ಡಿಕೆ ಶಿವಕುಮಾರ್ ಒಳಗೊಳಗೆ ಕುದಿಯುವಂತೆ ಮಾಡಿತಾ ಬಿಜೆಪಿ ಸರ್ಕಾರ?
ಬೆಂಗಳೂರು, ಮೇ 19: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಕೊರೊನಾ ಲಾಕ್ಡೌನ್ ಪರಿಣಾಮವಾಗಿ ಇನ್ನೂ ಅಧಿಕೃತವಾಗಿ ಪದಗ್ರಹಣ ಮಾಡಿಲ್ಲ.
Recommended Video
ಮೇ 31 ಕ್ಕೆ ಅದ್ದೂರಿಯಾಗಿ ಪದಗ್ರಹಣ ಮಾಡುವ ಮುನ್ಸೂಚನೆ ಕೊಟ್ಟಿದ್ದರು. ಆದರೆ, ಈ ವಿಚಾರದಲ್ಲಿ ಅವರು ರಾಜ್ಯ ಸರ್ಕಾರದ ಮೇಲೆ ಮುನಿಸಿಕೊಂಡಂತೆ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಮೇ 31 ರಂದು ಅಧಿಕಾರ ಸ್ವೀಕರಿಸುವುದನ್ನು ರದ್ದು ಮಾಡಿದ್ದೇನೆ. ದಿನಾಂಕ ನಿಗದಿ ಮಾಡಿ ಎಲ್ಲರಿಗೂ ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ಅನಿವಾರ್ಯವಾಗಿ ಪ್ರಮಾಣವಚನ ರದ್ದು ಮಾಡಿರುವ ಅವರು, ಪರೋಕ್ಷವಾಗಿ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಮೇ 31 ಯಾಕೆ?
ಲಾಕ್ಡೌನ್ 4.0 ನಲ್ಲಿ ವಿನಾಯಿತಿ ನೀಡಿದ್ದರೂ ಭಾನುವಾರ ಸಂಪೂರ್ಣ ಲಾಕ್ಡೌನ್ ಇರುತ್ತದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಮೇ 31 ರವರೆಗೆ ಈ ನಿಯಮ ಜಾರಿಯಿರಲಿದೆ. ಇದರಿಂದ, ಸ್ವಾಮೀಜಿಯೊಬ್ಬರ ಸಲಹೆ ಮೇರೆಗೆ ಮೇ 31 ರಂದು ಭಾನುವಾರ ಪದಗ್ರಹಣ ಮಾಡಲು ಉತ್ಸುಕರಾಗಿದ್ದ ಡಿಕೆಶಿ ಅವರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.

ಯಡಿಯೂರಪ್ಪನವರು ಎಲ್ಲ ದಿನ ಕೆಲಸ ಮಾಡಬಹುದು
''ಪಾಪ ಯಡಿಯೂರಪ್ಪನವರು ಎಲ್ಲ ದಿನ ಕೆಲಸ ಮಾಡಬಹುದು, ಆದರೆ, ಎಲ್ಲ ಭಾನುವಾರ ಮಾತ್ರ ಕರ್ಫ್ಯೂ ಜಾರಿ ಯಾವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ನಾವು ಕಾನೂನು ಉಲ್ಲಂಘನೆ ಮಾಡಿ ಈ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಕಾನೂನಿಗೆ ನಾವೆಲ್ಲರೂ ಗೌರವ ಕೊಡಬೇಕಾಗುತ್ತದೆ. ಹೀಗಾಗಿ 31ರಂದು ಈ ಕಾರ್ಯಕ್ರಮ ಮಾಡುವುದಿಲ್ಲ. ಲಾಕ್ ಡೌನ್ ತೆರವಾದ ನಂತರ ಒಂದು ದಿನ ನಾನು ಆ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ'' ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಡಿಕೆಶಿ ತಿವಿದಿದ್ದಾರೆ.

ಅಧಿಕೃತವಾಗಿ ಪ್ರಕಟಿಸಲಿಲ್ಲ
''ನನ್ನ ಕಾರ್ಯಕ್ರಮ ಕೇವಲ ಡಿಕೆ ಶಿವಕುಮಾರ್ ಕಾರ್ಯಕ್ರಮವಲ್ಲ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಾರ್ಯಕ್ರಮ. ಕೆಲವು ಮಾಧ್ಯಮಗಳಲ್ಲಿ ನಾನು ಇದೇ 31ರಂದು ಅಧಿಕಾರ ಸ್ವೀಕರಿಸುತ್ತೇನೆ ಎಂದು ಪ್ರಕಟಿಸಿದ್ದನ್ನು ನಾನು ನೋಡಿದ್ದೇನೆ. ನಾನು ಭಾನುವಾರದಂದು ಆ ಕಾರ್ಯಕ್ರಮ ನಡೆಸಿದರೆ ಸಾರಿಗೆ ಸೇರಿದಂತೆ ಇತರೆ ವಿಚಾರವಾಗಿ ಸಮಸ್ಯೆ ಆಗಬಾರದು ಎಂದು ಚರ್ಚಿಸಿದ್ದೆ. ಆದರೆ ಅಧಿಕೃತವಾಗಿ ಪ್ರಕಟಿಸಲಿಲ್ಲ'' ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ
ಈ ಬಾರಿ ಒಂದು ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಈ ಕಾರ್ಯಕ್ರಮದ ರೂಪುರೇಷೆ ತಿಳಿಸುತ್ತೇವೆ. ಪ್ರತಿ ಗ್ರಾಮ ಪಂಚಾಯ್ತಿ, ವಾರ್ಡ್ ನಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ನಾನು ಇಲ್ಲಿ ಧ್ವಜ ಸ್ವೀಕರಿಸಿ, ಜ್ಯೋತಿ ಹಚ್ಚಿದಾಗಿನಿಂದ ಪ್ರತಿ ಪಂಚಾಯ್ತಿ, ವಾರ್ಡ್ ನಲ್ಲಿ ಸುಮಾರು 7200 ಕಡೆಗಳಲ್ಲಿ ಈ ಕಾರ್ಯಕ್ರಮ ಮಾಡುತ್ತೇವೆ. ಪ್ರತಿ ಕಡೆ ಎರಡು ಟಿವಿ ಇಟ್ಟು, ಮಾಧ್ಯಮಗಳ ಮನವಿ ಮಾಡಿ ಈ ಕಾರ್ಯಕ್ರಮ ನೇರಪ್ರಸಾರಕ್ಕೆ ಮಾಡಲಾಗುವುದು. ಈ ವೇಳೆ ಸಂವಿಧಾನದ ಪೀಠಿಕೆ ಓದಿ, ಪ್ರತಿಜ್ಞೆ ಸ್ವೀಕಾರ ಮಾಡಲಾಗುವುದು ಎಂದು ಪ್ರಮಾಣವಚನದ ರೂಪುರೇಷೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications