ಸಿದ್ದರಾಮಯ್ಯ ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ
ಬೆಂಗಳೂರು, ಮಾರ್ಚ್ 26 : ರಾಜ್ಯದಲ್ಲಿ ಸಂಪುಟ ಪುನಾರಚನೆ ಮಾತುಕತೆ ಆರಂಭವಾಗಿದೆ. ಬಜೆಟ್ ಅಧಿವೇಶನ ಮುಗಿದ ನಂತರ ಸಂಪುಟ ಪುನಾಚರನೆಗೆ ಚಾಲನೆ ಸಿಗಲಿದ್ದು, ಮಾ.31ರಂದು ಅಧಿವೇಶನ ಪೂರ್ಣಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.
ಸಂಪುಟದಲ್ಲಿರುವ 10 ರಿಂದ 12 ಅಸಮರ್ಥ ಸಚಿವರ ಪಟ್ಟಿಯೊಂದಿಗೆ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಅಧಿವೇಶನ ಮುಗಿದ ಕೂಡಲೇ ಸಂಪುಟ ಪುನಾರಚನೆಗೆ ಪ್ರಕ್ರಿಯೆಗೆ ಹೈಕಮಾಂಡ್ ಚಾಲನೆ ನೀಡಲು ನಿರ್ಧರಿಸಿದ್ದು, ಕನಿಷ್ಟ ಪಕ್ಷ 12 ಮಂದಿ ಹಾಲಿ ಮಂತ್ರಿಗಳು ಸಚಿವ ಸ್ಥಾನ ಕೆಳೆದುಕೊಳ್ಳಲಿದ್ದಾರೆ. [ಸಿದ್ದರಾಮಯ್ಯ ಸಂಪುಟಕ್ಕೆ ನಾಲ್ವರು ಹೊಸ ಸಚಿವರ ಸೇರ್ಪಡೆ]
ವಯಸ್ಸಾದವರು, ಅದಕ್ಷರು, ಅಸಮರ್ಥ ಸಚಿವರ ಕುರಿತು ಹಲವು ದೂರುಗಳು ಬರುತ್ತಿದ್ದು ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಅನಿವಾರ್ಯವಾಗಿದೆ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಹಾಲಿ ಸಂಪುಟದಲ್ಲಿರುವ ಸಚಿವರ ಕಾರ್ಯಕ್ಷಮತೆಯ ವಿವರ ಇರುವ ವಿವರವಾದ ಪಟ್ಟಿಯನ್ನು ಸಿದ್ದಗೊಳಿಸಿಕೊಂಡು ಬರುವಂತೆ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ. [ಸಂಪುಟ ಸೇರುವವರ ಪಟ್ಟಿ ದಿಢೀರ್ ಬದಲಾವಣೆ]
ರಾಜ್ಯದಲ್ಲಿರುವ ಅಸಮರ್ಥ ಸಚಿವರ ಬಗ್ಗೆ ಹೈಕಮಾಂಡ್ ಈಗಾಗಲೇ ಹಲವು ಮೂಲಗಳಿಂದ ಮಾಹಿತಿ ತರಿಸಿಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯ ಒಳಗಾಗಿ ಸರ್ಕಾರದ ವರ್ಚಸ್ಸು ಹೆಚ್ಚಿಸುವ ಉದ್ದೇಶದಿಂದ ಹೈಕಮಾಂಡ್ ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಿದೆ. ಇದರ ಭಾಗವಾಗಿಯೇ ಪುನಾರಚನೆಗೆ ಕೈ ಹಾಕಲಾಗಿದೆ....[ಅಸಮರ್ಥ ಸಚಿವರನ್ನು ಕೈಬಿಡಿ, ಹೊಸಬರಿಗೆ ಅವಕಾಶ ಕೊಡಿ]

ಕೆಲಸ ಮಾಡದ ಸಚಿವರಿಗೆ ಸ್ಥಾನವಿಲ್ಲ?
ಯಾವ ಸಚಿವರು ತಮ್ಮ ಇಲಾಖೆಯಲ್ಲಿ ಅರ್ಧದಷ್ಟೂ ಸಾಧನೆಯನ್ನೂ ಮಾಡಲಿಲ್ಲವೋ? ಅಂತಹ ಸಚಿವರನ್ನು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಲೇಬೇಕು ಎಂದು ಈಗಾಗಲೇ ಹೈಕಮಾಂಡ್ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ಈಗಾಗಲೇ ಸಚಿವರ ಪಟ್ಟಿಯ ತಯಾರು ಮಾಡುವ ಕಸರತ್ತು ಆರಂಭಿಸಿದ್ದಾರೆ.

ಯಾವ ಸಚಿವರು ಅನುದಾನ ಬಳಸಿಲ್ಲ
ಆಯಾ ವರ್ಷ ಒಂದು ಇಲಾಖೆಗೆ ನಿಗದಿ ಮಾಡಿದ ಹಣವೆಷ್ಟು? ಈ ಪೈಕಿ ಬಿಡುಗಡೆಯಾದ ಹಣದಲ್ಲಿ ಶೇಕಡಾ ಐವತ್ತಕ್ಕಿಂತ ಕಡಿಮೆ ಹಣ ವೆಚ್ಚ ಮಾಡಿದವರು ಯಾರು? ಎಂದು ಮೊದಲ ಕಂತಿನಲ್ಲಿ ಪರೀಕ್ಷೆ ನಡೆದಿದೆ. ಎರಡನೇ ಕಂತಿನಲ್ಲಿ ಶೇಕಡಾ ಅರವತ್ತಕ್ಕಿಂತ ಕಡಿಮೆ ಸಾಧನೆ ಮಾಡಿದವರ ವಿವರವನ್ನು ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರು ಪಡೆಯಲಿದ್ದು, ನಂತರ ಸಚಿವರ ಪಟ್ಟಿ ತಯಾರಿಸಲಿದ್ದಾರೆ.

ಸಚಿವ ಸಂಪುಟದಿಂದ ಯಾರು ಹೊರಕ್ಕೆ ಹೋಗಬೇಕು?
ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ನೀಡುವ ವರದಿ ಆಧಾರದ ಮೇಲೆ ಹೈಕಮಾಂಡ್ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಯಾರು ಸಚಿವ ಸಂಪುಟಕ್ಕೆ ಸೇರಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಈ ವಿಷಯದಲ್ಲಿ ನೀವು ಯಾವ ಮುಲಾಜಿಗೂ ಒಳಗಾಗುವ ಅಗತ್ಯವಿಲ್ಲ ಎಂದು ಹೈಕಮಾಂಡ್ ನೇರ ಮಾತುಗಳಲ್ಲಿ ಹೇಳಿದ್ದು ಆ ಮೂಲಕ ಸಿದ್ದರಾಮಯ್ಯ ಅವರು ದೊಡ್ಡ ತಲೆನೋವಿನಿಂದ ಪಾರಾದಂತಾಗಿದೆ.

ಸಿದ್ದರಾಮಯ್ಯ ಅವರ ಲೆಕ್ಕಾಚಾರ
ಹೈಕಮಾಂಡ್ ಹೇಳಿದಂತೆ ಸಚಿವರ ಸಾಧನೆಗಳ ಮೌಲ್ಯಮಾಪನ ಮಾಡಿದ ಪಟ್ಟಿಯನ್ನು ದೆಹಲಿಗೆ ಕೊಟ್ಟು ಬರುವುದು, ಆನಂತರ ಇಂತಿಂತವರು ಸಚಿವ ಸಂಪುಟಕ್ಕೆ ಸೇರಬೇಕು ಎಂದು ಅದು ಹೇಳುವವರಿಗೆ ಅವಕಾಶ ಕಲ್ಪಿಸುವುದು. ಹೀಗೆ ಮಾಡಿದರೆ ಬಂಡಾಯ ಪ್ರಕ್ರಿಯೆಗೆ ಅವಕಾಶವೇ ಇಲ್ಲದಂತಾಗುತ್ತದೆ ಮತ್ತು ಮಂತ್ರಿಗಿರಿ ಕಳೆದುಕೊಂಡವರಿಗೆ ಹೈಕಮಾಂಡ್ನ ಯಾವ ಮೂಲೆಗಳಿಂದಲೂ ಕುಮ್ಮಕ್ಕು ದೊರೆಯದೆ ಇದ್ದರೆ ಸುಮ್ಮನೆ ಇರಬೇಕಾಗುತ್ತದೆ ಎಂಬುದು ಲೆಕ್ಕಾಚಾರ.

ಹೈಕಮಾಂಡ್ ಹೇಳುವುದೇನು?
ಕೆಲಸ ಮಾಡದವರು ಮಂತ್ರಿಗಳಾಗಿರುವ ಬದಲು ಪಕ್ಷ ಕಟ್ಟಲು ಹೋಗಲಿ. ಪಕ್ಷ ಕಟ್ಟಲಾಗದಿದ್ದರೆ ಕನಿಷ್ಟ ಪಕ್ಷ ಮನೆಗಾದರೂ ಹೋಗಲಿ. ಮುಂದಿನ ಚುನಾವಣೆಯ ವೇಳೆಗೆ ಅವರ ಜಾಗಕ್ಕೆ ಸೂಕ್ತ ಅಭ್ಯರ್ಥಿಗಳನ್ನಾದರೂ ತರಬಹುದು ಎಂದು ಹೈಕಮಾಂಡ್ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಪೂರ್ವಭಾವಿ ಚರ್ಚೆಯಲ್ಲಿ ಹೇಳಿದೆ.












Click it and Unblock the Notifications