ಅಂತೂ ಇಂತು ಬಸ್ ದರ ಇಳಿಕೆಗೆ ಸಿಎಂ ಒಪ್ಪಿಗೆ
ಬೆಂಗಳೂರು, ಜ.6: ಅಂತೂ ಇಂತು ಬಸ್ ದರ ಇಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ಇಳಿಕೆಯ ಪ್ರಮಾಣ ಪ್ರಕಟವಾಗಲಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ನಂತರ ಸಿಎಂ ಈ ಸೂಚನೆ ನೀಡಿದ್ದಾರೆ. ಕನಿಷ್ಠ ಶೇ. 2 ರಷ್ಟು ದರ ಇಳಿಕೆಯಾಗುವ ಸಂಭವವಿದೆ. ದರ ಇಳಿಕೆಯ ನಂತರ ಉಂಟಾಗುವ ಕೊರತೆಯನ್ನು ಹೇಗೆ ನಿಭಾಯಿಸಬೇಕು? ಹೇಗೆ ಸರಿದೂಗಿಸಬೇಕು? ಎಂಬುದರ ಕುರಿತು ಚರ್ಚೆ ನಡೆಯಿತು.[ಬಸ್ ದರ ಇಳಕೆ ಬರೀ ಪೊಳ್ಳು ಭರವಸೆ]
ಕೆಎಸ್ ಆರ್ ಟಿಸಿ ದರ ಇಳಿಕೆ ಅನಿವಾರ್ಯ. ನಷ್ಟವನ್ನು ಬೇರೆಡೆಯಿಂದ ತುಂಬಿಸಿಕೊಳ್ಳಬೇಕು. ಈ ಬಗ್ಗೆ ಒಂದು ಸಮಗ್ರ ವರದಿ ಸಿದ್ಧಪಡಿಸಿ ದರ ಇಳಿಕೆ ತೀರ್ಮಾನ ತೆಗೆದುಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.[ಕರ್ನಾಟಕದ ಸಾರಿಗೆ ಸಂಸ್ಥೆಗಳ ನಷ್ಟ ಏನೂ ಅಲ್ಲಾ ಸ್ವಾಮಿ!]
ಡೀಸೆಲ್ ಬೆಲೆ ನಿರಂತರವಾಗಿ ಇಳಿಯುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಬಸ್ ದರ ಇಳಿಕೆ ಬಗ್ಗೆ ಗಮನ ಹರಿಸಿರಲಿಲ್ಲ. ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಮಾಧ್ಯಮಗಳು ಸಹ ದರ ಇಳಿಸುವಂತೆ ಸರ್ಕಾರದ ಮೇಲೆ ಒತ್ತಡ ತಂದಿದ್ದವು.