ಮಹದಾಯಿ ತೀರ್ಪು ಕುರಿತು ಇಂದು ಎಚ್ಡಿಕೆ-ಡಿಕೆಶಿ ಮಹತ್ವದ ಸಭೆ
ಬೆಂಗಳೂರು, ಆಗಸ್ಟ್ 16: ಮಹದಾಯಿ ಅಂತಿಮ ತೀರ್ಪುನ ಕುರಿತು ರಾಜ್ಯ ಸರ್ಕಾರದ ಮುಂದಿನ ನಡೆ ಬಗ್ಗೆ ನಿರ್ಧರಿಸಲು ಸಿಎಂ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ನೀರಾವರಿ ತಜ್ಞರು ಮತ್ತು ಸರ್ಕಾರದ ವಕೀಲರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ.
ನ್ಯಾಯಾಧಿಕರಣ ತೀರ್ಪಿನ ಅನ್ವಯ ಕರ್ನಾಟಕಕ್ಕೆ 13.72 ಟಿಎಂಸಿ ಅಡಿ ನೀರು ದೊರೆತಿದೆ. ಇಂದು ನಡೆವ ಸಭೆಯಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕೆ ಎಂಬ ಬಗ್ಗೆ ಹಾಗೂ ತೀರ್ಪಿನ ಬಗ್ಗೆ ಚರ್ಚೆ ನಡೆಯಲಿದೆ.
ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು, ನ್ಯಾಯಾಧಿಕರಣ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ನಮಗೆ ಬೇಡಿಕೆಗಿಂತಲೂ ಬಹಳ ಕಡಿಮೆ ನೀರು ಸಿಕ್ಕಿದೆ ಎಂದಿದ್ದರು.

ಸರ್ವಪಕ್ಷ ಸಭೆ ಕರೆವ ಬಗ್ಗೆ ನಿರ್ಧಾರ
ಸರ್ವ ಪಕ್ಷಗಳ ಸಭೆ ಕರೆದು ತೀರ್ಪಿನ ವಿಶ್ಲೇಷಣೆ ನಡೆಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರು ನಿನ್ನೆಯೇ ಹೇಳಿದ್ದರು. ಹಾಗಾಗಿ ಇಂದಿನ ಸಭೆಯಲ್ಲಿ ತೀರ್ಪಿನ ಬಗ್ಗೆ ಹಾಗೂ ಮೇಲ್ಮನವಿಯ ಸಾಧಕ-ಭಾದಕಗಳ ಕುರಿತು ಚರ್ಚೆ ನಡೆಯಲಿದೆ.

ಕೇಂದ್ರಕ್ಕೆ ತೀರ್ಪು ಪ್ರತಿ ರವಾನಿಸಿದ್ದಕ್ಕೆ ಅಸಮಾಧಾನ
ನ್ಯಾಯಾಧಿಕರಣವು ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಘೋಷಿಸದೆ ನೇರವಾಗಿ ಕೇಂದ್ರಕ್ಕೆ ತೀರ್ಪಿನ ಪ್ರತಿ ರವಾನಿಸಿದ್ದರ ಬಗ್ಗೆಯೂ ಡಿಕೆ ಶಿವಕುಮಾರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡಿದ್ದರಿಂದ ಯಾವ ಚರ್ಚೆಯ ಮೇಲೆ ತೀರ್ಪು ಪ್ರಕಟವಾಗಿದೆ ಎಂದು ಗೊತ್ತಾಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ತೀರ್ಪಿನ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಹ ನ್ಯಾಯಾಧಿಕರಣ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಮಗೆ ಇನ್ನೂ ಹೆಚ್ಚಿನ ನೀರು ಕೊಡಬೇಕಿತ್ತು ಎಂದಿದ್ದ ಅವರು, ಸರ್ಕಾರ ಕಡ್ಡಾಯವಾಗಿ ಮೇಲ್ಮನವಿ ಸಲ್ಲಿಸಬೇಕು ಎಂದಿದ್ದರು.

ಹೋರಾಟಗಾರರದ್ದೂ ಅದೇ ನಿಲವು
ಮಹದಾಯಿ ಹೋರಾಟಗಾರರಲ್ಲಿ ಮುಂಚೂಣಿಯಲ್ಲಿದ್ದ ವೀರೇಶ ಸೊಬರದ ಅವರೂ ಸಹ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಮೇಲ್ಮನವಿ ಸಲ್ಲಿಸಿದರೂ ನಮ್ಮ ಪಾಲಿನ ನೀರು ನಮಗೆ ತಪ್ಪದೇ ಸಿಗಲಿದೆ ಹಾಗಾಗಿ ಹೆಚ್ಚಿನ ನೀರಿಗಾಗಿ ಮೇಲ್ಮನವಿ ಸಲ್ಲಿಸಲೇಬೇಕು ಎಂದಿದ್ದಾರೆ.












Click it and Unblock the Notifications