ಮಂಗಳವಾರ, ಗುರುವಾರ ಕಂದಾಯ ಇಲಾಖೆ ಪ್ರಕರಣ ವಿಲೇವಾರಿಗೆ ಕಲಾಪ
ಬೆಂಗಳೂರು, ಸೆಪ್ಟೆಂಬರ್ 18; ಕಂದಾಯ ಇಲಾಖೆಯಲ್ಲಿನ ಪ್ರಕರಣಗಳ ವಿಲೇವಾರಿ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ. ಅರೆ ನ್ಯಾಯಿಕ ಪ್ರಕರಣಗಳು ಇತ್ಯರ್ಥವಾಗುವಲ್ಲಿ ತೀವ್ರ ವಿಳಂಬವಾಗುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಸುತ್ತೋಲೆ ಹೊರಡಿಸಲಾಗಿದೆ.
ರಾಜೇಂದರ್ ಕುಮಾರ್ ಕಟಾರಿಯ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿ ಕುರಿತು ಎಂಬ ವಿಷಯವನ್ನು ಒಳಗೊಂಡಿದ್ದು, ಸರ್ಕಾರದ ಸುತ್ತೋಲೆ ದಿನಾಂಕ 18/10/2016, ದಿನಾಂಕ 18/2/2021 ಮತ್ತು ದಿನಾಂಕ 22/2/2021 ಉಲ್ಲೇಖಿಸಿದ್ದಾರೆ.

ಜಿಲ್ಲಾಧಿಕಾರಿಗಳ/ ಉಪ ವಿಭಾಗಾಧಿಕಾರಿಗಳ/ ತಹಶೀಲ್ದಾರರ ನ್ಯಾಯಾಲಯಗಳಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಮತ್ತು ಇತರೆ ಕಾಯ್ದೆಗಳ ಅಡಿಯಲ್ಲಿ ದಾಖಲಾಗುವ ಅರ್ಜಿಗಳು ಮತ್ತು ಮೇಲ್ಮನವಿಯಂತಹ ಅರೆ ನ್ಯಾಯಿಕ ಪ್ರಕರಣಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ತಮ್ಮ ಶಾಸನಬದ್ಧ ಅಧಿಕಾರವನ್ನು ಚಲಾಯಿಸಿ ಕಾನೂನಿನನ್ವಯ ವಿಚಾರಣೆ ಕೈಗೊಂಡು ಅರೆ ನ್ಯಾಯಿಕ ತೀರ್ಪು/ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಸುತ್ತೋಲೆ ಹೇಳಿದೆ.
ಸುತ್ತೋಲೆಗಳಲ್ಲಿನ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದರ ಜೊತೆಗೆ, ಕಂದಾಯ ನ್ಯಾಯಾಲಯಗಳಲ್ಲಿನ ಅರೆ ನ್ಯಾಯಿಕ ಪ್ರಕರಣಗಳ ವಿಚಾರಣೆಯನ್ನು ವಾರದ ಪ್ರತಿ ಮಂಗಳವಾರ ಮತ್ತು ಗುರುವಾರಗಳಂದು ಪೂರ್ಣ ದಿನ ಕಡ್ಡಾಯವಾಗಿ ನಡೆಸುವಂತೆ ಹಾಗೂ ಸದರಿ ದಿನಗಳಂದು ನ್ಯಾಯಾಲಯಗಳ ಕಲಾಪಗಳನ್ನು ನಡೆಸಲು ಸಾಧ್ಯವಾಗದಿರುವ ಯಾವುದಾದರೂ ಅನಿವಾರ್ಯ ಅಡಳಿತಾತ್ಮಕ ಕಾರಣಗಳಿದ್ದಲ್ಲಿ ಸಂಬಂಧಪಟ್ಟ ಮೇಲಧಿಕಾರಿಗಳ ಅನುಮತಿ ಪಡೆಯುವುದು ಹಾಗೂ ಸದರಿ ದಿನದ ಕಲಾಪವನ್ನು ಅದೇ ವಾರದ ಮತ್ತೊಂದು ದಿನದಂದು ನಡೆಸಲು ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.
ಮಾನ್ಯ ಕಂದಾಯ ಸಚಿವರು ಇತ್ತೀಚಿನ ದಿನಗಳಲ್ಲಿ ನಡೆಸಿದ ಎಲ್ಲಾ ಕಂದಾಯ ವಿಭಾಗಗಳ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿಯಲ್ಲಿ ಹಲವು ನ್ಯೂನತೆಗಳನ್ನು ಗಮನಿಸಿದ್ದು, ಇದರಿಂದ ಅರೆ ನ್ಯಾಯಿಕ ಪ್ರಕರಣಗಳು ಇತ್ಯರ್ಥವಾಗುವಲ್ಲಿ ತೀವ್ರ ವಿಳಂಬವಾಗುತ್ತಿರುವುದನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿರುತ್ತದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
* ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಅರೆ ನ್ಯಾಯಿಕ ಪ್ರಕರಣಗಳು ಹಲವು ವರ್ಷಗಳ ಕಾಲ ವಿಲೇವಾರಿಯಾಗದೆ ಬಾಕಿ ಉಳಿದಿರುವುದು
* ಪ್ರಕರಣಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸುವುದು ತದನಂತರ ಹಲವು ದಿನಾಂಕಗಳಿಗೆ ವಿನಾಕಾರಣ ಮುಂದೂಡುತ್ತಿರುವುದು.
* ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿದ ದಿನದಂದು ವಿಚಾರಣಾಧಿಕಾರಿಯು ಅನ್ಯ ಕಾರ್ಯದ ನಿಮಿತ್ತ ಕಚೇರಿಯಿಂದ ಹೊರಗಿರುವುದಾಗಿ ಪ್ರಕರಣದ ಕಡತದಲ್ಲಿ ನಮೂದಿಸಿರುವುದು.
* ಪ್ರಕರಣಗಳ ಇತ್ಯರ್ಥಕ್ಕೆ ಕಾಲಮಿತಿ ನಿಗದಿ ಸೇರಿದಂತೆ ನೀಡಲಾಗಿರುವ ಹಲವು ನಿರ್ದೇಶನಗಳನ್ನು ಪರಿಣಾಮಕಾರಿಯಾಗಿ ಪಾಲನೆ ಮಾಡದಿರುವುದು
ಇಂತಹ ಅಂಶಗಳು ಕಂಡುಬಂದಿದ್ದು, ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿಯ ವಿಳಂಬದಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲಗಳನ್ನು ತಪ್ಪಿಸಲು ಹಾಗೂ ಆಡಳಿತ ವ್ಯವಸ್ಥೆಯನ್ನು ಉತ್ತಮಪಡಿಸುವ ದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.
ಸೂಚಿಸಲಾದ ಕ್ರಮಗಳು
* ವಾರದ ಪ್ರತಿ ಮಂಗಳವಾರ ಮತ್ತು ಗುರುವಾರಗಳಂದು ಸರ್ಕಾರದ ನಿರ್ದೇಶನದ ಕಾರ್ಯಕ್ರಮಗಳನ್ನು ಹೊರತುಪಡಿಸಿ, ಇತರೆ ಯಾವುದೇ ಸ್ಥಳ ಪರಿಶೀಲನೆ, ಸಭೆ, ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಕಡ್ಡಾಯವಾಗಿ ಕಲಾಪಗಳನ್ನು ನಡೆಸತಕ್ಕದ್ದು.
* ಸ್ಥಳೀಯ ಶಾಸಕರಿಗೆ ಸಾಧ್ಯವಾದಷ್ಟು ಸದರಿ ದಿನಾಂಕಗಳಂದು ಯಾವುದೇ ಸಭೆ ಸಮಾರಂಭಗಳನ್ನು ಅನಿವಾರ್ಯವಿಲ್ಲದಿದ್ದಲ್ಲಿ ಕೈಗೊಳ್ಳದಂತೆ ಕೋರಿಕೆ ಸಲ್ಲಿಸುವುದು.
* ನಿಗದಿಪಡಿಸಲಾದ ದಿನಾಂಕಗಳಂದು ಪ್ರಕರಣಗಳನ್ನು ಮುಂದೂಡದೆ ಕಾಲಮಿತಿಯೊಳಗೆ ಇತ್ಯರ್ಥಪಡಿಸಿ ಸೂಕ್ತ ಆದೇಶಗಳನ್ನು ಹೊರಡಿಸಲು ಕ್ರಮವಹಿಸತಕ್ಕದ್ದು.
* ಯಾವುದೇ ನಿಷ್ಟಾಚಾರದ ಕರ್ತವ್ಯವನ್ನು ಕೈಗೊಳ್ಳಬೇಕಾದ ಸಂದರ್ಭದಲ್ಲಿ ನ್ಯಾಯಾಲಯದ ಕಲಾಪಗಳನ್ನು ಸುಗಮವಾಗಿ ನಡೆಸಲು ಅಧೀನ ಅಧಿಕಾರಿಗಳನ್ನು ನಿಯೋಜಿಸತಕ್ಕದ್ದು.
* ಅರೆ ನ್ಯಾಯಿಕ ಪ್ರಕರಣಗಳ ವಿಲೇವಾರಿ ವಿಷಯಯನ್ನು ಕೆ.ಡಿ.ಪಿ. ಸಭೆಯಲ್ಲಿ ಸೇರ್ಪಡೆ ಮಾಡಿ, ಸರ್ಕಾರದ ನಿರ್ದೇಶನವನ್ನು ಅನುಷ್ಠಾನಗೊಳಿಸುವ ಕುರಿತು ಜನಪ್ರತಿನಿಧಿಗಳ ಸಹಕಾರ ಕೋರುವುದು.












Click it and Unblock the Notifications