ಗೃಹ ಜ್ಯೋತಿ, ಗೃಹಲಕ್ಷ್ಮಿ ಆಯ್ತು, ಈಗ ವರಮಹಾಲಕ್ಷ್ಮಿ ಹಬ್ಬಕ್ಕೂ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್!
ಬೆಂಗಳೂರು, ಆಗಸ್ಟ್ 22: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳನ್ನ ನೀಡಿದ ಸರ್ಕಾರ ಈಗಾಗಲೇ ಸಾಲು ಸಾಲು ಗ್ಯಾರಂಟಿಗಳನ್ನ ಜಾರಿಗೊಳಿಸುತ್ತಿದ್ದು, ಇದೀಗ ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆ ಮತ್ತೊಂದು ಗ್ಯಾರಂಟಿಯನ್ನ ರಾಜ್ಯದ ಮಹಿಳೆಯರಿಗಾಗಿ ನೀಡಲು ಮುಂದಾಗಿದೆ.
ಹೌದು, ರಾಜ್ಯ ಸರ್ಕಾರವು ವರಮಹಾಲಕ್ಷ್ಮಿ ಹಬ್ಬದ ದಿನ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ನೀಡುವಂತೆ ಸುತ್ತೋಲೆ ಹೊರಡಿಸಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಲ್ಲಿ ಹಸಿರು ಗಾಜಿನ ಬಳೆ, ಅರಿಶಿಣ, ಕುಂಕುಮ ದೇವರ ಮುಂದೆ ಪೂಜೆ ಮಾಡಿ ಕೊಡುವಂತೆ ಆದೇಶ ಹೊರಡಿಸಲಾಗಿದೆ. ಇನ್ನೂ ಆಗಸ್ಟ್ 25ನೇ ತಾರೀಖು ಶುಕ್ರವಾರ ರಾಜ್ಯದಾದ್ಯಂತ ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನ ದೇವಸ್ಥಾನಕ್ಕ ಬರುವ ಮಹಿಳಾ ಭಕ್ತರಿಗೆ ಸರ್ಕಾರದ ಕುಂಕುಮ ಭಾಗ್ಯ ನೀಡಲು ಮುಂದಾಗಿದೆ.

ಆದೇಶದ ಪತ್ರದಲ್ಲಿ ಏನಿದೆ?
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಬಹಳ ಮಹತ್ವ ಪೂರ್ಣವಾದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದ್ದು, ಪ್ರತೀ ವರ್ಷ ವರಮಹಾಲಕ್ಷ್ಮಿ ವ್ರತ, ಸ್ವರ್ಣಗೌರೀ ವ್ರತ ಮತ್ತು ನವರಾತ್ರಿಗಳಲ್ಲಿಯೂ ಸಹ ಸ್ತ್ರೀ ದೇವತೆಯನ್ನು ಪೂಜಿಸಿ ಆರಾಧಿಸಲಾಗುತ್ತದೆ.
ಆದರಂತೆ ಪ್ರತಿ ವರ್ಷದ ಶ್ರಾವಣ ಮಾಸದ ಶುಕ್ಲಪಕ್ಷದ ಪೌರ್ಣಮಿಯ ಮೊದಲ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತ ಆಚರಿಸುವುದು ಪುರಣೋಕ್ತವಾಗಿದ್ದು, ಆ ದಿನ ಶ್ರೀವರ ಮಹಾಲಕ್ಷ್ಮಿಯನ್ನು ವಿಶೇಷವಾಗಿ ಪೂಜಿಸಿ ಪ್ರಸಾದವನ್ನು ನೈವೇದ್ಯ ಮಾಡಿ, ಪ್ರಸಾದವನ್ನು ಸ್ವೀಕರಸಿದಲ್ಲಿ ಸಕಲ ಸೌಭಾಗ್ಯಗಳೂ ಅಷ್ಟ ಐಶ್ವರ್ಯಗಳೂ ಚತುರ್ವಿದ ಫಲ್ಯಗಳೂ, ಧನ ಧಾನ್ಯಾಧಿಗಳು ಲಭಿಸುತ್ತವೆ ಎಂದು ಹೇಳಲ್ಪಟ್ಟಿರುವುದರಿಂದ ಆ ದಿನ ಮಹಿಳೆಯರು ಬಹಳ ಭಕ್ತಿಭಾವಗಳಿಂದ ಮನೆಯಲ್ಲಿ ಶುದ್ಧಿಯಾಗಿ ವರಮಹಾಲಕ್ಷ್ಮಿಯನ್ನು ಪೂಜೆ ಮಾಡಿ, ದೇವಾಲಯಗಳಿಗೆ ದೇವರ ದರ್ಶನಾರ್ಥಿಯಾಗಿ ಬಂದು ದೇವರ ಪ್ರಸಾದಗಳಾದ ಅರಿಶಿನ, ಕುಂಕುಮ, ಹೂವು ಮುಂತಾದ ಪ್ರಸಾದಗಳನ್ನು ಸ್ವೀಕರಿಸುವ ಸಂಪ್ರದಾಯವು ಸಹ ಇರುತ್ತದೆ.

ಆದ್ದರಿಂದ ನಾಡಿನ ಸಮಸ್ತ ಮಹಿಳೆಯರನ್ನು ಗೌರವಿಸುವ ಸಲುವಾಗಿ ಹಾಗೂ ವರಮಹಾಲಕ್ಷ್ಮಿಯವರ ಕೃಪಾಕಟಾಕ್ಷವು ಲಭಿಸಲೆಂದು ಅಧಿಸೂಚಿತ ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಆಯಾಯ ದೇವಾಯಗಳ ವತಿಯಿಂದ ಉತ್ತಮ ಗುಣಪಟ್ಟದ ಕಸ್ತೂರಿ, ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡುವುದು ಸೂಕ್ತವಾಗಿರುತ್ತದೆ.
ಪ್ರಸಾದ ರೂಪವಾದ ಅರಿಶಿಣ ಕುಂಕುಮವನ್ನು ಕಾಗದದ ಲಕೋಟೆಗಳಲ್ಲಿ ಸರ್ಕಾರದ ಲಾಂಛನದೊಂದಿಗೆ ದೇವಾಲಯ ಹೆಸರನ್ನು ಮುದ್ರಿಸಿ, ಲಕೋಟೆಯನ್ನು ತಯಾರಿಸಿಕೊಂಡು ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ನೀಡುವುದು ಎಂಬ ಸೂಚನೆಯನ್ನು ನೀಡಲಾಗಿದೆ.












Click it and Unblock the Notifications