ಒಕ್ಕಲಿಗರು ಡಿಕೆಶಿ ಬೆನ್ನಿಗೆ ನಿಲ್ಲಬೇಕು; ಚಲುವರಾಯಸ್ವಾಮಿ
ಬೆಂಗಳೂರು, ಅಕ್ಟೋಬರ್ 28 : "ಕಾನೂನು ಹೋರಾಟದಲ್ಲಿ ಡಿ. ಕೆ. ಶಿವಕುಮಾರ್ ಗೆದ್ದು ಬರುತ್ತಾರೆ. ಒಕ್ಕಲಿಗರು ಅವರ ಬೆನ್ನಿಗೆ ನಿಲ್ಲಬೇಕು" ಎಂದು ಮಾಜಿ ಶಾಸಕ ಚಲುವರಾಯಸ್ವಾಮಿ ಕರೆ ನೀಡಿದರು.
ಸೋಮವಾರ ಸದಾಶಿವ ನಗರದ ನಿವಾಸದಲ್ಲಿ ಚಲುವರಾಯಸ್ವಾಮಿ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದರು. "ನಮ್ಮ ರಾಜ್ಯದ ನಾಯಕ ಡಿ. ಕೆ. ಶಿವಕುಮಾರ್ ಇಡಿ ಮತ್ತು ಐಟಿಯಿಂದ ಅತಿ ಹೆಚ್ಚು ಕಿರುಕುಳ ಅನುಭವಿಸಿದ್ದಾರೆ" ಎಂದರು.
"ಡಿ. ಕೆ. ಶಿವಕುಮಾರ್ ಎಲ್ಲಾ ಪ್ರಕರಣಗಳಿಂದ ಹೊರ ಬರುತ್ತಾರೆ. ನಮ್ಮ ಸಮುದಾಯದಲ್ಲಿ ಅತಿ ಎತ್ತರಕ್ಕೆ ಬೆಳೆದವರು ಅವರು. ಅವರು ಸಮಾಜದಿಂದ ಸಹಾಯ ಪಡೆದು ಸುಮ್ಮನಾಗಿಲ್ಲ. ಅನೇಕರಿಗೆ ಸಹಾಯ ಮಾಡಿದ್ದಾರೆ. ಒಕ್ಕಲಿಗ ಸಮುದಾಯ ಅವರ ಬೆನ್ನಿಗೆ ನಿಲ್ಲಬೇಕು" ಎಂದು ಕರೆ ಕೊಟ್ಟರು.

"ಮೈತ್ರಿ ಸರ್ಕಾರವಿದ್ದಾಗ ಎಚ್. ಡಿ. ಕುಮಾರಸ್ವಾಮಿ, ಡಿ. ಕೆ. ಶಿವಕುಮಾರ್ ಒಂದಾಗಿದ್ದರು. ಸಾಕಷ್ಟು ಸಭೆಗಳನ್ನು ಒಟ್ಟಿಗೆ ನಡೆಸಿದ್ದರು. ಈಗಲೂ ಆ ಸಂಬಂಧ ಹಾಗೆಯೇ ಇದೆ. ಆ ಸಂಬಂಧ ಬೇರೆ, ರಾಜಕಾರಣ ಬೇರೆ" ಎಂದರು.
"ಮುಂದಿನ ದಿನಗಳಲ್ಲಿ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ ಎಲ್ಲರೂ ಒಂದಾಗಿ ಪಕ್ಷವನ್ನು ಕಟ್ಟುತ್ತಾರೆ, ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ" ಎಂದು ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಡಿ. ಕೆ. ಶಿವಕುಮಾರ್ ಶನಿವಾರ ಬೆಂಗಳೂರಿಗೆ ಆಗಮಿಸಿದ್ದಾರೆ. ಹಲವು ನಾಯಕರು ಅವರನ್ನು ಭೇಟಿ ಮಾಡುತ್ತಿದ್ದಾರೆ. ಸೋಮವಾರ ಅವರು ಸ್ವ ಕ್ಷೇತ್ರ ಕನಕಪುರಕ್ಕೆ ಹೋಗಿದ್ದಾರೆ.












Click it and Unblock the Notifications