ಸಿಟಿ ರವಿ ತವರಾದ ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು: 'ಬದುಕು ಮತ್ತು ಭಾವನೆ' ನಡುವಿನ ವ್ಯತ್ಯಾಸ ಅರ್ಥ ಮಾಡಿಸಿದ ಜನ
ಬೆಂಗಳೂರು, ಮೇ 13: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ( Karnataka Assembly Elections 2023 ) ಹೊರಬಂದಿದೆ. ಆಡಳಿತಾರೂಢ ಬಿಜೆಪಿಯು ಭಾರೀ ಹಿನ್ನೆಡೆ ಅನುಭವಿಸಿದೆ. ಹಿಂದುತ್ವ ಪ್ರತಿಪಾದಕ ಹಾಗೂ ಬಿಜೆಪಿ ಮಾಜಿ ಸಿಟಿ ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಇಷ್ಟೇ ಅಲ್ಲದೇ ಚಿಕ್ಕಮಗಳೂರಿನ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ.
ಬಿಜೆಪಿ ಭದ್ರ ಕೋಟೆಯನ್ನು ನುಚ್ಚು ನೂರು ಮಾಡುವಲ್ಲಿ ಕಾಂಗ್ರೆಸ್ ಸಫಲವಾಗಿದೆ. ಜಿಲ್ಲೆಯ ಐದಕ್ಕೆ ಐದು ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಒಲಿದಿವೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಎಚ್ ಡಿ ತಮ್ಮಯ್ಯ, ಮೂಡಿಗೆರೆ ಕ್ಷೇತ್ರದಲ್ಲಿ ನಯನ ಮೋಟಮ್ಮ, ಶೃಂಗೇರಿ ಟಿ ಡಿ ರಾಜೇಗೌಡ, ತರೀಕೆರೆ ಜಿ ಎಚ್ ಶ್ರೀನಿವಾಸ್ ಹಾಗೂ ಕಡೂರು ಕೆ ಎಸ್ ಆನಂದ್ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದಲೇ ಬಿಜೆಪಿ ವಾಷ್ ಔಟ್ ಆದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆಯನ್ನಾಗಿ ಪರಿವರ್ತಿಸಲು ಬಿಜೆಪಿ ಸಫಲವಾಗಿತ್ತು. ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿರುವ ದತ್ತ ಪೀಠ ವಿವಾದವನ್ನು ಮುನ್ನೆಲೆಗೆ ತಂದು ಸಂಘ ಪರಿವಾರದ ಆಶೋತ್ತರಗಳನ್ನು ಜಿಲ್ಲೆಯಾದ್ಯಂತ ಹರಡಲು ಯಶಸ್ವಿಯಾಗಿತ್ತು.
ಚಿಕ್ಕಮಗಳೂರು ಕ್ಷೇತ್ರದ ಶಾಸಕರಾಗಿದ್ದ ಸಿಟಿ ರವಿ ಅವರು ಪ್ರಬಲ ಹಿಂದುತ್ವವಾದಿಗಳು. ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯೂ ಹೌದು. ಆರ್ಎಸ್ಎಸ್ ಹಾಗೂ ಸಂಘ ಪರಿವಾರಕ್ಕೆ ಹತ್ತಿರದವರೂ ಹೌದು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಸಿಟಿ ರವಿ ಭಾರೀ ಅಂತರದ ಸೋಲು ಕಂಡಿದ್ದಾರೆ. ಅವರ ಆಪ್ತರಾಗಿದ್ದ ಕಾಂಗ್ರೆಸ್ನ ತಿಮ್ಮಯ್ಯ ಅವರಿಂದಲೇ ಪರಾಭವಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ, ಚಿಕ್ಕಮಗಳೂರು ಜಿಲ್ಲೆಯ ಜನರು ಬಿಜೆಪಿ ಹಾಗೂ ಸಂಘ ಪರಿವಾರದ ಹಿಂದುತ್ವಕ್ಕೆ ಮರಳಾಗದೇ ಬದುಕಿನ ಅನಿವಾರ್ಯತೆಗಳನ್ನು ಅರಿತುಕೊಂಡು ಮತ ಚಲಾಯಿಸಿದ್ದಾರೆ ಎಂಬ ವಾದವೊಂದು ಹುಟ್ಟಿಕೊಂಡಿದೆ.

ಬೆಲೆ ಏರಿಕೆ, ಭ್ರಷ್ಟಾಚಾರ, ಕೋಮುವಾದದಂತಹ ಸಮಸ್ಯೆಗಳ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಬದುಕಿನ ಅನಿವಾರ್ಯತೆ ಹಾಗೂ ಭಾವನೆಗಳ ನಡುವಿನ ವ್ಯತ್ಯಾಸವನ್ನು ನಾಯಕರಿಗೆ ಜನರು ಅರ್ಥ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಚಿಕ್ಕಮಗಳೂರು ಜಿಲ್ಲೆಯ ಅಂಕಿಅಂಶಗಳು:
ಚಿಕ್ಕಮಗಳೂರು ಕ್ಷೇತ್ರ
ಎಚ್.ಡಿ. ತಮ್ಮಯ್ಯ ಕಾಂಗ್ರೆಸ್ : 85054
ಸಿ.ಟಿ.ರವಿ ಬಿಜೆಪಿ : 79128
ಜೆಡಿಎಸ್ : 1763
ಗೆಲುವಿನ ಅಂತರ : 5926
---------------
ಕಡೂರು ವಿಧಾನಸಭೆ ಕ್ಷೇತ್ರ
ಕಾಂಗ್ರೆಸ್ ಗೆಲುವು
ಕೆ.ಎಸ್. ಆನಂದ್ : ಕಾಂಗ್ರೆಸ್ : 75476
ಬೆಳ್ಳಿ ಪ್ರಕಾಶ್ : ಬಿಜೆಪಿ : 63469
ವೈವಿಎಸ್ ದತ್ತ : ಜೆಡಿಎಸ್ : 26837
ಗೆಲುವಿನ ಅಂತರ : 12007
----------------------
ತರೀಕೆರೆ ವಿಧಾನಸಭೆ ಕ್ಷೇತ್ರ
ಕಾಂಗ್ರೆಸ್ ಗೆಲುವು
ಶ್ರೀನಿವಾಸ್ : ಕಾಂಗ್ರೆಸ್ : 63086
ಡಿ.ಎಸ್.ಸುರೇಶ್ : ಬಿಜೆಪಿ : 50955
ಗೋಪಿಕೃಷ್ಣ : ಪಕ್ಷೇತರ : 35468
ಗೆಲುವಿನ ಅಂತರ : 12131
---------------------
ಶೃಂಗೇರಿ ವಿಧಾನಸಭೆ ಕ್ಷೇತ್ರ
ಕಾಂಗ್ರೆಸ್ ಗೆಲುವು
ಟಿ ಡಿ ರಾಜೇಗೌಡ : ಕಾಂಗ್ರೆಸ್ : 59171
ಡಿ.ಎನ್.ಜೀವರಾಜ್ : ಬಿಜೆಪಿ : 58970
ಸುಧಾಕರ ಶೆಟ್ಟಿ : ಜೆಡಿಎಸ್ : 19417
ಅಂತರ : 201
------------------------
ಮೂಡಿಗೆರೆ :
ಕಾಂಗ್ರೆಸ್ ಗೆಲುವು
ನಯನಮೋಟಮ್ಮ : ಕಾಂಗ್ರೆಸ್ : 50843
ದೀಪಕ್ ದೊಡ್ಡಯ್ಯ : ಬಿಜೆಪಿ : 50121
ಎಂ.ಪಿ.ಕುಮಾರಸ್ವಾಮಿ : ಜೆಡಿಎಸ್ : 26038
ಅಂತರ : 722












Click it and Unblock the Notifications