ದೇವೇಗೌಡ-ಚಂದ್ರಬಾಬು ನಾಯ್ಡು ಭೇಟಿ: ಮೈತ್ರಿ ಬಗ್ಗೆ ಮಾತುಕತೆ
ಬೆಂಗಳೂರು, ನವೆಂಬರ್ 07: ಕಾಂಗ್ರೆಸ್ ಜೊತೆ ದೋಸ್ತಿಗೆ ಸಜ್ಜಾಗಿರುವ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಜೆಡಿಎಸ್ ವರಿಷ್ಠ ದೇವೇಗೌಡ ಅವರನ್ನು ನಾಳೆ ಭೇಟಿ ಮಾಡಲಿದ್ದಾರೆ.
ಲೋಕ ಸಭೆ ಚುನಾವಣೆ ದೃಷ್ಠಿಯಿಂದ ಈ ಭೇಟಿ ಬಾರಿ ಪ್ರಾಮುಖ್ಯತೆ ಗಳಿಸಿದೆ. ಜೆಡಿಎಸ್ ಪಕ್ಷವು ಈಗಾಗಲೇ ಪೂರ್ಣವಾಗಿ ಕಾಂಗ್ರೆಸ್ ಜೊತೆ ಮೈತ್ರಿಯಲ್ಲಿದೆ. ಟಿಡಿಪಿಯು ಮೈತ್ರಿಯ ಅಂಚಿನಲ್ಲಿದೆ ಹಾಗಾಗಿ ಈ ಇಬ್ಬರು ನಾಯಕರ ನಡುವಿನ ಚರ್ಚೆ ಕುತೂಹಲ ಕೆರಳಿಸಿದೆ.
ರಾಷ್ಟ್ರ ರಾಜಕಾರಣದಲ್ಲಿ ಸಶಕ್ತವಾಗಿರುವ ಬಿಜೆಪಿಗೆ ಪರ್ಯಾಯ ಶಕ್ತಿ ರಚಿಸುವುದು, ಬಿಜೆಪಿಯನ್ನು ಕೇಂದ್ರ ಸ್ಥಾನದಿಂದ ಸರಿಸುವುದು, ಪ್ರಾದೇಶಿಕ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಬಲಗೊಳ್ಳುವುದು ಇದೇ ಅನೇಕ ಉದ್ದೇಶಗಳ ಬಗ್ಗೆ ನಾಳಿನ ಭೇಟಿಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ಮಹಾಘಟಬಂದನ್ಗೆ ದೇವೇಗೌಡ ಶ್ರೀಕಾರ
ಪ್ರಾದೇಶಿಕ ಪಕ್ಷಗಳ ಒಗ್ಗೂಡುವಿಕೆಗೆ ದೇವೇಗೌಡ ಅವರೇ ಕುಮಾರಸ್ವಾಮಿ ಪ್ರಮಾಣವಚನದಂದು ಶ್ರೀಕಾರ ಹಾಡಿದ್ದರು. ಅಂದು ಪ್ರಾದೇಶಿಕ ಪಕ್ಷಗಳ ನಾಯಕರನ್ನು ಒಂದೆಡೆ ಸೇರಿಸಿ ಕಾಂಗ್ರೆಸ್ ಪಕ್ಷವನ್ನು ಪ್ರಾದೇಶಿಕ ಪಕ್ಷಗಳ ಜೊತೆ ಬೆರೆಸಿ ಮಹಾಘಟಬಂಧನ್ ಪ್ರಾರಂಭಿಸಿದ್ದರು.

ಎನ್ಡಿಎ ಜೊತೆ ಇದ್ದ ಚಂದ್ರಬಾಬು ನಾಯ್ಡು
ಬಿಜೆಪಿ ನಾಯಕತ್ವದ ಎನ್ಡಿಎಯಲ್ಲಿದ್ದ ಚಂದ್ರಬಾಬು ನಾಯ್ಡು ಅವರು ಆ ನಂತರ ಅದರಿಂದ ಹೊರಬಂದು ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಆಗ ಕಾಂಗ್ರೆಸ್ ಟಿಡಿಪಿಗೆ ಬೆಂಬಲ ನೀಡಿತ್ತು. ಈಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಟಿಡಿಪಿ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸಿದೆ.

ದೇವೇಗೌಡರ ಸಲಹೆಗಾಗಿ ಭೇಟಿ
ಕಾಂಗ್ರೆಸ್ ಜೊತೆ ಈಗಾಗಲೇ ಮೈತ್ರಿಯಲ್ಲಿರುವ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿರುವ ದೇವೇಗೌಡರ ಜೊತೆ ಮೈತ್ರಿ ಬಗ್ಗೆ ಸಲಹೆ ಪಡೆಯಲೆಂದು ಚಂದ್ರಬಾಬು ನಾಯ್ಡು ಅವರು ದೇವೇಗೌಡರನ್ನು ಭೇಟಿ ಆಗಲಿದ್ದಾರೆ. ಅಲ್ಲದೆ ಉಪಚುನಾವಣೆಯಲ್ಲಿ ಮೈತ್ರಿಗೆ ದೊರೆತ ಜಯಕ್ಕೆ ಅಭಿನಂದನೆಯನ್ನೂ ಸಲ್ಲಿಸಲಿದ್ದಾರೆ.

ಆಂಧ್ರಪ್ರದೇಶದಲ್ಲಿ ನಾಯ್ಡು ವಿರುದ್ಧ ಟೀಕೆ
ಟಿಡಿಪಿ ಪಕ್ಷ ಸ್ಥಾಪಿಸಿದ್ದ ಎನ್ಟಿಆರ್ ಅವರು ಕಾಂಗ್ರೆಸ್ಗೆ ವಿರುದ್ಧವಾಗಿಯೇ ಪಕ್ಷ ಸ್ಥಾಪಿಸಿದ್ದರು. ನಂದಮೂರಿ ತಾರಕರಾಮ್ (ಎನ್ಟಿಆರ್) ಅವರು ಜೀವಿತಾವಧಿಯಲ್ಲಿ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿದ್ದರು ಆದರೆ ಈಗ ಅದೇ ಪಕ್ಷ ಕಾಂಗ್ರೆಸ್ ಜೊತೆ ಹೋಗುತ್ತಿರುವುದು ಎನ್ಟಿಆರ್ಗೆ ಮಾಡುವ ಅವಮಾನ ಎಂದು ಬಿಜೆಪಿ ಟೀಕೆ ಮಾಡುತ್ತಿದೆ.












Click it and Unblock the Notifications