ಚಿಕ್ಕಮಗಳೂರು : ಮಹಿಳೆ ಕೊಂದಿದ್ದ ಹುಲಿ ಸೆರೆ
ಚಿಕ್ಕಮಗಳೂರು, ನ.17 : ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ ಅರಣ್ಯ ಪ್ರದೇಶದ ವ್ಯಾಪ್ತಿಯ ಪಂಡರವಳ್ಳಿಯಲ್ಲಿ ಒಂದು ವಾರದಿಂದ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆ ಹಿಡಿಯುವಲ್ಲಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಒಬ್ಬರು ಮಹಿಳೆ ಮತ್ತು ಒಂದು ಹಸುವನ್ನು ಹುಲಿ ಬಲಿ ತೆಗೆದುಕೊಂಡಿತ್ತು. ಹುಲಿಯನ್ನು ಬನ್ನೇರುಘಟ್ಟಕ್ಕೆ ಸಾಗಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಪಂಡರವಳ್ಳಿ ಸಮೀಪ ಸೋಮವಾರ ಮಧ್ಯಾಹ್ನ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪಂಡರವಳ್ಳಿ ಗ್ರಾಮದ ಸುತ್ತಮುತ್ತ ಇಂದು ಮುಂಜಾನೆ 4 ಗಂಟೆಗೂ ಹುಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು.

ಕಳೆದ ಗುರುವಾರ ಕಾರಿನಲ್ಲಿ ಹೋಗುತ್ತಿದ್ದವರನ್ನು ಅಟ್ಟಿಸಿಕೊಂಡು ಬಂದಿದ್ದ ಹುಲಿ, ಶನಿವಾರ ಬೆಳಗ್ಗೆ ಪಂಡರವಳ್ಳಿಯಲ್ಲಿ ಕಾಫಿ ತೋಟದ ಕೆಲಸಕ್ಕೆ ಹೋಗುತ್ತಿದ್ದ ಸುಮಿತ್ರಾ (25) ಎಂಬ ಮಹಿಳೆ ಮೇಲೆ ದಾಳಿ ಮಾಡಿ, ಆಕೆಯನ್ನು ಕೊಂದು ಹಾಕಿತ್ತು. [ಮೈಸೂರಿನಲ್ಲಿ ಅಮೃತ, ಶಿವನನ್ನು ನೋಡಿ ಬನ್ನಿ]
ಅಂದಿನಿಂದಲೇ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಹಿಡಿಯಲು ಬೋನು ಇಟ್ಟಿದ್ದರು. ಭಾನುವಾರ ರಾತ್ರಿ ಗ್ರಾಮದ ಸಮೀಪ ಬಂದಿದ್ದ ಹುಲಿ ಒಂದು ಹಸುವುನ್ನು ಕೊಂದು ತಿಂದಿತ್ತು, ಇಂದು ಬೆಳಗ್ಗೆ ಗ್ರಾಮದ ಬಳಿ ಪುನಃ ಕಾಣಿಸಿಕೊಂಡು ಆತಂಕ ಮೂಡಿಸಿತ್ತು.
ದಾಳಿ ಮಾಡಿದ್ದು ಇದೇ ಮೊದಲು : ಪಂಡರವಳ್ಳಿ ಗ್ರಾಮದ ಸುತ್ತಮುತ್ತಲೂ ಹುಲಿ ಅನೇಕ ಬಾರಿ ಕಾಣಿಸಿಕೊಂಡಿದ್ದರೂ ಮನುಷ್ಯರ ಮೇಲೆ ದಾಳಿ ಮಾಡಿದ ಪ್ರಕರಣ ಇದೇ ಮೊದಲು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹುಲಿ ದಾಳಿಯಿಂದ ಈ ಭಾಗದ ಗ್ರಾಮಸ್ಥರು ಆತಂಕಗೊಂಡಿದ್ದರು. ಸದ್ಯ ಹುಲಿ ಸೆರೆಸಿಕ್ಕಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications