ಚುನಾವಣೆ ಘೋಷಣೆ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ!
ಬೆಂಗಳೂರು, ಜೂನ್ 24; ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಕಿತ್ತಾಡುವುದರಲ್ಲಿ, ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲೆಸುವುದರಲ್ಲಿ ಹಿಂದೆ ಬಿದ್ದಿಲ್ಲ. ವಿಧಾನ ಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿಯಿದೆ. ಹೀಗಿರುವಾಗ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದನ್ನು ಬಿಟ್ಟು ಸಿಎಂ ಅಭ್ಯರ್ಥಿ ವಿಚಾರದಲ್ಲಿ ಜಿದ್ದಾಜಿದ್ದಿಗೆ ಬಿದ್ದಿರುವುದು ಕರ್ನಾಟಕ ರಾಜಕೀಯದ ಹೊಸ ಬೆಳವಣಿಗೆಯಾಗಿದೆ.
ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ವಿರೋಧ ಪಕ್ಷವಾಗಿ ಆಡಳಿತ ಪಕ್ಷದ ವಿರುದ್ಧ ಹೋರಾಡುವುದರಲ್ಲಿ ಬಿಜೆಪಿ ಎತ್ತಿದ ಕೈ. ಆಡಳಿತ ಪಕ್ಷದ ವಿಫಲತೆಗೆಳನ್ನು ಬಹಿರಂಗಗೊಳಿಸಿ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದರಲ್ಲಿ ಬಿಜೆಪಿ ನಾಯಕರು ಯಾವತ್ತೂ ಹಿಂದೆ ಬಿದ್ದವರಲ್ಲ.
ಕರ್ನಾಟಕದಲ್ಲಿ ಪ್ರಸ್ತುತ ಬಿಜೆಪಿ ಆಡಳಿತ ಪಕ್ಷವಾಗಿದೆ. ಕೋವಿಡ್ ನಿರ್ವಹಣೆ ಸೇರಿದಂತೆ ಆಡಳಿತದಲ್ಲಿ ಹಲವು ರೀತಿಯ ವಿಫಲತೆಗಳನ್ನು ಕಂಡಿದೆ. ಆದರೆ ಅದರ ಬಗ್ಗೆ ಹೋರಾಡಬೇಕಾದ ಕಾಂಗ್ರೆಸ್ ಪಕ್ಷದ ನಾಯಕರು ಇವತ್ತು ಇನ್ನೂ ಹುಟ್ಟದ ಕೂಸಿಗಾಗಿ ಕುಲಾಯಿ ಹೊಲೆಸಲು ನಿಂತಿರುವುದು ಬೇಸರದ ಸಂಗತಿಯಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಕೊಂಡು ವಿಧಾನಸಭೆ ಚುನಾವಣೆಗೆ ಹೋಗುವುದು ಕರ್ನಾಟಕದ ಪಾಲಿಗೆ ಹೊಸ ರಾಜಕೀಯ ಬೆಳವಣಿಗೆ. ಚುನಾವಣೆ ಫಲಿತಾಂಶದ ಬಳಿಕ ಹೈಕಮಾಂಡ್ ನಾಯಕರ ಆಜ್ಞೆಗಾಗಿ ಕಾಯುವುದು ನಮ್ಮ ರಾಜ್ಯದ ನಾಯಕರ ಕೆಲಸವಾಗಿದೆ. ಆದರೆ ಈಗ ಚುನಾವಣೆಗೆ ಎರಡು ವರ್ಷಗಳು ಇರುವಾಗ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ನಡೆದಿದೆ.

ಹೈಕಮಾಂಡ್ ಹೇಳಿದಂತೆ ಕೇಳುವುದು
ಬಿಜೆಪಿ ಇರಲಿ, ಕಾಂಗ್ರೆಸ್ ಇರಲಿ ರಾಜ್ಯಮಟ್ಟದಲ್ಲಿ ಯಾರು ಏನೇ ಲಾಭಿ ಮಾಡಿದರೂ ಅಂತಿಮವಾಗಿ ಹೈಕಮಾಂಡ್ ಹೇಳಿದಂತೆಯೇ ನಡೆಯುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಾಗಿ ಹೈಕಮಾಂಡ್ ಈ ವಿಚಾರದಲ್ಲಿ ಒಂದೇ ಒಂದು ಮಾತು ಹೇಳಿದರೂ ಸಾಕು. ಹಾದಿಬೀದಿ ರಂಪಗಳಿಗೆ ಅವಕಾಶವೇ ಇರುವುದಿಲ್ಲ. ಆದರೆ ಇದುವರೆಗೆ ಎರಡು ಪಕ್ಷಗಳಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಹೈಕಮಾಂಡ್ ಎಂಟ್ರಿ ಕೊಡುವ ಹೊತ್ತಿಗೆ ನಾಯಕರು ಒಬ್ಬರನೊಬ್ಬರು ಕೆಸರು ಎರಚಿಕೊಂಡು ಗಬ್ಬೆಬ್ಬಿಸಿಕೊಂಡಾಗಿರುತ್ತದೆ. ಆ ನಂತರ ಏನು ಮಾಡಿದರೂ ಅದು ಪ್ರಯೋಜನಕ್ಕೆ ಬರುವುದಿಲ್ಲ.

ಕಾಂಗ್ರೆಸ್ಗೆ ರಾಜಕೀಯ ಲಾಭ
ಕೊರೊನಾದಿಂದ ರಾಜ್ಯದ ಜನ ಕಂಗಾಲಾಗಿದ್ದ ಕಾಲದಲ್ಲಿ ಆಡಳಿತದಲ್ಲಿರುವ ಬಿಜೆಪಿಯಲ್ಲಿನ ಲೋಪದೋಷ, ಭಿನ್ನಾಭಿಪ್ರಾಯ, ಕುರ್ಚಿಗಾಗಿ ಕದನ ಎಲ್ಲವನ್ನು ನೋಡಿದ ಜನ ರೋಸಿ ಹೋಗಿದ್ದರು. ಹೀಗಾಗಿ ಎಲ್ಲೋ ಒಂದು ಕಡೆ ಆಡಳಿತದ ವಿರುದ್ಧ (ಬಿಜೆಪಿಯ ಕೆಲ ನಾಯಕರು ಸೇರಿದಂತೆ) ಅಲೆ ಎದ್ದಂತೆ ಗೋಚರಿಸುತ್ತಿದೆ. ಇದು ರಾಜಕೀಯವಾಗಿ ಕಾಂಗ್ರೆಸ್ಗೆ ಲಾಭ ತಂದುಕೊಡಬಹುದೆಂಬ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. ಜತೆಗೆ ಮುಂದಿನ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ಹುಂಬ ಧೈರ್ಯ ಅವರಲ್ಲಿದ್ದು, ಅದು ಇವತ್ತು ಸಿಎಂ ಅಭ್ಯರ್ಥಿಗಳ ವಿಚಾರದಲ್ಲಿ ಹೇಳಿಕೆ, ಪ್ರತಿಹೇಳಿಕೆ, ಆರೋಪ ಪ್ರತ್ಯಾರೋಪಗಳಿಗೆ ದಾರಿ ಮಾಡಿಕೊಡುತ್ತಿದೆ. ಆ ಮೂಲಕ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದೆ.

ಡಿಕೆಶಿ, ಸಿದ್ದರಾಮಯ್ಯ ಜಟಾಪಟಿ
ಅಧಿಕಾರ ನಡೆಸುತ್ತಿರುವ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಹಾದಿಬೀದಿಯಲ್ಲಿ ಕಿತ್ತಾಡಿದ್ದನ್ನು ಆಡಳಿತ ಪಕ್ಷದ ನಾಯಕರೇ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಭ್ರಷ್ಟಾಚಾರದ ಆರೋಪಗ ಮಾಡಿದ್ದನ್ನು, ಹಾಲಿ ಸಿಎಂ ಯಡಿಯೂರಪ್ಪ ಕುರ್ಚಿಯಿಂದ ಇಳಿದರೆ ಅಲ್ಲಿ ಪವಡಿಸಲು ತಾ ಮುಂದು, ನಾ ಮುಂದು ಎಂಬಂತೆ ನಾಯಕರು ಮುಗಿಬಿದ್ದಿದ್ದನ್ನು ಕಂಡಿದ್ದೇವೆ. ಆ ಮೂಲಕ ರಾಜ್ಯದ ಜನರ ಹಿತಕ್ಕಿಂತ ಅಧಿಕಾರವೇ ರಾಜಕಾರಣಿಗಳಿಗೆ ಮುಖ್ಯ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ. ಈಗ ಕಾಂಗ್ರೆಸ್ ಪಕ್ಷದಲ್ಲಿಯೂ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜಟಾಪಟಿ ಅಧಿಕಾರವೇ ಮುಖ್ಯ ಎಂಬುದನ್ನು ತೋರಿಸುತ್ತಿದೆ.

ಸಮರ್ಥ ಆಡಳಿತ ನಡೆಸಿದ್ದಾರೆ
ಸದ್ಯ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮುಂದಿನ ಸಿಎಂ ಅಭ್ಯರ್ಥಿಗಳ ಘೋಷಣೆ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಎರಡು ನಾಯಕರ ಹಿಂಬಾಲಕರು ಈ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳು ಅಚ್ಚರಿ ಮೂಡಿಸುತ್ತಿವೆ. ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಕಾಂಗ್ರೆಸ್ ರಾಜಕೀಯ ಇತಿಹಾಸದಲ್ಲಿ ಕೆಪಿಸಿಸಿ ಅಧ್ಯಕ್ಷರಾದವರೇ ಮುಖ್ಯಮಂತ್ರಿಯಾಗುತ್ತಿದ್ದ ಸಂಪ್ರದಾಯವಿತ್ತು. ಅದು ಮುಂದೆ ಏನಾದರೂ ಮುಂದುವರೆದರೆ ಡಿ. ಕೆ. ಶಿವಕುಮಾರ್ ಸಿಎಂ ಅಭ್ಯರ್ಥಿಯಾಗುವುದು ಖಚಿತ.
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಅವರ ಆಡಳಿತ ಕಾಲದಲ್ಲಿ ಬಿಜೆಪಿ ಎಬ್ಬಿಸಿದ ಹಿಂದೂ ವಿರೋಧಿ ಅಲೆ ಇವತ್ತಿಗೂ ಸಿದ್ದರಾಮಯ್ಯರನ್ನು, ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿದೆ.
Recommended Video

ಪಕ್ಷ ಸಂಘಟನೆಯಲ್ಲಿ ಚುರುಕು
ಇಷ್ಟಕ್ಕೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಯಾವ ಚುನಾವಣೆಗಳು ಕೂಡ ಅವರಿಗೆ ಯಶಸ್ಸನ್ನು ತಂದು ಕೊಟ್ಟಿಲ್ಲ. ಹೀಗಾಗಿ ಹಿಂದೆ ನೇಮಕಗೊಂಡಿರುವ ಕಾಂಗ್ರೆಸ್ನ ಜಿಲ್ಲಾ ಸಮಿತಿ ಸೇರಿದಂತೆ ಹಲವು ಸಮಿತಿಗಳಲ್ಲಿ ನೇಮಕಗೊಂಡಿರುವ ಪದಾಧಿಕಾರಿಗಳ ಪರಿಷ್ಕರಣೆ ಮಾಡಿ ಸಂಘಟನೆಗೆ ಚುರುಕು ಮುಟ್ಟಿಸುವ ಕಾರ್ಯಕ್ಕೆ ಡಿ. ಕೆ. ಶಿವಕುಮಾರ್ ಮುಂದಾಗಿದ್ದಾರೆ. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂಬ ಒತ್ತಾಯಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.
ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದ ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ರಾಮಪ್ಪ ಸೇರಿದಂತೆ ಒಂದಷ್ಟು ನಾಯಕರು ಸಿದ್ದರಾಮಯ್ಯ ಅವರೇ 2023ಕ್ಕೆ ಸಿಎಂ ಆಗಬೇಕೆಂಬ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಇದಕ್ಕೆಲ್ಲ ಮಾರ್ಮಿಕವಾಗಿ ಉತ್ತರ ನೀಡಿರುವ ಡಿ. ಕೆ. ಶಿವಕುಮಾರ್, "ಸಿಎಂ ಆಗುವ ಆತುರದಲ್ಲಿ ನಾನಿಲ್ಲ. ನನ್ನ ಗುರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿರುವುದರಿಂದ ಅಧಿಕಾರ ಹಿಡಿಯಲು ನನ್ನನ್ನು ವಿಧಾನಸೌಧದ ಚಪ್ಪಡಿ ಕಲ್ಲಿನ ಮೆಟ್ಟಿಲು ಮಾಡಿಕೊಳ್ಳಿ" ಎಂದಿದ್ದಾರೆ. ಆದರೆ ವಿಧಾನಸೌಧದ ಒಳಗಿನ ಮೂರ್ತಿ ಮತ್ತು ಹೊರಗಿನ ಚಪ್ಪಡಿಕಲ್ಲಿನ ಮೆಟ್ಟಿಲು ಯಾರಾಗುತ್ತಾರೆ? ಎಂಬುದನ್ನು ಕಾಲವೇ ಹೇಳಬೇಕಷ್ಟೆ.












Click it and Unblock the Notifications