ಮತ್ತೆ ಜನರ ದುಃಖದುಮ್ಮಾನ ಆಲಿಸಲು ಆರಂಭಿಸಿದ ಸಿದ್ದು
ಬೆಂಗಳೂರು, ಸೆ.2 : ಲೋಕಸಭೆ ಚುನಾವಣೆ, ವಿಧಾನ ಮಂಡಲ ಅಧಿವೇಶನ, ವಿಧಾನಸಭೆ ಉಪ ಚುನಾವಣೆ ಹೀಗೆ ನಾನಾ ಕಾರಣಗಳಿಂದ ರದ್ದಾಗಿದ್ದ ಮುಖ್ಯಮಂತ್ರಿಯವರ ಜನತಾ ದರ್ಶನ ಮಂಗಳವಾರ ನಡೆಯಿತು. ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರು 11 ಬಾರಿ ಜನತಾ ದರ್ಶನ ನಡೆಸಿದ್ದಾರೆ.
ಮಂಗಳವಾರ ಸಿಎಂ ಗೃಹ ಕಚೇರಿ ಕೃಷ್ಣಾ ಜನರಿಂದ ತುಂಬಿ ಹೋಗಿತ್ತು. ಬೆಳಗ್ಗೆ 9 ಗಂಟೆಯಿಂದ ನಡೆದ ಜನತಾ ದರ್ಶನ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ್ದರು. ಕಳೆದ ಎಂಟು ತಿಂಗಳಿನಿಂದ ರದ್ದಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಇಂದು ನಡೆಯಿತು. [ಸನ್ಯಾಸಿ ಮನವಿ ನೋಡಿ ಸಿಎಂ ಸಿದ್ದು ಸುಸ್ತೋ ಸುಸ್ತು]

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದುವರೆಗೂ ಸಿಎಂ 10 ಬಾರಿ ಜನತಾ ದರ್ಶನ ನಡೆಸಿದ್ದಾರೆ. ಮಂಗಳವಾರ ನಡೆಸಿರುವುದು 11ನೇ ಜನತಾ ದರ್ಶನ ಕಾರ್ಯಕ್ರಮ. ಇದುವರೆಗೂ ಒಟ್ಟು 3029 ಅರ್ಜಿಗಳನ್ನು ಜನತಾ ದರ್ಶನದಲ್ಲಿ ಸ್ವೀಕರಿಸಲಾಗಿದ್ದು, ಅವುಗಳಲ್ಲಿ 2008 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದ 610ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 410 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ.
ಈಗಾಗಲೇ ಜನತಾದರ್ಶನಕ್ಕೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ದೂರು ನೀಡುವ ಸಾರ್ವಜನಿಕರ ಅರ್ಜಿಗೆ ಕಚೇರಿಯ ಮೊಹರು ಹಾಕಿ ಆನ್ಲೈನ್ಗೆ ಅಳವಡಿಸಲಾಗುವುದು. ಅರ್ಜಿದಾರರ ಸ್ವೀಕೃತಿ ಪರಿಶೀಲಿಸಿ ಅವರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತಿದೆ. [ಜನತಾದರ್ಶನದಲ್ಲಿ ಎಸ್ಎಂಎಸ್ ಸೌಲಭ್ಯ]
ಜನತಾ ದರ್ಶನದಲ್ಲಿ ಸಲ್ಲಿಸಿದ ಅರ್ಜಿಗಳ ಬಗ್ಗೆ ಮಾಹಿತಿ ಪಡೆಯಲು ಜನರು 080-44554455ಗೆ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ತುರ್ತು ಗಮನಹರಿಸಬೇಕಾದ ಅರ್ಜಿಗಳನ್ನು ಸ್ಕ್ಯಾನ್ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ರವಾನಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.












Click it and Unblock the Notifications