ಗುಟ್ಕಾ ನಿಷೇಧ ಮಾಡದವರಿಗೆ ಕೇಂದ್ರದ ಗುಟುರು!
ಬೆಂಗಳೂರು, ಆ.18 : ಕರ್ನಾಟಕ ಸರ್ಕಾರ ಗುಟ್ಕಾ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಮತ್ತು ಮಾಡುತ್ತದೆ ಎಂಬ ವಿಶ್ವಾಸವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಮಾರಕ ಕ್ಯಾನ್ಸರ್ಗೆ ಶೇ.90ರಷ್ಟು ಕಾರಣವಾಗುವ ಗುಟ್ಕಾ ನಿಷೇಧಕ್ಕೆ ಕೆಲ ಅಡೆತಡೆಗಳು ಉಂಟಾದಂತೆ ಕಂಡುಬರುತ್ತಿದೆ ಎಂದರು. (ಗುಟ್ಕಾ, ವಿಡಿಯೋ ಪಾರ್ಲರ್ ನಿಷೇಧ, ಮುಂದೇನು)
2006ರ ಆಹಾರ ಸುರಕ್ಷತಾ ಕಾನೂನು ಅನ್ವಯ ಕರ್ನಾಟಕ ಸೇರಿದಂತೆ 21 ರಾಜ್ಯಗಳಲ್ಲಿ ಗುಟ್ಕಾ ಸಂಪೂರ್ಣ ನಿಷೇಧ ಮಾಡಲಾಗಿದೆ. ಈ ಕಾನೂನಲ್ಲಿ ಕೆಲ ಹೊಸ ತಿದ್ದುಪಡಿ ತರಲು ಚಿಂತಿಸಲಾಗುತ್ತಿದೆ. ಪರಿಮಳಯುಕ್ತ, ಸುಹಾಸನೆ ಭರಿತ ತಂಬಾಕು ಪದಾರ್ಥಗಳ ಮೇಲೂ ನಿಯಂತ್ರಣ ಹೇರಲು ಎಲ್ಲ ರಾಜ್ಯಗಳೊಂದಿಗೆ ವಿನಂತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಾರಾಟ ಮತ್ತು ಜಾಹೀರಾತು ನೀಡುವಲ್ಲಿ ಕೆಲ ಕಂಪನಿಗಳು ವಾಮಮಾರ್ಗ ಅನುಸರಿಸುತ್ತಿವೆ. ಈ ಮೂಲಕ ಜನರ ದಾರಿ ತಪ್ಪಿಸಲೆತ್ನಿಸುತ್ತಿವೆ. ಇಂಥ ಬ್ರ್ಯಾಂಡ್ಗಳಿಗೂ ಸಂಪೂರ್ಣ ನಿಷೇಧ ಹೇರಲು ಕಾನೂನು ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ಯಾವ ರಾಜ್ಯಗಳ ಮೇಲೂ ತಾರತಮ್ಯ ನೀತಿ ಅನುಸರಿಸುತ್ತಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಜನರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ರಾಜಕೀಯ ಸಲ್ಲ. ಅದು ನವೀನ್ ಪಟ್ನಾಯಕ್ ನೇತೃತ್ವದ ಓರಿಸ್ಸಾ ಸರ್ಕಾರವಿರಬಹುದು, ಇಲ್ಲವೇ ಕರ್ನಾಟಕದ ಕಾಂಗ್ರೆಸ್ ಸರ್ಕಾರವಿರಬಹುದು. ಎಲ್ಲರಿಗೂ ಸಮಾನ ಆದ್ಯತೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ಧನ್, ಕಳೆದ ವಾರ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜ್ಯದ ಮುಖ್ಯಮಂತ್ರಿಗಳಿಗೆ ಗುಟ್ಕಾ ನಿಷೇಧ ಮತ್ತು ಮಾರಾಟದ ಮೇಲೆ ನಿಯಂತ್ರಣ ಕುರಿತಂತೆ ಪತ್ರ ಬರೆದಿದ್ದರು. ನಿಷೇಧ ಕಾನೂನು ಸಮಗ್ರ ಜಾರಿ ಕುರಿತ ಮಾರ್ಗದರ್ಶಿ ಸೂತ್ರಗಳನ್ನು ವಿವರಿಸಿದ್ದರು.












Click it and Unblock the Notifications