Lok Sabha Elections 2024: ಬಿಜೆಪಿ-ಜೆಡಿಎಸ್ ಮೈತ್ರಿ? ಯಾರಿಗೆ ಎಷ್ಟು ಸೀಟು? ಜೆಡಿಎಸ್ ಕೇಳಿದ ಕ್ಷೇತ್ರಗಳು ಇಲ್ಲಿವೆ!
ಬೆಂಗಳೂರು, ಜುಲೈ 15: 2024ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿ ಜೋರಾಗಿದೆ. ಒಂದೆಡೆ ಬಿಜೆಪಿಯೇತರ ಪಕ್ಷಗಳು ಒಗ್ಗೂಡುವ ಕಾರ್ಯದಲ್ಲಿ ನಿರತರಾಗಿದ್ದರೆ, ಮತ್ತೊಂದೆಡೆ ಬಿಜೆಪಿ ಕೂಡಾ ತನ್ನ ಮೈತ್ರಿಯನ್ನು ವಿಸ್ತರಿಸಲು ಮುಂದಾಗಿದೆ.
ಇತ್ತ ರಾಜ್ಯದಲ್ಲೂ ಸಹ ವಿಧಾನಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನ ಗೆದ್ದಿರುವ ಕಾಂಗ್ರೆಸ್, ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲುವ ಗುರಿಯನ್ನ ಹಾಕಿಕೊಂಡಿರುವ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹಾಗೂ ಜೆಡಿಎಸ್ ಮುಂದಾಗಿದ್ದು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ.

ಮೂಲಗಳ ಪ್ರಕಾರ 2024ರ ಲೋಕಸಭೆ ಚುನಾವಣೆ ವೇಳೆಗೆಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡೇ ಕಣಕ್ಕೆ ಇಳಿಯಲಿದ್ದು, ಈಗಾಗಲೇ ಒಂದು ತಿಂಗಳ ಹಿಂದೆ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಮೊದಲ ಹಂತದ ಮಾತುಕತೆಯನ್ನ ನಡೆಸಿದ್ದು, ಜುಲೈ 18 ರ ನಂತರ ಮೋದಿ ಸಮ್ಮುಖದಲ್ಲಿ ಎರಡನೇ ಹಂತದ ಸಭೆ ನಡೆಯಲಿದೆ. ದೆಹಲಿಯಲ್ಲಿ ನಡೆಯುವ ಸಭೆಯ ನಂತರ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ ಬೀಳಲಿದೆ.
ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಎಚ್ಚೇತ್ತುಕೊಂಡ ಬಿಜೆಪಿ ಹಾಗೂ ಜೆಡಿಎಸ್, ಲೋಕಸಮರಕ್ಕೆ ಸಜ್ಜಾಗಿದ್ದು, ಮೊದಲನೇ ಸಭೆಯಲ್ಲಿ ಏಳು ಕ್ಷೇತ್ರಗಳನ್ನ ಬಿಜೆಪಿ ಬಿಟ್ಟುಕೊಂಡುವ ಬಗ್ಗೆ ಬೇಡಿಕೆ ಇಟ್ಟಿದ್ದು, 6 ಕ್ಷೇತ್ರಗಳನ್ನ ಬಿಟ್ಟುಕೊಟ್ಟರು ಸಾಕು ಎಂದು ಜೆಡಿಎಸ್ ಆಂತರಿಕ ಮಾತುಕತೆ ನಡೆದಿದೆ. 21 ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ನಿಮ್ಮನ್ನ ಬೆಂಬಲಿಸುತ್ತಾರೆ, 7 ಕ್ಷೇತ್ರಗಳಲ್ಲಿ ನಮ್ಮನ್ನ ನೀವು ಬೆಂಬಲಿಸಿ, ಕೊನೆ ಪಕ್ಷ 7 ರಲ್ಲಿ ಒಂದು ಕ್ಷೇತ್ರ ಕಡಿಮೆಯಾದರೂ ಪರವಾಗಿಲ್ಲ ಎಂದು ಜೆಡಿಎಸ್ ಹೇಳಿದೆ ಎನ್ನಲಾಗಿದೆ.
ಇತ್ತ 6 ಕ್ಷೇತ್ರಗಳನ್ನ ಜೆಡಿಎಸ್ ಕೇಳಿದ್ದು, 6 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಲಿ ಸಂಸದರ ಕ್ಷೇತ್ರಗಳಾದ ತುಮಕೂರು ಕ್ಷೇತ್ರದ ಬಿಜೆಪಿ ಸಂಸದ ಜಿ ಎಸ್ ಬಸವರಾಜು, ಸುಮಲತಾ ಕ್ಷೇತ್ರ ಇರುವ ಮಂಡ್ಯ, ಮುನಿಸ್ವಾಮಿ ಕ್ಷೇತ್ರವಾದ ಕೋಲಾರ, ಜಿ ಎಸ್ ಬಚ್ಚೇಗೌಡ ಕ್ಷೇತ್ರವಾದ ಚಿಕ್ಕಬಳ್ಳಾಪುರ, ಪ್ರತಾಪ್ ಸಿಂಹ ಸ್ಪರ್ಧಿಸುವ ಮೈಸೂರು ಕ್ಷೇತ್ರ ಹಾಗೂ ಪ್ರಜ್ವಲ್ ರೇವಣ್ಣ ಕ್ಷೇತ್ರವಾದ ಹಾಸನ ಕ್ಷೇತ್ರವನ್ನ ಜೆಡಿಎಸ್ ಕೇಳಿದ್ದು, ಉಳಿದ ಕ್ಷೇತ್ರಗಳನ್ನ ಬಿಟ್ಟುಕೊಟ್ಟು ಬಿಜೆಪಿಗೆ ಬೆಂಬಲ ನೀಡುವುದಾಗಿ ಜೆಡಿಎಸ್ ಹೇಳಿದೆ.

ಇನ್ನೂ ಆರು ಕ್ಷೇತ್ರಗಳ ಪೈಕಿ ಸುಮಲತಾ ಗೆಲುವ ಸಾಧಿಸಿರುವ ಮಂಡ್ಯ ಕ್ಷೇತ್ರವನ್ನ ಸುಮಲತಾ ಬಿಟ್ಟು ಕೊಡುತ್ತಾರಾ ಎಂಬುದು ಕುತೂಹಲ ಮುಡಿಸಿದೆ. ಈ ಹಿಂದೆ ಸುಮಲತಾ ಬಿಜೆಪಿಗೆ ಬೆಂಬಲ ಸೂಚಿಸುವ ವೇಳೆ ಮಂಡ್ಯ ನನಗೆ ರಾಜಕೀಯ ಭವಿಷ್ಯದ ಪ್ರಶ್ನೆ ಎಂದು ಕೆಲವೊಂದು ಷರತ್ತುಗಳನ್ನ ಹಾಕಿ ಸುಮಲತಾ ಬಿಜೆಪಿಗೆ ಬೆಂಬಲವನ್ನ ಸೂಚಿಸಿದ್ರು. ಆದರೆ ಇದೀಗ ಜೆಡಿಎಸ್ ಜೊತೆಗೆ ಮೈತ್ರಿಯಾದರೇ ಸುಮಲತಾ ರಾಜಕೀಯ ಭವಿಷ್ಯ ಏನು ಎನ್ನುವ ಪ್ರಶ್ನೆ ಉದ್ಬವಿಸಿದೆ.
ಇತ್ತ ಮಂಡ್ಯ ಕ್ಷೇತ್ರವನ್ನ ನಮಗೆ ಬಿಟ್ಟುಕೊಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನ ಬಿಟ್ಟುಕೊಡುವುದಾಗಿ ಜೆಡಿಎಸ್ ಹೇಳಿದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವಿರುದ್ದ ಸ್ಪರ್ಧೆ ನಡೆಸಿ ಗೆಲುವ ಸಾಧಿಸಿದ್ದ ಸುಮಲತಾ ಜೆಡಿಎಸ್ ಗೆ ಕ್ಷೇತ್ರವನ್ನ ಬಿಟ್ಟುಕೊಟ್ಟು ಬೆಂಗಳೂರು ಭಾಗದಲ್ಲಿ ಸ್ಪರ್ಧೆ ನಡೆಸುತ್ತಾರಾ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಮೈತ್ರಿಗೆ ಬಿಜೆಪಿಯಲ್ಲೇ ವಿರೋಧ?
ಇತ್ತ ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗಿನ ಮೈತ್ರಿಗೆ ರಾಜ್ಯ ಬಿಜೆಪಿಯಲ್ಲಿ ಭಾರೀ ವಿರೋಧ ಕೇಳಿ ಬರುತ್ತಿದೆ. ಈ ಮೈತ್ರಿಯಿಂದ ಜೆಡಿಎಸ್ ಗೆ ಹೆಚ್ಚು ಲಾಭವಾಗಲಿದ್ದು, ಬಿಜೆಪಿಗೇ ಯಾವ ಲಾಭವೂ ಇಲ್ಲ ಎನ್ನುವ ಚರ್ಚೆ ಬಿಜೆಪಿ ನಾಯಕರಾದ್ದು, ಜೆಡಿಎಸ್ ಅಸ್ತತ್ವ ಗಟ್ಟಿಯಾಗಿರುವುದು ಕೇವಲ ಹಳೇ ಮೈಸೂರು ಭಾಗದಲ್ಲಿ ಮಾತ್ರ. ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಮತಗಳು ಇವೆ. ಆದರೆ ಹಳೇ ಮೈಸೂರು ಬಿಟ್ಟು ಇತರ ಭಾಗಗಳಲ್ಲಿ ಜೆಡಿಎಸ್ ಮತಗಳು ಕಡಿಮೆ, ಅವರಿಂದ ನಮಗೆ ಏನು ಲಾಭ ಆಗುವುದಿಲ್ಲ ಎಂದು ಬಿಜೆಪಿ ಮುಖಂಡರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications