ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ ಮುಕುಟ ಯಾರಿಗೆ?
ಅಧ್ಯಕ್ಷ ಸ್ಥಾನವೂ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಹಲವು ಕಾಂಗ್ರೆಸ್ ನಾಯಕರ ಮಕ್ಕಳು ಕಣದಲ್ಲಿದ್ದಾರೆ.
ಬೆಂಗಳೂರು, ಮೇ 14: ಎಲ್ಲರೂ ಕೆಪಿಸಿಸಿಯ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಚರ್ಚೆಯಲ್ಲಿದ್ದರೆ ಅತ್ತ ಸದ್ದಿಲ್ಲದೆ ಯುವ ಕಾಂಗ್ರೆಸ್ ಗೆ ಚುನಾವಣೆಗಳು ನಡೆಯುತ್ತಿವೆ.
ಭಾನುವಾರದಿಂದ ಆರಂಭವಾಗಿ ಮೇ 17ರವರೆಗೆ ವಿವಿಧ ಭಾಗಗಳಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಒಟ್ಟು 3,76,000 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.
ಅಧ್ಯಕ್ಷ ಸ್ಥಾನವೂ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳ ಸ್ಥಾನಕ್ಕೆ ಹಲವು ಕಾಂಗ್ರೆಸ್ ನಾಯಕರ ಮಕ್ಕಳು ಕಣದಲ್ಲಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಒಟ್ಟು 8 ಜನ ಕಣ್ಣಿಟ್ಟಿದ್ದಾರೆ. ಅಮೃತಾಗೌಡ, ಬಸವನಗೌಡ ಬಾದರ್ಲಿ, ಉಮೇಶ್ ಬೋರೇಗೌಡ, ಬೈರೇಗೌಡ, ರಾಜೇಂದ್ರ, ಶಿವಕುಮಾರ್, ಕೆಂಪರಾಜ್, ಪುಷ್ಪಲತಾ, ಸಾಮಿಯ ತಬರೇಜ್ ಕಣದಲ್ಲಿದ್ದಾರೆ. ಇವರಲ್ಲಿ ಶಾಸಕ ಕೆ.ಎಸ್ ರಾಜಣ್ಣ ಪುತ್ರ ಆರ್. ರಾಜೇಂದ್ರ ಹಾಗೂ ಮತ್ತೊಬ್ಬ ಶಾಸಕ ಹಂಪನಗೌಡ ಬಾದರ್ಲಿ ಸಹೋದರರ ಪುತ್ರ ಬಸವನಗೌಡ ಬಾದರ್ಲಿ ಮಧ್ಯೆ ರಾಜ್ಯಾಧ್ಯಕ್ಷ ಹುದ್ದೆಗೆ ಪೈಪೋಟಿ ಇದೆ.
ಇನ್ನು 18 ರಂದು ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಅಧ್ಯಕ್ಷರ ಆಯ್ಕೆಗೆ ಮತ ಎಣಿಕೆ ನಡೆಯಲಿದೆ. ಮೇ 19ರಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತ ಎಣಿಕೆ ಬೆಂಗಳೂರಿನ ಕಿಂಗ್ಸ್ ಕೋರ್ಟ್ ಅರಮನೆ ಮೈದಾನದಲ್ಲಿ ನಡೆಯಲಿದೆ.
ರಾಜಕಾರಣಿಗಳ ಮಕ್ಕಳದ್ದೇ ಕಾರುಬಾರು
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಲವು ಕಾಂಗ್ರೆಸ್ ನಾಯಕರ ಮಕ್ಕಳು ಸ್ಪರ್ಧಿಸಿದ್ದರೆ ಅತ್ತ ಉಳಿದ ಪದಾಧಿಕಾರಿಗಳ ಹುದ್ದೆಯೂ ಇದೇ ರಾಜಕಾರಣಿ ಮಕ್ಕಳ ಪಾಲಾಗುವ ಸಾಧ್ಯತೆಗಳಿವೆ.
ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಕಣಕ್ಕಿಳಿದಿದ್ದಾರೆ. ಇದೇ ಸ್ಥಾನಕ್ಕೆ ಬಿಕೆ ಶಿವರಾಂ ಪುತ್ರ ರಕ್ಷಿತ್ ಶಿವರಾಂ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಹಾಸನ ಜಿಲ್ಲಾಧ್ಯಕ್ಷ ಹುದ್ದೆಗೆ ಸಚಿವ ಎ ಮಂಜು ಪುತ್ರ ಮಂಥರ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಚಿವ ಎಂ.ಆರ್ ಸೀತಾರಾಂ ಮಗ ರಕ್ಷ ಸೀತಾರಾಂ, ಬೆಂಗಳೂರು ಮಹಾ ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಾಸಕ ಎನ್.ಎ ಹ್ಯಾರಿಸ್ ಮಗ ನಲಪಾಡ್ ಹ್ಯಾರಿಸ್ ಕಣಕ್ಕಿಳಿದಿದ್ದಾರೆ.












Click it and Unblock the Notifications