ನುಡಿದಂತೆ ನಡೆದಿದ್ದೇವೆ : ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಮೇ.19 : ವಿಧಾನಸಭೆ ಚುನಾವಣೆ ವೇಳೆಯಲ್ಲಿ ಜನರಿಗೆ ಕೊಟ್ಟ ಹಲವಾರು ಭರವಸೆಗಳನ್ನು ಈಡೇರಿಸಿದ್ದೇವೆ. ನೀತಿ ಸಂಹಿತೆ ನಡುವೆಯೂ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಮಾಹಿತಿ ನೀಡುವ "ನುಡಿದಂತೆ ನಡೆದಿದ್ದೇವೆ" ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ರಾಜ್ಯದ ಜನರಿಗೆ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಪ್ರಣಾಳಿಕೆ ಮೂಲಕ ನೀಡಿದ 160 ಭರವಸೆಗಳಲ್ಲಿ 90 ಭರವಸೆಗಳನ್ನು ಈಡೇರಿಸಿದ್ದೇವೆ. ಸರ್ಕಾರಕ್ಕೆ ಆರ್ಥಿಕ ತೊಂದರೆ ಉಂಟಾದರೂ ಜನಪರವಾದ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇವೆ. ಆದ್ದರಿಂದ ಸರ್ಕಾರದ ಸಾಧನೆಯ ಕಿರು ಹೊತ್ತಿಗೆಗೆ ನುಡಿದಂತೆ ನಡೆದಿದ್ದೇವೆ ಎಂದು ಹೆಸರಿಡಲಾಗಿದೆ ಎಂದರು. [ಸಿದ್ದರಾಮಯ್ಯ ಸರ್ಕಾರದ 10 ವಿವಾದಗಳು]
ಕಿರುಹೊತ್ತಿಗೆಯಲ್ಲಿ ಸರ್ಕಾರದ ಸಾಧನೆಯನ್ನು ಅಂಕಿ-ಅಂಶಗಳ ಮೂಲಕ ನೀಡಿದ್ದೇವೆ. ಬಜೆಟ್ ಮಂಡನೆ ಮಾಡಿದ್ದೇವೆ. ಉಪ ಚುನಾವಣೆ ಎದುರಿಸಿದ್ದೇವೆ. ವಿವಿಧ ಚುನಾವಣೆಗಳ ನೀತಿ ಸಂಹಿತೆ ಮೂಲಕ ರಾಜ್ಯದಲ್ಲಿ 3 ತಿಂಗಳು ನೀತಿ ಸಂಹಿತೆ ಜಾರಿಯಲ್ಲಿತ್ತು. ಆದ್ದರಿಂದ ಸರ್ಕಾರ ಘೋಷಿಸಿದ ಕೆಲವು ಕಾರ್ಯಕ್ರಮಗಳು ವಿಳಂಬವಾಗಿ ಜಾರಿಗೆ ಬರುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು.
ಲೇವಡಿ ಮಾಡಿದವರಿಗೆ ಉತ್ತರ ಕೊಟ್ಟಿದ್ದೇವೆ : ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಬಡವರಿಗೆ ಸಹಾಯಕವಾಗಲಿ ಎಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಾಗ ಹಲವರು ನಮ್ಮನ್ನು ಲೇವಡಿ ಮಾಡಿದರು. ಇಂತಹ ಯೋಜನೆಯನ್ನು ಜಾರಿಗೊಳಿಸಲು ಅಸಾಧ್ಯ, ಇದನ್ನು ಮುಂದುವರೆಸುವುದು ಅಸಾಧ್ಯ ಎಂದು ಟೀಕಿಸಿದ್ದರು ಎಂದು ಹೇಳಿದ ಸಿದ್ದರಾಮಯ್ಯ, ಹೀಗೆ ಲೇವಡಿ ಮಾಡಿದರಿಗೆ ಜನಪರ ಯೋಜನೆಗಳ ಮೂಲಕವೇ ಉತ್ತರ ಕೊಟ್ಟಿದ್ದೇವೆ ಎಂದರು.
ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ಒಂದು ತಿಂಗಳಿಗೆ 30 ಕೆಜಿ ಅಕ್ಕಿಯನ್ನು 1 ರೂ.ಗೆ ಕೊಡುವ ಅನ್ನಭಾಗ್ಯ ಯೋಜನೆಗೆ 4300 ಕೋಟಿ ವೆಚ್ಚವಾಗುತ್ತಿದೆ. ಆದರೂ, ಸರ್ಕಾರ ಬಡವರಿಗೆ ಸಹಕಾರಿಯಾಗಲಿ ಎಂದು ಯೋಜನೆಯನ್ನು ಮುಂದುವರೆಸುತ್ತಿದೆ ಎಂದು ತಿಳಿಸಿದರು.












Click it and Unblock the Notifications