ಸಿಎಂ ವಿರುದ್ದ ಎಚ್ಡಿಕೆ ಸಿಡಿಸಿದ ಮತ್ತೊಂದು ಬಾಂಬ್! ಸ್ಫೋಟಿಸುತ್ತಾ, ಠುಸ್ ಆಗುತ್ತಾ?
Recommended Video

ನನಗೆ ಎಲ್ಲಾ ಗೊತ್ತಿದೆ, ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಎಲ್ಲವನ್ನೂ ಬಿಡುಗಡೆ ಮಾಡುತ್ತೇನೆಂದು, ಆನಂತರ ಅದರ ಬಗ್ಗೆ ಸೊಲ್ಲೆತ್ತದೇ ಇನ್ನೊಂದು ಟಾಪಿಕ್ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪ್ರಸ್ತಾವಿಸುವುದು ಹೊಸದೇನಲ್ಲ.
ಕಾಂಗ್ರೆಸ್ ಸೇರುವ ಮೊದಲು ಸಿದ್ದರಾಮಯ್ಯ ಬಿಜೆಪಿ ಸೇರಲು ಬಯಸಿದ್ದರು. ಅವರಿಗೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿತ್ತು, ಬಿಜೆಪಿ ಆ ಹುದ್ದೆಯನ್ನು ಕೊಡಲು ನಿರಾಕರಿಸಿದ್ದರಿಂದ ಕಾಂಗ್ರೆಸ್ ಸೇರಿದ್ದರು. ಅವರು ಜಾತ್ಯಾತೀತ ಎನ್ನುವುದು ಬರೀ ಡೋಂಗಿ ಎಂದು ಕೆಲವು ದಿನಗಳ ಹಿಂದೆ ಕುಮಾರಸ್ವಾಮಿ, ಸಿಎಂ ವಿರುದ್ದ ಗಧಾಪ್ರಹಾರ ಮಾಡಿದ್ದರು.
ಶನಿವಾರ (ಡಿ 2) ಬೆಂಗಳೂರಿನ ಜೆ ಪಿ ಭವನದಲ್ಲಿ, ನಗರದ ವಿವಿಧ ವಾರ್ಡುಗಳ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಆಪರೇಷನ್ ಕಮಲಕ್ಕೆ ಬಿಜೆಪಿಗೆ ಸಾಥ್ ನೀಡಿದ್ದೇ ಸಿದ್ದರಾಮಯ್ಯನವರು ಎನ್ನುವ ಇನ್ನೊಂದು ಬಾಂಬ್ ಸಿಡಿಸಿದ್ದಾರೆ.
ಪ್ರಸಕ್ತ, ರಾಜ್ಯ ಕಾಂಗ್ರೆಸ್ಸಿನ ಎಲ್ಲಾ ಹಿರಿಯ ಮುಖಂಡರನ್ನು ಸಿದ್ದರಾಮಯ್ಯ ಮೂಲೆಗುಂಪು ಮಾಡುತ್ತಿದ್ದಾರೆ. ಇನ್ನೊಂದು ಅವಧಿಗೂ ಅವರೇ ಸಿಎಂ ಆದರೆ ಹೇಗೆ ಎನ್ನುವ ಚಿಂತೆ ಅವರಲ್ಲಿ ಕಾಡುತ್ತಿದೆ. ಆದರೆ, ಹಿರಿಯ ಕಾಂಗ್ರೆಸ್ಸಿಗರು ತಲೆಬಿಸಿ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ, ರಾಜ್ಯದ ಜನರು ಕಾಂಗ್ರೆಸ್ಸಿಗೆ ಮತ್ತೆ ಅಧಿಕಾರಕ್ಕೆ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧಿಸುತ್ತಾರೆಂದು ಎರಡು ದಿನದ ಹಿಂದೆಯಷ್ಟೇ ಹೇಳಿದ್ದ ಕುಮಾರಸ್ವಾಮಿ, ತೀರಾ ಅನಿವಾರ್ಯತೆ ಸೃಷ್ಟಿಯಾದರೆ ಮಾತ್ರ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲಾಗುವುದು ಎನ್ನುವ ದ್ವಂದ್ವ ಹೇಳಿಕೆಯನ್ನು ನೀಡಿದ್ದಾರೆ.

ವಿದ್ಯುತ್ ಖರೀದಿ ಹಗರಣದ ಬಗ್ಗೆ ಸದನ ಸಮಿತಿಯ ವರದಿ
ಇವರ ಬಂಡವಾಳ ನನಗೆ ಗೊತ್ತಿದೆ, ನಾಲ್ಕು ವರ್ಷಗಳಲ್ಲಿ ಏನೇನು ಮಾಡಿದ್ದಾರೆ? ಎಂದು ಗೊತ್ತಿದೆ. ವಿದ್ಯುತ್ ಖರೀದಿ ಹಗರಣದ ಬಗ್ಗೆ ಸದನ ಸಮಿತಿಯ ವರದಿಯ ಬಗ್ಗೆ ಚರ್ಚೆ ನಡೆಯಲಿ ಇವರ ಬಂಡವಾಳ ಬಿಚ್ಚಿಡುತ್ತೇನೆ'. ಇವರ ಅವಧಿಯಲ್ಲಿ ನಾಲ್ಕು ವರ್ಷ ಏನೇನು ಮಾಡಿದ್ದಾರೆ ಅಂತ ಗೊತ್ತಿದೆ. ಈ ವರದಿಗೆ ನಾಚಿಕೆಯಾಗಬೇಕು. ವರದಿಗೆ ನಾನು ಸಹಿ ಹಾಕಿಲ್ಲ, ಸಿದ್ದರಾಮಯ್ಯ ಸರ್ಕಾರ ದಾಖಲೆಗಳನ್ನು ನಾಶ ಮಾಡುವುದರಲ್ಲಿ ಎಕ್ಸ್ಪರ್ಟ್' ಎಂದು ಎಚ್ಡಿಕೆ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ವಿರುದ್ದ ಗುಡುಗಿದ್ದರು.

ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದು ಸಿದ್ದರಾಮಯ್ಯ
ಮಾತೆತ್ತಿದ್ದರೆ ಬಿಜೆಪಿ ಕೋಮುವಾದಿ ಎನ್ನುವ ಸಿದ್ದರಾಮಯ್ಯನವರು, ಬಿಜೆಪಿ ಜೊತೆ ಕೈಜೋಡಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದು ನನಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಸಿದ್ದರಾಮಯ್ಯ ಮತ್ತು ಬಿಜೆಪಿ ಮುಖಂಡರ ಜೊತೆಗಿರುವ ಮಧ್ಯವರ್ತಿಗಳೇ ಸದ್ಯದಲ್ಲೇ ಮುಖ್ಯಮಂತ್ರಿಗಳ ಈ ಬಂಡವಾಳವನ್ನು ಜನತೆಯ ಮುಂದೆ ಬಿಚ್ಚಿಡಲಿದ್ದಾರೆ. ಆಪರೇಷನ್ ಕಮಲಕ್ಕೇ ಸಾಥ್ ನೀಡಿದ್ದೇ ಸಿದ್ದರಾಮಯ್ಯ - ಎಚ್ ಡಿ ಕುಮಾರಸ್ವಾಮಿ.

ಮಲ್ಲಿಕಾರ್ಜುಜನ ಖರ್ಗೆ, ಪರಮೇಶ್ವರ್ ಮೂಲೆಗುಂಪು
ದಿನದಿಂದ ದಿನಕ್ಕೆ ಕಾಂಗ್ರೆಸ್ ಹೈಕಮಾಂಡ್ ದುರ್ಬಲಗೊಳ್ಳುತ್ತಿದೆ, ಇದರ ಲಾಭವನ್ನು ಪಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ, ಮಲ್ಲಿಕಾರ್ಜುಜನ ಖರ್ಗೆ, ಪರಮೇಶ್ವರ್ ಮುಂತಾದವರನ್ನು ಮೂಲೆಗುಂಪು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಪ್ರಭಾವವನ್ನು ತಡೆದ ಕ್ರೆಡಿಟ್ ನಮ್ಮ ಪಕ್ಷಕ್ಕೆ ಸಲ್ಲಬೇಕು - ಎಚ್ ಡಿ ಕುಮಾರಸ್ವಾಮಿ.

ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಪಿಎಗಳು
ಯಡಿಯೂರಪ್ಪ ಮತ್ತು ಈಶ್ವರಪ್ಪನವರ ಪಿಎಗಳ ಕೋಳಿ ಜಗಳ ಈ ಮಟ್ಟಕ್ಕೆ ಬೆಳೆಯಲು ಇಬ್ಬರು ಹಿರಿಯ ನಾಯಕರ ನಿರ್ಲಕ್ಷ್ಯವೇ ಕಾರಣ. ಚುನಾವಣೆಯ ಈ ಹೊಸ್ತಿಲಲ್ಲಿ ಸಿದ್ದರಾಮಯ್ಯನವರಿಗೆ ಇನ್ನೊಂದು ಅಸ್ತ್ರ ಸಿಕ್ಕಿದಂತಾಗಿದೆ. ಈ ವಿಚಾರವನ್ನು ಹ್ಯಾಂಡಲ್ ಮಾಡಿಯೆಂದು ಇದನ್ನು ಕೆಂಪಯ್ಯನವರಿಗೆ ವಹಿಸಿದ್ದಾರೆ. ಕೆಂಪಯ್ಯ ಇರೋದೇ ಕಾನೂನು ಹಾಳು ಮಾಡಲು ಎಂದು ಕುಮಾರಸ್ವಾಮಿ ದೂರಿದ್ದಾರೆ.

ಮುಂದಿನ ದಸರಾ ನಾನೇ ಉದ್ಘಾಟನೆ ಮಾಡುತ್ತೇನೆ ಎನ್ನುವ ಸಿಎಂ
ಕಾಂಗ್ರೆಸ್ ನಲ್ಲಿ ಶಾಸಕಾಂಗ ಸಭೆಯಲ್ಲಿ ಮುಂದಿನ ಸಿಎಂ ಯಾರು ಎಂದು ನಿರ್ಧಾರ ಮಾಡಲಾಗುತ್ತದೆ ಎಂದು ಕೆ ಸಿ ವೇಣುಗೋಪಾಲ್ ಹೇಳುತ್ತಾರೆ. ಆದರೆ, ಇಲ್ಲಿ ಸಿದ್ದರಾಮಯ್ಯ ಮುಂದಿನ ದಸರಾ ನಾನೇ ಉದ್ಘಾಟನೆ ಮಾಡುತ್ತೇನೆ ಎನ್ನುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಇಷ್ಟು ಶಕ್ತಿಹೀನಗೊಂಡಿದ್ದು ವಿಪರ್ಯಾಸ - ಎಚ್ ಡಿ ಕುಮಾರಸ್ವಾಮಿ.












Click it and Unblock the Notifications