ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲಿಗೆ ಸುಮ್ಮನೆ ಕುಳಿತ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ಮಾ. 15: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸವಾಲಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಕ್ಕು ಕುಳಿತ ಪ್ರಸಂಗ ವಿಧಾನಸಭೆಯಲ್ಲಿ ನಡೆದಿದೆ.
ಭೋಜನ ವಿರಾಮದ ಬಳಿಕ ಬಜೆಟ್ ಮೇಲೆ ಸಿದ್ದರಾಮಯ್ಯ ಚರ್ಚೆಯನ್ನು ಮುಂದುವರೆಸಿದ್ದರು. ಆಗ ಮಧ್ಯೆ ಪ್ರವೇಶ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸಿದ್ದರಾಮಯ್ಯನವರೇ ನಾವು ಉತ್ತಮ ಬಜೆಟ್ ಕೊಟ್ಟಿದ್ದೇವೆ. ಜೊತೆಗೆ ಮಹಿಳೆಯರ ಪರವಾದ ಬಜೆಟ್ನ್ನೂ ಕೊಟ್ಟಿದ್ದೇವೆ. ಈಗ ಮೂರು ಉಪಚುನಾವಣೆ ಬರುತ್ತವೆ. ಆಗ ನೀವು ಬನ್ನಿ, ನಾವು ಬರುತ್ತೇವೆ. ನಾವು ಮೂರೂ ಸೀಟು ಗೆಲ್ಲದಿದ್ದರೆ ಕೇಳಿ ಎಂದು ಸಿದ್ದರಾಮಯ್ಯರಿಗೆ ಸಿಎಂ ಯಡಿಯೂರಪ್ಪ ಅವರು ಸವಾಲು ಹಾಕಿದರು.
ಸಿಎಂ ಯಡಿಯೂರಪ್ಪ ಅವರ ಸವಾಲಿಗೆ ಸಿದ್ದರಾಮಯ್ಯ ಅವರು, ಯಡಿಯೂರಪ್ಪನವರೇ ನೀವು ಬೈ ಎಲೆಕ್ಷನ್ ಅಲ್ಲ, ನಾವು ಬಹಳಷ್ಟು ಉಪ ಚುನಾವಣೆ ನೋಡಿದ್ದೇವೆ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ. ಜನರ ಮುಂದೆ ಹೋಗೋಣ. ಜನರು ಯಾರ ಕೈಹಿಡಿಯುತ್ತಾರೆ ಅನ್ನೋದನ್ನು ನೋಡೋಣ ಎಂದು ಪಾಟಿ ಸವಾಲು ಹಾಕಿದರು. ಆಗ ಯಡಿಯೂರಪ್ಪ ಅವರು ಏನೂ ಮಾತನಾಡದೇ ಸುಮ್ಮನೆ ಕುಳಿತಿದ್ದು ಗಮನ ಸೆಳೆಯಿತು.

ಆಗ ಮಧ್ಯೆ ಪ್ರವೇಶ ಮಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಈಗಾಗಲೇ ಹಲವು ಚುನಾವಣೆ ನಡೆದಿವೆ. ಒಂದೂ ಸ್ಥಾನವನ್ನು ನೀವು ಗೆಲ್ಲೋದಕ್ಕೆ ಆಗಿಲ್ಲ. ಈಗ ಸಾರ್ವತ್ರಿಕ ಚುನಾವಣೆ ಬಂದರೂ ನಾವೇ ಗೆಲ್ಲುತ್ತೇವೆ ಎಂದು ಸಿದ್ದರಾಮಯ್ಯರಿಗೆ ತಿರುಗೇಟು ಕೊಡಲು ಪ್ರಯತ್ನಿಸಿದರು.

ಆಗ ಈಶ್ವರಪ್ಪ ಅವರಿಗೆ ತಮ್ಮ ಮಾತಿನ ಮೂಲಕ ಟಾಂಗ್ ಕೊಟ್ಟ ಮಾಜಿ ಸಚಿವ ಕೆಜೆ ಜಾರ್ಜ್ ಅವರು, ನೀವು ನಿಜವಾದ ಜನ ಬೆಂಬಲದ ಸರ್ಕಾರ ರಚಿಸಿಲ್ಲ. ನಿಮ್ಮದು ಆಪರೇಷನ್ ಕಮಲದಿಂದ ಬಂದಿರುವ ಸರ್ಕಾರ. ಅದಕ್ಕೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ. ಅಲ್ಲಿ ನೀವು ಗೆದ್ದು ನಿಮ್ಮ ಸಾಮರ್ಥ್ಯ ತೋರಿಸಿ ಎಂದು ಶಾಸಕ ಜಾರ್ಜ್ ಅವರು ಈಶ್ವರಪ್ಪ ಅವರಿಗೆ ಸವಾಲು ಹಾಕಿದರು.












Click it and Unblock the Notifications