ಸಿಎಂ ಯಡಿಯೂರಪ್ಪನವರ ಈ ಹೇಳಿಕೆಯಲ್ಲಿ ಏನಿರಬಹುದು 'ಗೂಡಾರ್ಥ'?
ವಿಧಾನಮಂಡಲದ ಬಜೆಟ್ ಅಧಿವೇಶನದ ಮೊದಲ ದಿನದ ಕಲಾಪದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅನೌಪಚಾರಿಕವಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ, ಹಲವು ವಿಚಾರದ ಬಗ್ಗೆ ಯಡಿಯೂರಪ್ಪನವರು ಮಾತನಾಡಿದರು.
Recommended Video
ಅಧಿವೇಶನದ ಮೊದಲ ದಿನ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಆಡಿದ ಆಕ್ಷೇಪಾರ್ಹ ಮಾತಿನಿಂದ, ಬಹುತೇಕ ಕಲಾಪ ಇದಕ್ಕೆ ಬಲಿಯಾಯಿತು.
ಯತ್ನಾಳ್ ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್, ತನ್ನ ಎಲ್ಲಾ ಶಾಸಕರಿಗೆ ವಿಪ್ ಜಾರಿ ಮಾಡಿದೆ. ಸೋಮವಾರದ (ಮಾ 2) ಹಲವು ಶಾಸಕರು ಗೈರಾಗಿದ್ದರಿಂದ, ವಿಪ್ ಜಾರಿ ಮಾಡಲಾಗಿದೆ.
ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ಚರ್ಚೆ ನಡೆಯುತ್ತಾ?
ಸೋಮವಾರ ಮಾತನಾಡುತ್ತಿದ್ದ ಯಡಿಯೂರಪ್ಪ, ಸದ್ಯದ ರಾಜ್ಯದ ಹಣಕಾಸು ಪರಿಸ್ಥಿತಿ, ವರಿಷ್ಠರು, ಉಪಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದರು. ಆದರೆ, ಅವರು ನೀಡಿದ ಒಂದು ಹೇಳಿಕೆ, ರಾಜ್ಯ ಬಿಜೆಪಿಯಲ್ಲಿ ಮುಂದಿನ ದಿನಗಳಲ್ಲಿ ಆಗುವ ಬದಲಾವಣೆಯ ಬಗ್ಗೆ ಮಾತನಾಡಿದರೇ ಎಂದು ಪ್ರಶ್ನಿಸುವಂತಿದೆ:
ರಾಜ್ಯಕ್ಕೆ ಮೂವರು ಉಪಮುಖ್ಯಮಂತ್ರಿಗಳು
ರಾಜ್ಯಕ್ಕೆ ಮೂವರು ಉಪಮುಖ್ಯಮಂತ್ರಿಗಳ ಆಯ್ಕೆಯ ಬಗ್ಗೆ ಮಾತನಾಡಿದ ಯಡಿಯೂರಪ್ಪ, "ವರಿಷ್ಠರು ನನ್ನ ಬಳಿ ಚರ್ಚಿಸಿ, ನನ್ನ ಸಲಹೆಯನ್ನು ಪಡೆದೇ ಮೂರು ಹುದ್ದೆಯನ್ನು ಸೃಷ್ಟಿಸಿದರು" ಎಂದು ಯಡಿಯೂರಪ್ಪ ಹೇಳಿದ್ದಾರೆ. ಡಿಸಿಎಂ ಹುದ್ದೆಯ ವಿಚಾರ ನನಗೆ ತಿಳಿದಿರಲಿಲ್ಲ ಎಂದು ಮುಖ್ಯಮಂತ್ರಿಗಳು ಹಿಂದೊಮ್ಮೆ ಹೇಳಿದ್ದರು.
ಪುತ್ರ ವಿಜಯೇಂದ್ರನ ಕಾರ್ಯಶೈಲಿ ವರಿಷ್ಠರಿಗೆ ಇಷ್ಟವಾಗಿದೆ
"ನನ್ನ ಪುತ್ರ ವಿಜಯೇಂದ್ರನ ಕಾರ್ಯಶೈಲಿ ವರಿಷ್ಠರಿಗೆ ಇಷ್ಟವಾಗಿದೆ. ಪಕ್ಷ ಸಂಘಟನೆಗೆ ಆತ ರಾಜ್ಯ ಸುತ್ತುತ್ತಿದ್ದಾನೆ. ಯಾವುದೇ ಮುಖಂಡನಾಗಿರಲಿ, ಅವರು ತಮ್ಮ ಸ್ವಂತ ವರ್ಚಿಸ್ಸಿನಿಂದ ಜನರ ವಿಶ್ವಾಸಗಳಿಸಬೇಕು. ಹಾಗೇ ಮಾಡಿದರೆ ತಾವಾಗಿಯೇ ಬೆಳೆಯುತ್ತಾರೆ" ಎಂದು ಮುಖ್ಯಮಂತ್ರಿಗಳು ಪುತ್ರನ ಬಗ್ಗೆ ಹೆಮ್ಮೆಯ ಮಾತನ್ನಾಡಿದ್ದಾರೆ.
ಯತ್ನಾಳ್ ವಿರುದ್ಧ ಹೋರಾಟ; ಕಾಂಗ್ರೆಸ್ ಶಾಸಕರಿಗೆ ವಿಪ್ ಜಾರಿ
ಕೇಂದ್ರದಿಂದ ಇನ್ನೂ ಹದಿಮೂರು ಸಾವಿರ ಕೋಟಿ ತೆರಿಗೆ ಹಣ ಬರಬೇಕಿದೆ
"ರಾಜ್ಯದ ಹಣಕಾಸು ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ" ಎಂದು ಒಪ್ಪಿಕೊಂಡಿರುವ ಯಡಿಯೂರಪ್ಪ, "ಕೇಂದ್ರದಿಂದ ಇನ್ನೂ ಹದಿಮೂರು ಸಾವಿರ ಕೋಟಿ ತೆರಿಗೆ ಹಣ ಬರಬೇಕಿದೆ. ಮಾರ್ಚ್ ಆರರಂದು ನಿಯೋಗದೊಂದಿಗೆ ದೆಹಲಿಗೆ ತೆರಳಲು ಚಿಂತನೆ ನಡೆಸಿದ್ದೇನೆ" ಎಂದು ಯಡಿಯೂರಪ್ಪ ಹೇಳಿದರು.
ಎಷ್ಟು ದಿನಾಂತ ನಾನೊಬ್ಬನೇ ಇರಲು ಸಾಧ್ಯ. ಪಕ್ಷದಲ್ಲಿ ನನ್ನ ನಂತರವೂ ಬೇರೆಯವರು ಇದ್ದೇ ಇರುತ್ತಾರೆ.
"75ವರ್ಷದ ನಂತರವೂ ಜನರ ಸೇವೆ ಮಾಡಲು ವರಿಷ್ಠರು ನನಗೆ ಅವಕಾಶವನ್ನು ನೀಡಿದ್ದಾರೆ. ಎಷ್ಟು ದಿನಾಂತ ನಾನೊಬ್ಬನೇ ಇರಲು ಸಾಧ್ಯ. ಪಕ್ಷದಲ್ಲಿ ನನ್ನ ನಂತರವೂ ಬೇರೆಯವರು ಇದ್ದೇ ಇರುತ್ತಾರೆ. ನಾನೇ ಆಗಲಿ, ಇನ್ಯಾರೇ ಆಗಲಿ. ಪಕ್ಷದಿಂದ ನಾವೇ ಹೊರತು, ನಮ್ಮಿಂದ ಪಕ್ಷವಲ್ಲ" ಎಂದು ಯಡಿಯೂರಪ್ಪ ಹೇಳಿರುವುದು ಹಲವು ಪ್ರಶ್ನೆಯನ್ನು ಹುಟ್ಟು ಹಾಕುವಂತೆ ಮಾಡಿದೆ.