ಬಿಎಸ್ಪಿ ಸಚಿವ ಎನ್ ಮಹೇಶ್ ರಾಜೀನಾಮೆ ಅಂಗೀಕರಿಸದ ಕುಮಾರಸ್ವಾಮಿ
ಬೆಂಗಳೂರು, ಅಕ್ಟೋಬರ್ 12: ಪಕ್ಷ ಸಂಘಟನೆ ನೆಪವೊಡ್ಡಿ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದ ಎನ್ ಮಹೇಶ್ ಅವರ ನಿರ್ಧಾರವನ್ನು ಒಪ್ಪದ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ರಾಜಿನಾಮೆ ಅಂಗೀಕರಿಸದೆ ತಟಸ್ಥ ನಡೆ ಮುಂದುವರೆಸಿದ್ದಾರೆ.
ಬಹುಜನ ಸಮಾಜವಾದಿ ಪಾರ್ಟಿಯಿಂದ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಎನ್ ಮಹೇಶ್ ಶಿಕ್ಷಣ ಸಚಿವರ ಹುದ್ದೆಗೆ ಗುರುವಾರವಷ್ಟೇ ರಾಜಿನಾಮೆ ನೀಡಿ ಮೈತ್ರಿ ಸರ್ಕಾರದಿಂದ ಹೊರಹೋಗುವ ಪ್ರಯತ್ನ ಮಾಡಿದ್ದರು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಮಹೇಶ್ ಅವರ ರಾಜಿನಾಮೆಯನ್ನು ಅಂಗೀಕರಿಸದೆ ಸೂಕ್ತ ಸಂದರ್ಬದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವೆ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಶುಕ್ರವಾರ ರಾಜಿನಾಮೆಯನ್ನು ತಿರಸ್ಕರಿಸಿರುವ ಕುಮಾರಸ್ವಾಮಿ ತಮ್ಮ ಸಚಿವ ಸಂಪುಟದ ಗಾತ್ರ 27ಕ್ಕೆ ಸೀಮಿತಗೊಳಿಸಿ ಬಿಎಸ್ಪಿಯನ್ನು ಮೈತ್ರಿ ಸರ್ಕಾರದಲ್ಲಿ ಮುಂದುವರೆಸಿದ್ದಾರೆ.

ಈ ನಡುವೆ ಜೆಡಿಎಸ್ ರಾಷ್ಟ್ರೀಯ ವರಿಷ್ಠ ಎಚ್ಡಿ ದೇವೇಗೌಡ ಸಚಿವ ಎನ್ ಮಹೇಶ್ ಅವರ ರಾಜಿನಾಮೆ ಅಂಗೀಕರಿಸದಂತೆ ಕುಮಾರಸ್ವಾಮಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣ ಕುರಿತಂತೆ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ಶೀಘ್ರದಲ್ಲೇ ದೆಹಲಿಗೆ ತೆರಳಿ ಚರ್ಚಿಸಲಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ರಾಜಕೀಯನ ಪರಿಸ್ಥಿತಿಗೂ ರಾಜ್ಯದಲ್ಲಿರುವ ಮೈತ್ರಿ ಸರ್ಕಾರದ ರಾಜಕೀಯ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದು ಅಲ್ಲಿಗೂ ಇಲ್ಲಿಗೂ ತಳಕು ಹಾಕದೆ ಮೈತ್ರಿ ಸರ್ಕಾರದಲ್ಲಿ ಬಿಎಸ್ಪಿಯನ್ನು ಮುಂದುವರೆಸಿಕೊಂಡು ಹೋಗಲು ಮನವೊಲಿಸಲು ದೇವೇಗೌಡರು ಮುಂದಾಗಿದ್ದಾರೆ.












Click it and Unblock the Notifications