ರಾಜ್ಯದ ಜನತೆ ಗುಡ್ ನ್ಯೂಸ್: ‘ಗೃಹ ಆರೋಗ್ಯ ಯೋಜನೆ’: ಇದರ ಉಪಯೋಗ ಏನು ? ಇಲ್ಲಿದೆ ವಿವರ
ಬೆಂಗಳೂರು, ಅಕ್ಟೋಬರ್ 25: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನರು ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ, ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆ, ರಾಜ್ಯದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ. ರಾಜ್ಯ ಸರ್ಕಾರದ ಮಹತ್ವದ ಗೃಹ ಆರೋಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.
ಆರೋಗ್ಯ ಯೋಜನೆ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಇದೊಂದು ದೂರದೃಷ್ಟಿಯ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶದ ಜನರ ಜೀವ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು. ರಾಜ್ಯದಲ್ಲಿ ಶೇಕಡಾ 26.9% ರಷ್ಟು ರಕ್ತದೊತ್ತಡ, ಶೇಕಡಾ 15.6% ರಷ್ಟು ಮಧುಮೇಹ ರೋಗಗಳಿಂದ ಜನರು ಬಳಲುತ್ತಿದ್ದು, ಇದರಿಂದ ಉಂಟುಗುತ್ತಿರುವ ಮರಣ ಹಾಗೂ ಅನಾರೋಗ್ಯ ತೊಡಕುಗಳನ್ನ ತಡೆಗಟ್ಟವುದು ಗೃಹ ಆರೋಗ್ಯ ಯೋಜನೆಯ ಮುಖ್ಯ ಗುರಿಯಾಗಿದೆ.

ರಾಜ್ಯದಲ್ಲಿ ಶೇಕಡಾ 11.5 % ರಷ್ಟು ಬಾಯಿ ಕ್ಯಾನ್ಸರ್; ಶೇಕಡಾ 26 % ರಷ್ಟು ಸ್ತನ ಕ್ಯಾನ್ಸರ್ ಹಾಗೂ ಶೇಕಡಾ 18.3 % ರಷ್ಟು ಗರ್ಭಕಂಠದ ಕ್ಯಾನ್ಸರ್ ರೋಗಗಳಿಂದ ಜನರು ತತ್ತರಿಸುತ್ತಿದ್ದು, ಈ ರೋಗಗಳಿಗೂ ಪರಿಹಾರ ಒದಗಿಸಲು ಗೃಹ ಆರೋಗ್ಯ ಯೋಜನೆಯಲ್ಲಿ ರೂಪ ರೇಷೆಗಳನ್ನ ಸಿದ್ಧಪಡಿಸಲಾಗಿದೆ. ಯೋಜನೆಯ ಮುಖಾಂತರ ಜನರನ್ನ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಿ ಔಷಧಿಗಳನ್ನ ಪೂರೈಸುವುದಷ್ಟೇ ಅಲ್ಲ. ದೀರ್ಘಾವಧಿಯಲ್ಲಿ ಈ ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಕಿಡ್ನಿ ವೈಫಲ್ಯ, ಹೃದಯಾಘಾತ, ಸ್ಟ್ರೋಕ್ ಗಳಂತಹ ಜೀವಪಾಯ ರೋಗಗಳಿಂದ ಜನರನ್ನ ರಕ್ಷಿಸಬಹುದಾಗಿದೆ. ಹೀಗಾಗಿ ಗೃಹ ಆರೋಗ್ಯ ಯೋಜನೆ ನಮ್ಮ ಜನರ ಜೀವ ರಕ್ಷಣೆಯಲ್ಲಿ ಪ್ರಮುಖವಾಗಿದ್ದು, ದೇಶದಲ್ಲೇ ಈ ರೀತಿಯ ದೂರದೃಷ್ಟಿಯ ಯೋಜನೆಯನ್ನ ಜಾರಿಗೊಳಿಸುತ್ತಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕೋಲಾರ ಜಿಲ್ಲೆಯಿಂದ ಯೋಜನೆಯನ್ನ ಪ್ರಾರಂಭಿಸಲಾಗುತ್ತಿದ್ದು, ಎರಡು ತಿಂಗಳ ಬಳಿಕ ರಾಜ್ಯಾದ್ಯಂತ ಯೋಜನೆ ಚಾಲ್ತಿಗೆ ಬರಲಿದೆ. ಯೋಜನೆಯನ್ನ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಆರೋಗ್ಯ ಇಲಾಖೆ ಸಿಬ್ಬಂದಿಗಳು ಪಣ ತೊಟ್ಟಿದ್ದಾರೆ. ವಿಶೇಷವಾಗಿ ನಮ್ಮ ಗ್ರಾಮೀಣ ಪ್ರದೇಶದ ಜನರು ಅಸಾಂಕ್ರಾಮಿಕ ರೋಗಗಳ ತಪಾಸಣೆಗೆ ನಿರ್ಲಕ್ಷ್ಯೆ ವಹಿಸುತ್ತಿದ್ದಾರೆ. ಇದೀಗ ಆರೋಗ್ಯ ಇಲಾಖೆಯನ್ನೇ ಜನರ ಬಳಿಗೆ ಕಳಿಸುತ್ತಿದ್ದು, ನಮ್ಮ ಜನರು ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಗೃಹ ಆರೋಗ್ಯ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂದು ದೇಶದಲ್ಲಿ ಶೇ 25 ರಷ್ಟು ರಕ್ತದೊತ್ತಡ ಹಾಗೂ ಶೇ 15.6 ರಷ್ಟು ಮಧುಮೇಹದಿಂದ ಜನರು ಬಲಳುತ್ತಿದ್ದಾರೆ. ಈ ಸಂಖ್ಯೆ ಹೆಚ್ಚು ಇರಬಹುದು. ಏಕೆಂದರೆ ಬಹುತೇಕ ನಮ್ಮ ಗ್ರಾಮೀಣ ಭಾಗದ ಜನರು ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಆರೋಗ್ಯ ಇಲಾಖೆ ಮನೆಗಳಿಗೆ ತೆರಳಿ ಜನರ ಅಸಾಂಕ್ರಾಮಿಕ ರೋಗಗಳ ತಪಾಸಣೆ ನೆಡೆಸುವುದರ ಜೊತೆಗೆ ಮನೆ ಬಳಿಗೆ ಉಚಿತವಾಗಿ ಔಷಧಿಗಳನ್ನ ಪೂರೈಸಲು ಸಜ್ಜಾಗಿದೆ. ನಮ್ಮ ಜನರು ವೈದ್ಯರ ಸಲಹೆಗಳಂತೆ ನಡೆದುಕೊಳ್ಳಬೇಕು ಎಂದರು.
ಹಳ್ಳಿಗಾಡಿನ ಜನರು ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ವಿಚಾರದಲ್ಲಿ ನಿರ್ಲೆಕ್ಷ್ಯೆ ವಹಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯನ್ನ ಜನರ ಮನೆ ಬಳಿಗೆ ಕಳಿಸಿ ತಪಾಸಣೆ ನಡೆಸಿ, ಔಷಧಿ ಪೂರೈಸುವ ಯೋಜನೆ ರೂಪಿಸಿದೆ. ಇದು ಒಂದು ಉತ್ತಮ ಯೋಜನೆಯಾಗಿದ್ದು, ರಾಜ್ಯಾದ್ಯಂತ ಯೋಜನೆ ಜಾರಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಇದೇ ವೇಳೆ ಸಿಎಙ ಸಿದ್ದರಾಮಯ್ಯ ಅವರು ಭರವಸೆ ನೀಡಿದರು. ಕೋಲಾರ ಜಿಲ್ಲೆಯಿಂದ ಯೋಜನೆ ಪ್ರಾರಂಭ ಮುಂಬರುವ ಜನವರಿ ತಿಂಗಳಿನಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯೋಜನೆ ಜಾರಿ.
ಗೃಹ ಆರೋಗ್ಯ ಯೋಜನೆಯ ಕಾರ್ಯಚಟುವಟಿಕೆ
* ರಕ್ತದೊತ್ತಡ, ಮಧುಮೇಹ ಮತ್ತು ಬಾಯಿ, ಗರ್ಭ ಕಂಠ ಮತ್ತು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್, BMI, ವೇಸ್ಟ್ ಹಿಪ್ ರೇಷ್ಯೋ ಅನುಪಾತ, ಸ್ಲೀಪ್ ಅಪ್ನಿಯಾ (ನಿದ್ದೆಯಲ್ಲಿ ಉಸಿರುಗಟ್ಟುವಿಕೆ) ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ತಪಾಸಣೆ ನಡೆಸಲಾಗುತ್ತದೆ.
* ಆರೋಗ್ಯ ಕಾರ್ಯಕರ್ತರ ತಂಡವು ದಿನಕ್ಕೆ 15 ಮನೆಗಳ ತಪಾಸಣೆ ನಡೆಸಲಿದೆ. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ಈ ತಂಡ ಮನೆ ಮನೆಗಳಿಗೆ ಭೇಟಿ ನೀಡುತ್ತದೆ.
* ದೃಢಪಟ್ಟ ಪ್ರಕರಣಗಳಿಗೆ ಅಗತ್ಯ ಔಷಧಿಗಳನ್ನು ಮಾತ್ರೆ ಪೆಟ್ಟಿಗೆ ನೀಡಲಾಗುವುದು. ಕೆಲವರಿಗೆ ಜೀವನಶೈಲಿ ಮಾರ್ಪಡಿಗೆ (ಆಹಾರ, ವ್ಯಾಯಾಮ) ಸಲಹೆ ನೀಡಲಾಗುವುದು. ಎರಡು ತಿಂಗಳ ನಂತರ ತಪಾಸಣೆ ಮಾಡಿ ದೃಢಪಟ್ಟಲ್ಲಿ ಅಂಥವರಿಗೆ ಔಷಧೋಪಚಾರಗಳನ್ನು ನೀಡಲಾಗುವುದು.
* ಆರೈಕೆಯಲ್ಲಿರುವ ರೋಗಿಗಳಿಗೆ, ವಿಶೇಷ ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ ಅಸಾಂಕ್ರಾಮಿಕ ರೋಗಿಗಳು ಇದ್ದಲ್ಲಿ ಔಷಧೋಪಚಾರಗಳನ್ನು ನೀಡಲಾಗುವುದು. (ಉಚಿತವಾಗಿ ಮಾತ್ರೆ ಪೆಟ್ಟಿಗೆಯಲ್ಲಿ ಔಷಧಿ ನೀಡಲಾಗುತ್ತದೆ)
* ಅಂದಾಜು 4 - 6 ತಿಂಗಳುಗಳಲ್ಲಿ ಸ್ಕ್ರೀನಿಂಗ್ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ಹೆಚ್ಚಿನ ಆರೈಕೆಗಾಗಿ ಒಂದು ತಿಂಗಳ ನಂತರ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ.
* ಎರಡನೇ ಹಂತದಲ್ಲಿ, ಎನ್.ಸಿ.ಡಿ.ಗಳ ಅನುಸರಣೆ (ಫಾಲೋ ಅಪ್) ಮತ್ತು ನಿಯಂತ್ರಣಕ್ಕೆ ಗಮನ ನೀಡಲಾಗುತ್ತದೆ. ಈ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಸಿಕ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತದೆ.
* "ಗೃಹ ಆರೋಗ್ಯ" ಯೋಜನೆಯು ಅಕಾಲಿಕ ಮರಣಗಳನ್ನು ತಡೆಗಟ್ಟಲು, ಸಾಂಕ್ರಾಮಿಕವಲ್ಲದ ರೋಗಗಳ ಚಿಕಿತ್ಸೆಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಅಗತ್ಯ ಆರೋಗ್ಯ ಸೇವೆ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ.












Click it and Unblock the Notifications