ದೆಹಲಿ ವಿಮಾನ ಹತ್ತಿದ ಡಿ. ಕೆ. ಶಿವಕುಮಾರ್ ಆತಂಕವೇನು?
ಬೆಂಗಳೂರು, ಮೇ 16; ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಸರ್ಕಾರ ರಚನೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ಮುಖ್ಯಮಂತ್ರಿ ಯಾರು?.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ಚುನಾವಣಾ ಫಲಿತಾಂಶ ಪ್ರಕಟಗೊಂಡ ಶನಿವಾರದಿಂದ ಸಿಎಂ ಯಾರು? ಎಂಬುದು ಎಲ್ಲರ ಕುತೂಹಲವಾಗಿದೆ.

ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಎಲ್ಲವನ್ನೂ ಹೈಕಮಾಂಡ್ ನಾಯಕರ ಹೆಗಲಿಗೆ ಹಾಕಿದೆ. ಆದ್ದರಿಂದ ಮುಖ್ಯಮಂತ್ರಿ ಆಯ್ಕೆ ವಿಚಾರ ದೆಹಲಿ ತಲುಪಿದೆ. ಸೋಮವಾರ ಮಧ್ಯಾಹ್ನ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಸಂಜೆ ಹೋಗಬೇಕಿದ್ದ ಡಿ. ಕೆ. ಶಿವಕುಮಾರ್ ಆರೋಗ್ಯದ ನೆಪವೊಡ್ಡಿ ಭೇಟಿ ಮುಂದೂಡಿದರು.
ಮಂಗಳವಾರ ಬೆಳಗ್ಗೆ ಡಿ. ಕೆ. ಶಿವಕುಮಾರ್ ದೆಹಲಿ ವಿಮಾನ ಏರಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಅವರಿಗಾಗಿ ಕಾಯುತ್ತಿದ್ದಾರೆ. ಇಂದು ಸಂಜೆಯ ವೇಳೆಗೆ ರಾಜ್ಯದ ನೂತನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಗುವ ನಿರೀಕ್ಷೆ ಇದೆ.

ಡಿ. ಕೆ. ಶಿವಕುಮಾರ್ ಆತಂಕವೇನು?; ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, "ನನಗೆ ಯಾರ ಬೆಂಬಲವೂ ಬೇಡ. ನನ್ನ ಜೊತೆ ಯಾವ ಶಾಸಕರೂ ಇಲ್ಲ. ಯಾರು, ಯಾರನ್ನು ಬೇಕಾದರೂ ಕರೆದುಕೊಂಡು ಹೋಗಲಿ. ಹೈಕಮಾಂಡ್ ನಾಯಕರು ಹೇಳಿದಂತೆ ನಾನು ಒಬ್ಬನೇ ದೆಹಲಿಗೆ ಹೋಗುತ್ತಿದ್ದೇನೆ" ಎಂದು ಹೇಳಿ ದೆಹಲಿ ವಿಮಾನ ಹತ್ತಿದ್ದಾರೆ. ಸಂಸದ, ಡಿ. ಕೆ. ಶಿವಕುಮಾರ್ ಸಹೋದರ ಡಿ. ಕೆ. ಸುರೇಶ್ ಈಗಾಗಲೇ ದೆಹಲಿಯಲ್ಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡಬೇಕು, ಅಧಿಕಾರ ಹಂಚಿಕೆ ಮಾಡುವುದಾದರೆ ಮೊದಲು ನನಗೆ ಅಧಿಕಾರ ನೀಡಬೇಕು ಎಂಬುದು ಡಿ. ಕೆ. ಶಿವಕುಮಾರ್ ಪ್ರಮುಖ ಬೇಡಿಕೆ. ಈ ಪಟ್ಟನ್ನು ಮೂರು ದಿನದಿಂದ ಅವರು ಸಡಿಲಿಸಿಲ್ಲ. ಆದ್ದರಿಂದ ಮುಖ್ಯಮಂತ್ರಿಯ ಆಯ್ಕೆ ಕಗ್ಗಂಟಾಗಿದೆ.
12 ಗಂಟೆಗೆ ಸೋನಿಯಾ ಗಾಂಧಿ ಶಿಮ್ಲಾದಿಂದ ದೆಹಲಿಗೆ ವಾಪಸ್ ಆಗಲಿದ್ದಾರೆ. ಡಿ. ಕೆ. ಶಿವಕುಮಾರ್ 1 ಗಂಟೆ ವೇಳೆಗೆ ದೆಹಲಿ ತಲುಪಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆ. ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲಾ ದೆಹಲಿಯಲ್ಲಿಯೇ ಇದ್ದು ಸರಣಿ ಸಭೆಗಳು ನಡೆಯುತ್ತಿವೆ.
ಡಿಕೆಶಿ ಆತಂಕ 01; ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ತಲಾ ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸೂತ್ರ ಹಣೆಯಲಾಗಿತ್ತು. ಆದರೆ ಅಲ್ಲಿನ ಮುಖ್ಯಮಂತ್ರಿಗಳು ಶಾಸಕರ ಬಲವಿದೆ ಎಂಬ ಕಾರಣಕ್ಕೆ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇದೇ ಮಾದರಿ ಕರ್ನಾಟಕದಲ್ಲಿಯೂ ಆಗುವುದಿಲ್ಲ? ಎನ್ನುವುದು ನಂಬುವುದು ಹೇಗೆ?.
ಡಿಕೆಶಿ ಆತಂಕ 02; ಸಿದ್ದರಾಮಯ್ಯ 2013ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾದರು. ಆದರೆ ಸಂಪುಟ ವಿಸ್ತರಣೆ ಮಾಡಿ ಡಿ. ಕೆ. ಶಿವಕುಮಾರ್ ಮತ್ತು ಡಾ. ಜಿ. ಪರಮೇಶ್ವರ್ಗೆ ಸಚಿವ ಸ್ಥಾನ ನೀಡಲು ಬಹಳ ಕಾಯಬೇಕಾಯಿತು. ಈಗ ಎರಡೂ ವರ್ಷ ಕಾದರೂ ಸಿಎಂ ಸ್ಥಾನ ಸಿಗಲಿಲ್ಲ? ಎಂದರೆ ಏನು ಮಾಡಬೇಕು.
ಸಿದ್ದರಾಮಯ್ಯ ಪಟ್ಟು ಏನು?; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಇಟ್ಟಿರುವ ವಾದಗಳು ಬೇರೆಯೇ ಇವೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎಬ್ಬಿಸುವಲ್ಲಿ ಪ್ರಮುಖ ಪಾತ್ರ ನನ್ನದು ಇದೆ. 2013-2018ರ ನನ್ನ ಆಡಳಿತ ನೋಡಿ ಜನರು ಈ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆದ್ದರಿಂದ ನನಗೆ ಮುಖ್ಯಮಂತ್ರಿ ಸ್ಥಾನ ಕೊಡಿ ಎಂಬುದು ಪ್ರಮುಖ ಬೇಡಿಕೆ.
ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂಬುದಕ್ಕೆ ಜನರು ಸಹ ಬೆಂಬಲ ನೀಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ವರುಣದಲ್ಲಿ ಕಣಕ್ಕಿಳಿದಿದ್ದೇನೆ. ನನ್ನ ಪುತ್ರ ಸೀಟು ಬಿಟ್ಟುಕೊಟ್ಟಿದ್ದಾನೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ನನ್ನ ಪಾತ್ರವೂ ಇದೆ. ಆದ್ದರಿಂದ ಸಿಎಂ ಸ್ಥಾನ ನೀಡಿ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ನನಗೆ ಬೆಂಬಲ ನೀಡಿದ್ದಾರೆ. ನಾನು ಮುಖ್ಯಮಂತ್ರಿಯಾಗುತ್ತೇನೆ ಎಂಬ ನಿರೀಕ್ಷೆಯಲ್ಲಿಯೇ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ಹಿರಿತನದ ಆಧಾರದ ಮೇಲೆಯೂ ನನ್ನ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು ಎಂಬುದು ಸಿದ್ದರಾಮಯ್ಯ ವಾದವಾಗಿದೆ.












Click it and Unblock the Notifications