ಕೋವಿಡ್ ಭೀತಿಯಲ್ಲಿ ಅಧಿವೇಶನ; ಬದಲಾದ ಚಿತ್ರಗಳು
ಬೆಂಗಳೂರು, ಸೆಪ್ಟೆಂಬರ್ 21 : ಮುಖಕ್ಕೆ ಮಾಸ್ಕ್, ಕೆಲವು ಶಾಸಕರ ಮುಖಕ್ಕೆ ಫೇಸ್ ಶೀಲ್ಡ್, ಕೈಯಿಗೆ ಗ್ಲೌಸ್, ಎದುರು ಸಿಕ್ಕವರು ನಕ್ಕರೂ ತಿಳಿಯದಂತೆ ಪರಿಸ್ಥಿತಿ. ಇವರು ಯಾವ ಶಾಸಕರು ಎಂದು ಗುರುತಿಸಲು ವಿಧಾನಸೌಧದ ಸಿಬ್ಬಂದಿಗೆ ಕೆಲವು ಸಮಯ ಬೇಕಾದೀತು. ರಾಜ್ಯ ಆಡಳಿತ ಶಕ್ತಿ ಕೇಂದ್ರದಲ್ಲಿ ಕಂಡು ಬಂದ ಪರಿಸ್ಥಿತಿ ಇದು.
ಕೋವಿಡ್ ಭೀತಿಯ ನಡುವೆಯೇ ಮುಂಗಾರು ಅಧಿವೇಶನ ಆರಂಭವಾಗಿದೆ. ಕೋವಿಡ್ ಕಾರಣಕ್ಕೆ ಹಲವಾರು ಹೊಸ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಕೋವಿಡ್ ನಗೆಟಿವ್ ಪರೀಕ್ಷೆ ವರದಿ ಇಲ್ಲದಿದ್ದರೇ ಶಾಸಕರಿಗೂ ಸಹ ಪ್ರವೇಶವಿಲ್ಲ.
ವಿವಿಧ ಪಕ್ಷಗಳ 15ಕ್ಕೂ ಹೆಚ್ಚು ಶಾಸಕರು, 6 ಸಚಿವರು ಮೊದಲ ದಿನದ ಕಲಾಪಕ್ಕೆ ಗೈರಾಗಿದ್ದಾರೆ. ಕೆಲವು ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ, ಕೆಲವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ಟೋಬರ್ 1ರ ತನಕ ಮುಂಗಾರು ಅಧಿವೇಶನ ನಡೆಯಬೇಕಿದೆ. ಕೋವಿಡ್ ಕಾರಣಕ್ಕೆ ಅಧಿವೇಶನ ಮೊಟಕುಗೊಳಿಸಬೇಕು ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರ ಬಿದ್ದಿಲ್ಲ.

ಎಲ್ಲರ ಮುಖಕ್ಕೆ ಮಾಸ್ಕ್, ಗ್ಲೌಸ್
ಎಲ್ಲಾ ಶಾಸಕರು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದಾರೆ. ವಿಧಾನಸೌಧದ ಒಳಬರಲು ಕೋವಿಡ್ ನಗೆಟಿವ್ ವರದಿ ಕಡ್ಡಾಯ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಗುಂಪು ಗುಂಪಾಗಿ ಬೆಂಬಲಿರ ಜೊತೆ ಕಾಣಿಸಿಕೊಳ್ಳುತ್ತಿದ್ದ ನಾಯಕರು ಇಂದು ಏಕಾಂಗಿಯಾಗಿ ಆಗಮಿಸಿದರು.

ಕೈಕುಲುಕುವಿಕೆ ಇಲ್ಲ, ನಮಸ್ಕಾರ ಮಾತ್ರ
ವಿಧಾನಸೌಧದಲ್ಲಿ ಪಕ್ಷಗಳ ಹಂಗಿಲ್ಲದೆ ಶಾಸಕರು ಒಟ್ಟಾಗುತ್ತಿದ್ದರು. ಕೈ ಕುಲುಕುತ್ತಿದ್ದರು. ಅಪ್ಪುಗೆಯ ಸ್ವಾಗತ ಕೋರುತ್ತಿದ್ದರು. ಆದರೆ, ಇಂದು ಎಲ್ಲರೂ ದೂರ ದೂರು ಎದುರು ಸಿಕ್ಕ ಶಾಸಕರು ನಗು ನಕ್ಕರೂ ಮಾಸ್ಕ್ ಮರೆಯಲ್ಲಿ ಅದು ಕಾಣುವುದಿಲ್ಲ.

ಅಕ್ಕ-ಪಕ್ಕದಲ್ಲಿ ಯಾರೂ ಇಲ್ಲ
ವಿಧಾನಸಭೆಯಲ್ಲಿ ಕಲಾಪ ನಡೆಯುವಾಗ ಅಕ್ಕ-ಪಕ್ಕದ ಶಾಸಕರ ಜೊತೆ ಉಭಯ ಕುಶಲೋಪರಿ ನಡೆಸುತ್ತಿದ್ದ ಶಾಸಕರು ಇಂದು ಏಕಾಂಗಿ. ಸಾಮಾಜಿಕ ಅಂತರ ಕಾಪಾಡಲು ಪ್ರತಿ ಸೀಟಿನ ಪಕ್ಕದ ಸೀಟು ಖಾಲಿ ಬಿಡಲಾಗಿದೆ. ಪ್ಲಾಸ್ಟಿಕ್ ಶೀಟ್ಗಳ ಗೋಡೆ ಅಡ್ಡವಿದೆ. ಆದ್ದರಿಂದ, ಪಕ್ಕದಲ್ಲಿ ಮಾತನಾಡಲಾಗದ ಶಾಸಕರು ಇಂದು ಏಕಾಂಗಿಯಾಗಿದ್ದಾರೆ.
Recommended Video

ಶಾಸಕರು ಗುಂಪು ಸೇರುವಂತಿಲ್ಲ
ಸಚಿವರ ಬಳಿ, ಪ್ರಭಾವಿ ನಾಯಕರ ಬಳಿ ವಿವಿಧ ಪಕ್ಷಗಳ ನಾಯಕರು ಹೋಗಿ ಮಾತನಾಡುತ್ತಿದ್ದರು. ಇದರಿಂದಾಗಿ ಅಲ್ಲಲ್ಲಿ ಗುಂಪು ಕಾಣಿಸುತ್ತಿತ್ತು. ಆದರೆ, ಇಂದು ಸದಸನದಲ್ಲಿ ಗುಂಪಿಲ್ಲ. ಶಾಸಕರು ತಮ್ಮ ಸ್ಥಳದಲ್ಲಿಯೇ ಕುಳಿತಿದ್ದಾರೆ. ಆತ್ಮೀಯರು ಬಂದರೆ ಅಲ್ಲಿಂದೇ ಕೈ ಎತ್ತಿ ನಮಸ್ಕಾರ ಮಾಡುತ್ತಿದ್ದಾರೆ. (ಸಂಗ್ರಹ ಚಿತ್ರ)












Click it and Unblock the Notifications