ಸರ್ಕಾರದ ವಿರುದ್ಧ ಕಮಿಷನ್ ಆರೋಪ: ಗುತ್ತಿಗೆದಾರರ ಸಂಘದಿಂದ ಮಹತ್ವದ ಸುದ್ದಿಗೋಷ್ಠಿ
ಬೆಂಗಳೂರು, ಆಗಸ್ಟ್ 11: ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡುತ್ತಾ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ತಮ್ಮ ಮೇಲಿನ ಕಮಿಷನ್ ಆರೋಪ ಮುಳುವಾಗುತ್ತಿದೆ. ಗುತ್ತಿಗೆದಾರರು ಮಾಡಿದ್ದ 40 ಪರ್ಸೆಂಟ್ ಕಮಿಷನ್ ಅಸ್ತ್ರವನ್ನು ಬಳಕೆ ಮಾಡಿಕೊಂಡು ಆಡಳಿತ ಚುಕ್ಕಾಣಿ ಹಿಡಿದಿರುವ ಕೈ ಪಾಳಯಕ್ಕೆ ಅದೇ ಗುತ್ತಿಗೆದಾರರು ಶಾಕ್ ಮೇಲೆ ಶಾಕ್ ಕೊಡುತ್ತಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಇಂದು(ಆಗಸ್ಟ್ 11) ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲು ಮುಂದಾಗಿದ್ದಾರೆ. ಇಂದು ರಾಜ್ಯ ಗುತ್ತಿಗೆದಾರರ ಸಂಘದಿಂದ ಬೆಳಗ್ಗೆ 11.30 ಕ್ಕೆ ಸುದ್ದಿಗೋಷ್ಠಿಗೆ ಸಮಯ ನಿಗಧಿಯಾಗಿದೆ. ಈ ಹಿಂದೆ ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರು ಈಗ ಮತ್ತೆ ಸುದ್ದಿಗೋಷ್ಠಿ ಕರೆದಿದ್ದು ಸರ್ಕಾರಕ್ಕೆ ಕಮಿಷನ್ ಆರೋಪ ಕಂಟಕ ಆಗುವ ಸಾಧ್ಯತೆ ಇದೆ.

ಈ ಹಿಂದೆ ಗುತ್ತಿಗೆದಾರರ ಬೆಂಬಲಕ್ಕೆ ಕಾಂಗ್ರೆಸ್ ನಿಂತಿತ್ತು. ಇದೀಗ ಕಾಂಗ್ರೆಸ್ ವಿರುದ್ಧವೇ ಕಮಿಷನ್ ಆರೋಪವನ್ನು ಬಿಬಿಎಂಪಿ ಗುತ್ತಿಗೆದಾರರು ಮಾಡುತ್ತಿದ್ದು ಇವತ್ತಿನ ರಾಜ್ಯ ಗುತ್ತಿಗೆದಾರರ ಸಂಘದ ಸುದ್ಧಿಗೋಷ್ಠಿ ಸಾಕಷ್ಟು ಮಹತ್ವದ್ದಾಗಿದೆ. ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡಿದ್ದ ಕೆಂಪಣ್ಣ ಅವರಿಂದಲೇ ಇವತ್ತು ಕೂಡ ಸುದ್ದಿಗೋಷ್ಠಿ ನಡೆಯಲಿದ್ದು, ಕಾಂಗ್ರೆಸ್ ಸರ್ಕಾರದ ಕಮಿಷನ್ ಆರೋಪದ ಬಗ್ಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಕಮಿಷನ್ ವಾರ್ ಮಧ್ಯೆ ಕೆಂಪಣ್ಣ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರೆಸ್ ಮೀಟ್ ಮಹತ್ವದಾಗಿದೆ.
ಈಗಾಗಲೇ ಗುತ್ತಿಗೆದಾರ ಮಂಜುನಾಥ್ ಬಣ ರಾಜ್ಯಪಾಲರವರೆಗೂ ವಿಚಾರ ಮುಟ್ಟಿಸಿ ಗಮನ ಸೆಳೆಯುವ ಪ್ರಯತ್ನ ಮಾಡಿದೆ. ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರ ನಾಯಕರ ಸೆಳೆಯುವಲ್ಲಿ ಕೂಡ ಪ್ರಯತ್ನ ಮಾಡಿದೆ. ಇದು ಈಗ ಬಿಸಿ ಬಿಸಿ ಚರ್ಚೆಗೆ ಕಾರಣ ಆಗುತ್ತಿದೆ. ಅದರ ಜೊತೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೇರಿ ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿ ಮಂಜುನಾಥ್ ನಿಯೋಗ ಮನವಿ ಮಾಡಿದೆ.
ಅದರ ಜೊತೆಗೆ ಗುತ್ತಿಗೆದಾರರೊಬ್ಬರು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಕೂಡ ನೇರ ಅರೋಪ ಮಾಡಿದ್ದು, ಕಮಿಷನ್ ಕೇಳಿಲ್ಲ ಅಂತ ನೇರವಾಗಿ ಅಜ್ಜನ ಮೇಲೆ ಆಣೆ ಪ್ರಮಾಣ ಮಾಡುವಂತೆ ಕೂಡ ಬಹಿರಂಗ ಸವಾಲು ಹಾಕಿರುವ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.
ಇದೆಲ್ಲವುದರ ಮಧ್ಯೆ ಇವತ್ತು ಬಿಜೆಪಿ ಪತನಕ್ಕೆ ಬಹುಮುಖ್ಯ ಕಾರಣ ಆಗಿರುವ ಕಮಿಷನ್ ಆರೋಪ ಮಾಡಿರುವ ಅದೇ ಕೆಂಪಣ್ಣ ಬಣ ಈಗ ಕಾಂಗ್ರೆಸ್ ವಿರುದ್ಧ ಬೆಂಕಿ ಉಗಳಲು ಸಿದ್ಧವಾಗಿದ್ದು, 11.30 ಕ್ಕೆ ವಿಚಾರ ಸಂಪೂರ್ಣ ಮಾಹಿತಿ ತಿಳಿದು ಬರಲಿದೆ. ಈ ಸುದ್ದಿಗೋಷ್ಠಿ ರಾಜ್ಯ ರಾಜಕೀಯದ ಇನ್ಯಾವ ತಿರುವುಗಳಿಗೆ ಕಾರಣವಾಗಲಿದೆಯೇ ಎಂದು ಕಾದು ನೋಡಬೇಕಿದೆ.












Click it and Unblock the Notifications