ಕಡೂರು ಶಾಸಕ ದತ್ತಾ ಗೂಂಡಾಗಿರಿಗೆ ಛೀಮಾರಿ!
ಚಿಕ್ಕಮಗಳೂರು, ಆ.12: ಜೆಡಿಎಸ್ ನಾಯಕ, ಕಡೂರು ಶಾಸಕ ವೈ.ಎಸ್.ವಿ.ದತ್ತಾ ಅವರ ವಿರುದ್ಧ ಗೂಂಡಾಗಿರಿ ಆರೋಪ ಹೊರೆಸಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಅಪಮಾನ ಮಾಡುವಂತೆ ವರ್ತಿಸಿದ್ದಾರೆ. ದತ್ತಾ ಅವರು ಕೂಡಲೇ ಬೇಷರತ್ ಕ್ಷಮೆಯಾಚಿಸಬೇಕು ಎಂದು ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಭಾಗ್ಯ ರಂಗನಾಥ್ ಆಗ್ರಹಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ರಂಗನಾಥ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈಎಸ್ ವಿ ದತ್ತಾ ಅವರು ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದಿದ್ದಾರೆ. ಭಾಗ್ಯ ಅವರಿಗೆ ಮಾಜಿ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರ ಬೆಂಬಲವೂ ಸಿಕ್ಕಿದೆ.
ಕಳೆದ ಶನಿವಾರ ಜಿಪಂ ಸಿ.ಇ.ಒ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಕಡೂರು ತಾಲೂಕು ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆ ಕರೆದಿದ್ದರು. ಅಲ್ಲಿಗೆ ಕಡೂರು ಬರ ಪೀಡಿತ ಪ್ರದೇಶವಾದ ಹಿನ್ನೆಲೆಯಲ್ಲಿ ಸಮಸ್ಯೆಗಳಿದ್ದಲ್ಲಿ ಆಲಿಸುವ ಉದ್ದೇಶದಿಂದ ತಾಪಂ ಸಭಾಂಗಣಕ್ಕೆ ಭಾಗ್ಯ ರಂಗನಾಥ್ ತೆರಳಿದ್ದರು.
ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ಹಿಂಬಾಲಕರೊಂದಿಗೆ ಸಭಾಂಗಣಕ್ಕೆ ಬಂದ ದತ್ತಾ ಏಕಾಏಕಿ ಎಂಟ್ರಿ ಕೊಟ್ಟಿದ್ದಾರೆ. [ದೀಪದ ಕೆಳಗೆ ಕತ್ತಲೆ: ಚಿಕ್ಕಮಗಳೂರಲ್ಲಿ ಜಲ ಅಭಾವ]

ಜಿ.ಪಂ ಅಧ್ಯಕ್ಷೆ ಭಾಗ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಡೂರಿನ ಶಾಸಕನಾದ ತಮಗೆ ತಿಳಿಸದೆ ಅಧಿಕಾರಿಗಳ ಸಭೆ ನಡೆಸುತ್ತಿರುವುದು ಸರಿಯಲ್ಲ. ಇಲ್ಲಿ ನಾನು ಹೇಳಿದಂತೆಯೇ ನಡೆಯಬೇಕು ಎಂದು ಹೇಳಿ ಗೂಂಡಾ ವರ್ತನೆ ತೋರಿದ್ದಾರೆ ಎನ್ನಲಾಗಿದೆ.
ಶಾಸಕರಿಗೆ ಅವರ ತಾಲೂಕಿನಲ್ಲಿ ಮಾತ್ರ ಸಭೆ ನಡೆಸಲು ಅವಕಾಶವಿದೆ. ಅದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಎಲ್ಲಾ ತಾಲೂಕುಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲು ಅವಕಾಶವಿರುತ್ತದೆ. ಇದನ್ನು ಶಾಸಕ ದತ್ತಾ ಅರ್ಥಮಾಡಿಕೊಳ್ಳಬೇಕಿತ್ತು. ಸಭ್ಯ ರಾಜಕಾರಣಿ ಎನಿಸಿಕೊಂಡಿರುವ ದತ್ತ ಅವರು ಜಿ.ಪಂ ಅಧ್ಯಕ್ಷರು ಸೇರಿದಂತೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯುವಂತಿಲ್ಲ ಎಂಬ ಸುತ್ತೋಲೆಯನ್ನು ಸರ್ಕಾರದಿಂದ ತೆಗೆದುಕೊಂಡು ಬರಲಿ ಎಂದಿದ್ದಾರೆ.












Click it and Unblock the Notifications