ಜಿಲ್ಲಾ ಕೇಂದ್ರದಲ್ಲೂ ಜನತಾ ದರ್ಶನ: ಕುಮಾರಸ್ವಾಮಿ ಘೋಷಣೆ
ಬೆಂಗಳೂರು, ಜೂನ್ 5: ಸಂಪುಟ ವಿಸ್ತರಣೆ ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಮಾಡಲಾಗುವುದು ಎಂದು ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಗೊಂದಲದ ಪ್ರಶ್ನೆಗಳಿಗೆ ಜೂನ್ 6ರಂದು ಪೂರ್ಣ ವಿರಾಮ ಬೀಳಲಿದೆ. ಜೆಡಿಎಸ್ನ 12 ಸ್ಥಾನವನ್ನೂ ಭರ್ತಿ ಮಾಡುವುದಿಲ್ಲ, ರಾಜಕೀಯ ತೀರ್ಮಾನದ ಹಿನ್ನೆಲೆ ಕೆಲವು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜನತಾದರ್ಶನಕ್ಕೆ 4 ಸದಸ್ಯರ ತಂಡ ರಚನೆ ಮಾಡಿದ ಎಚ್.ಡಿ.ಕುಮಾರಸ್ವಾಮಿ
ಈ ಹಿಂದೆ ಎಚ್ಡಿ ಕುಮಾರಸ್ವಾಮಿಯವರು ಹುಬ್ಬಳ್ಳಿಯಲ್ಲಿ ಮನೆ ಮಾಡಿ ಉತ್ತರ ಕರ್ನಾಟಕ ಜನತೆ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು, ಅದರಂತೆ 15 ದಿನಕ್ಕೊಮ್ಮೆ ಹುಬ್ಬಳ್ಳಿಯಲ್ಲಿ ಜನತಾ ದರ್ಶನ ಮಾಡಲಿ ಎಂದು ಉತ್ತರ ಕರ್ನಾಟಕ ಜಾಗೃತಿ ವೇದಿಕೆ ಆಗ್ರಹಿಸಿದೆ.
ಸಮ್ಮಿಶ್ರ ಸರ್ಕಾರಸಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು, ಎರಡೂ ಪಕ್ಷಗಳಿಂದ 15 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು, ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ವೇದಿಕೆ ಅಧ್ಯಕ್ಷೆ ಮಂಗಳಾ ನಾಗರಾಜ್ ಆಗ್ರಹಿಸಿದ್ದಾರೆ.