶದಕ್ಕೆ ಆಹ್ವಾನಿಸಿರುವುದರಲ್ಲಿ ತಪ್ಪಿಲ್ಲ. ಮೊದಲು ನಿಮ್ಮ ಮನೆ ಸರಿಮಾಡಿಕೊಳ್ಳಿ. ನಿಮ್ಮ ಮನೆ ನೆಟ್ಟಗೆ ಇಟ್ಟುಕೊಳ್ಳಲು ನಿಮಗೆ ಬರುವುದಿಲ್ಲ ಎಂದರೆ ಬೇರೆಯವರು ಕಾಯುತ್ತಿರುತ್ತಾರೆ' ಎಂದು ಹೇಳಿದ್ದಾರೆ.
ನಾನು ಮಾತನಾಡುತ್ತಿರುವುದು ಯಾವುದೂ ಆಧಾರ ರಹಿತ ಇಲ್ಲ. ಸರ್ಕಾರಕ್ಕೆ ಬೆನ್ನುಮೂಳೆ ಇದ್ದರೆ ಈಗ ರಾಜ್ಯದಲ್ಲಿ ನಡೆಯುತ್ತಿರುವುದನ್ನು ತಡೆಗಟ್ಟಬೇಕು. ರಾಜ್ಯದ ಆರೂವರೆ ಕೋಟಿ ಜನರನ್ನು ರಕ್ಷಿಸುವುದಕ್ಕೆ ಸರಕಾರ ನಡೆಸಬೇಕು ಹೊರತು, ಯಾರನ್ನೋ ಮೆಚ್ಚಿಸಲು ಅಲ್ಲ ಎಂದು ಹೇಳಿದರು.
Recommended Video













Click it and Unblock the Notifications