Just in: ಪ್ರೊಫೈಲ್ ಫೋಟೋದಲ್ಲಿ ರಾಷ್ಟ್ರಧ್ವಜ ಬಳಸಿ, ಸಿಎಂ ಕರೆ
ಬೆಂಗಳೂರು, ಆ.02: ದೇಶದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಬಿಜೆಪಿ ಚಿಂತನೆ ನಡೆಸಿದೆ. ಈ ಹಿನ್ನೆಲೆ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಎಂಬ ಅಭಿಯಾನಕ್ಕೆ ಕರೆ ನೀಡಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಅಭಿಯಾನ ಶುರು ಮಾಡಿದೆ.
ಬಿಜೆಪಿ ಮಂಗಳವಾರದಿಂದಲೇ ಸಾಮಾಜಿಕ ಜಾಲತಾಣದಲ್ಲೂ ರಾಷ್ಟ್ರಧ್ವಜ ಅಭಿಯಾನ ಪ್ರಾರಂಭಿಸಿದೆ. ಹೌದು ಆಗಸ್ಟ್ 2 ರಿಂದ 15ರ ವರೆಗೆ ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋಗಳಾಗಿ ರಾಷ್ಟ್ರಧ್ವಜವನ್ನು ಬಳಸುವ ಅಭಿಯಾನಕ್ಕೆ ಮುಂದಾಗಿದೆ.
ಈ ಅಭಿಯಾನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮನವಿ ಮಾಡಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಪ್ರೊಫೈಲ್ ಪಿಕ್ ಗಳಾಗಿ ನಮ್ಮ ರಾಷ್ಟ್ರಧ್ವಜವನ್ನು ಬಳಸೋಣ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಮನೆ ಮನೆಯಲ್ಲೂ ರಾಷ್ಟ್ರದ್ವಜ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸೋಣ' ಎಂದು ಹೇಳಿದ್ದಾರೆ.
'ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ ಆಗಸ್ಟ್ 2 ರಿಂದ 15ರ ವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಪಿಕ್ ಗಳಾಗಿ ಭಾರತದ ರಾಷ್ಟ್ರಧ್ವಜದ ಚಿತ್ರವನ್ನು ಹಾಕೋಣ. ಪ್ರಧಾನಿ ಮೋದಿ ನೀಡಿದ ಕರೆಯನ್ನು ಯಶಸ್ವಿಗೊಳಿಸೋಣ' ಎಂದಿದ್ದಾರೆ.
'ಈ ಮೂಲಕ ನಮ್ಮ ದೇಶದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಮತ್ತು ರಾಷ್ಟ್ರಧ್ವಜಕ್ಕೆ ಆಕಾರ ನೀಡಿದ ಮೇಡಂ ಕಾಮಾ ಅವರಿಗೆ ಗೌರವ ಸಲ್ಲಿಸೋಣ' ಎಂದಿದ್ದಾರೆ.
ಇನ್ನು, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಸಾಮಾಜಿಕ ಜಾಲತಾಣಗಳಗಳಲ್ಲಿ ಪ್ರೊಫೈಲ್ ಚಿತ್ರವನ್ನು ಬದಲಿಸಿದ್ದಾರೆ. ಮನ್ ಕೀ ಬಾತ್ ರೆಡಿಯೋ ಕಾರ್ಯಕ್ರಮದಲ್ಲಿ ಅವರು ಪ್ರೊಫೈಲ್ ಚಿತ್ರವನ್ನು ಬದಲಿಸುವಂತೆ ದೇಶದ ನಾಗರಿಕರಿಗೆ ಕರೆ ನೀಡಿದ್ದರು.
ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಗಸ್ಟ್ 13ರಿಂದ 15ರವರೆಗೆ ವಿಶೇಷ ಆಂದೋಲನ 'ಹರ್ ಘರ್ ತಿರಂಗ' (ಮನೆ ಮನೆಯಲ್ಲೂ ರಾಷ್ಟ್ರದ್ವಜ) ಆಯೋಜಿಸಲಾಗಿದೆ.