ಎಸ್ಪಿಗೆ ಕೈಕೊಟ್ಟು ಮತ್ತೆ ಡಿಕೆಶಿಗೆ ನಿಷ್ಠೆ ತೋರಿದ ಯೋಗಿ
ಚನ್ನಪಟ್ಟಣ, ಮಾರ್ಚ್ 12- ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಜತೆ 'ಹಸ್ತ'ಲಾಘವ ಮಾಡಿದ್ದ ಸಮಾಜವಾದಿ ಪಕ್ಷ ಶಾಸಕ ಸಿಪಿ ಯೋಗೀಶ್ವರ್ ಈ ಬಾರಿಯೂ ಡಿಕೆ ಶಿ ಕೈಹಿಡಿದಿದ್ದಾರೆ. ಅರ್ಥಾತ್, ಎಸ್ಪಿಗೆ ಕೈಕೊಟ್ಟು ಸಂಪೂರ್ಣವಾಗಿ ಕಾಂಗ್ರೆಸ್ ತೆಕ್ಕೆಗೆ ಸೇರಿದ್ದಾರೆ. ಡಿಕೆಶಿ-ಯೋಗೀಶ್ವರ್ ಮೈತ್ರಿ ಜೆಡಿಎಸ್ ನಿದ್ದೆಗೆಡಿಸುವುದರಲ್ಲಿ ಅನುಮಾನವಿಲ್ಲ.
ಕಳೆದ ಆಗಸ್ಟಿನಲ್ಲಿ ಚನ್ನಪಟ್ಟಣದಲ್ಲಿ ನಡೆದಿದ್ದ ಸಮಾಜವಾದಿ ಪಕ್ಷದ ಬೆಂಬಲಿಗರ ಸಭೆಯಲ್ಲಿ ದಿಢೀರನೆ ಪ್ರತ್ಯಕ್ಷರಾಗಿದ್ದ ಡಿಕೆಶಿ, ಯೋಗಿ ಕೊರಳಿಗೆ ಗಂಧದ ಹಾರ ಹಾಕಿ ತಾವಿಬ್ಬರೂ ಕೊರಳ ಗೆಳೆಯರು ಎಂದು ಘೋಷಿಸಿದ್ದರು. ಅಂದಿನಿಂದಲೂ ಇಬ್ಬರ ದೋಸ್ತಿ ಜಾರಿಯಲ್ಲಿತ್ತು. ಇದೀಗ ಲೋಕಸಭಾ ಚುನಾವಣೆ ನಿರ್ಣಾಯಕ ಹಂತದಲ್ಲಿ ಯೋಗೀಶ್ವರ್ ನಿಷ್ಠೆ ಸಂಪೂರ್ಣವಾಗಿ ತಮ್ಮ ಮಾತೃಪಕ್ಷ ಕಾಂಗ್ರೆಸ್ ಪರ ಬದಲಾಗಿದೆ.
ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ಧನ ದ್ವಿವೇದಿ ಅವರು ನಿನ್ನೆ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ್ದು, ಮಾಜಿ ಸಚಿವ, ಚನ್ನಪಟ್ಟಣ ಶಾಸಕ ಸಿಪಿ ಯೋಗೀಶ್ವರ್ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಹೇಳಿದ್ದಾರೆ. (ಕುದುರಿದ ದೋಸ್ತಿ: ಡಿಕೆಶಿ- ಯೋಗೀಶ್ವರ್ 'ಹಸ್ತ'ಲಾಘವ)
ಇತ್ತ, ಯೋಗೀಶ್ವರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಸಮಾಜವಾದಿ ಪಕ್ಷದ ಏಕಮೇವಾದ್ವಿತೀಯ ಶಾಸಕರಾದಾಗ ಎಸ್ಪಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ದಕ್ಷಿಣ ಭಾರತದಲ್ಲಿ ತಮ್ಮ ಪಕ್ಷ ಖಾತೆ ತೆರೆದಿದ್ದಕ್ಕೆ ಆನಂದತುಂದಿಲಿತರಾಗಿದ್ದರು. ಆದರೆ ಅದು ಸಂಪೂರ್ಣವಾಗಿ ಯೋಗೀಶ್ವರ್ ಅವರು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ಬಂದಿದ್ದು ಎಂಬುದನ್ನು ಅರಿಯದೇ ಹೋದರು.
ಅದಾದನಂತರ ಗೂಳಿಹಟ್ಟಿ ಶೇಖರ್, ಬಾಬಾಗೌಡ ಪಾಟೀಲ್, ಶಂಕರ ಬಿದರಿ ವಗೈರೆಗಳು ರಾಜ್ಯದಲ್ಲಿ ಸಮಾಜವಾದಿ ಪಕ್ಷವನ್ನು ಅಪ್ಪಿ ಮುದ್ದಾಡಿದರು. ಆದರೆ ಎಲ್ಲರಿಗೂ ತಡವಾಗಿ ಗೊತ್ತಾದ ಸತ್ಯವೆಂದರೆ ರಾಜ್ಯದಲ್ಲಿ ಸಮಾಜವಾದಿ ಪಕ್ಷಕ್ಕೆ ನೆಲೆಯಿಲ್ಲ. ತಮ್ಮದೇ ರಾಜಕೀಯ ಕಾರಣಗಳಿಗಾಗಿ ಏಕಾಂಗಿಯಾಗಿ ಯೋಗೀಶ್ವರ್ ಪಕ್ಷದ ಸಾರಥ್ಯ ಹೊತ್ತಿದ್ದಾರೆ ಅಷ್ಟೇ ಎಂಬುದು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವು ಇದೀಗ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಕರ್ನಾಟಕದಿಂದ ಕಾಲ್ಕಿತ್ತಿದೆ. ಆದರೂ ರಾಜ್ಯದಲ್ಲಿ SP ಪಕ್ಷದವತಿಯಿಂದ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ನಿಂತಿದ್ದಾರೆ. ಇನ್ನು ಪಕ್ಷವನ್ನು ನಡುನೀರಿನಲ್ಲಿ ಕೈಬಿಟ್ಟ 'ಪ್ರಬುದ್ಧ' ಯೋಗೀಶ್ವರ್ ಅವರಿಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ವತಿಯಿಂದ ಟಿಕೆಟ್ ಸಿಗುತ್ತದೆ ಎಂಬ ಆಸೆಯೇನೂ ಇಲ್ಲ.
ಅವರ ಬಯಕೆ ಏನಿದ್ದರೂ ಡಿಕೆಶಿ ಕೃಪಾಶೀರ್ವಾದದಿಂದ ಚನ್ನಪಟ್ಟಣ ಕ್ಷೇತ್ರದ ಮೇಲಿನ ತಮ್ಮ ಹಿಡಿತವನ್ನು ಮತ್ತಷ್ಟು ಸುಭದ್ರಗೊಳಿಸುವುದು ಆಗಿದೆ. ಅದಕ್ಕೆ ಪ್ರತಿಯಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಯೋಗೀಶ್ವರ್, ತಮ್ಮ ತಮ್ಮನಿಗೆ ಗೆಲುವಿನ ಕಾಣಿಕೆ ನೀಡಿದರೆ ಸಾಕು ಎಂಬುದು ಡಿಕೆಶಿಯ ಸರಳ ಲೆಕ್ಕಚಾರವಾಗಿದೆ.