ತಾನೇ ತೋಡಿದ ಸ್ಟಿಂಗ್ ಹಳ್ಳಕ್ಕೆ ಬಿದ್ದ ರೌಡಿ ಕುಳ್ಳ ದೇವರಾಜ್!
ಬೆಂಗಳೂರು, ಡಿ. 01: ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರ ಕೊಲೆಗೆ ಸ್ಕೆಚ್ ಹಾಕಿದ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಎಸ್.ಆರ್. ವಿಶ್ವನಾಥ್ ಅವರ ಕೊಲೆ ಮಾಡುವ ಬಗ್ಗೆ ಮಾತನಾಡಿರುವ ವಿಡಿಯೋ ರೆಕಾರ್ಡ್ ಮಾಡಿದ ಕುಳ್ಳ ದೇವರಾಜ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇನ್ನು ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಕೊಲೆ ಮಾಡುವ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ, ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಎಸ್.ಆರ್. ವಿಶ್ವನಾಥ್ ಆಪ್ತನೇ ಎದುರಾಳಿ ಅಭ್ಯರ್ಥಿಯ ರಹಸ್ಯ ಕಾರ್ಯಾಚರಣೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
Breaking: ಶಾಸಕ ಎಸ್. ಆರ್. ವಿಶ್ವನಾಥ್ ಕೊಲೆಗೆ ಸಂಚು: ಒಬ್ಬನನ್ನು ಬಂಧಿಸಿದ ಸಿಸಿಬಿ ಪೊಲೀಸರು
ಎಸ್.ಆರ್. ವಿಶ್ವನಾಥ್ ಬಿಡಿಎ ಅಧ್ಯಕ್ಷ. ಯಲಹಂಕ ಕ್ಷೇತ್ರದ ಶಾಸಕ. ಇವರ ವಿರುದ್ಧ ಸ್ಪರ್ಧಿಸಿದ್ದ ಗೋಪಾಲಕೃಷ್ಣ ಎರಡು ಬಾರಿ ಸೋತಿದ್ದರು. ಇತ್ತೀಚೆಗೆ ಗೋಪಾಲಕೃಷ್ಣ ಅವರನ್ನು ಸಂಪರ್ಕಿಸಿದ್ದ ಕುಳ್ಳ ದೇವರಾಜ್, ಎಸ್.ಆರ್. ವಿಶ್ವನಾಥ್ ಹತ್ಯೆ ಸ್ಕೆಚ್ ಬಗ್ಗೆ ಕೆಣಕಿದ್ದಾರೆ. ಎದುರಾಳಿ ಅಭ್ಯರ್ಥಿ ವಿಶ್ವನಾಥ್ ಹತ್ಯೆ ಬಗ್ಗೆ ಆಡಿರುವ ಮಾತುಗಳನ್ನು ಕುಳ್ಳ ದೇವರಾಜ್ ವಿಡಿಯೋ ಮಾಡಿಕೊಂಡಿದ್ದಾನೆ. ಈ ವಿಡಿಯೋ ಸಿಸಿಬಿ ಕೈ ಸೇರುತ್ತಿದ್ದಂತೆ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ಹಾಗೂ ವಿಡಿಯೋ ಮಾಡಿದ್ದ ಕುಳ್ಳ ದೇವರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಗೋಪಾಲಕೃಷ್ಣನನ್ನು ಮಂಗಳವಾರ ತಡರಾತ್ರಿವರೆಗೆ ವಿಚಾರಣೆ ನಡೆಸಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಕುಳ್ಳ ದೇವರಾಜ್ ನನ್ನು ವಶಕ್ಕೆ ಪಡೆದಿದ್ದಾರೆ. ಯಲಹಂಕ ಶಾಸಕ ವಿಶ್ವನಾಥ್ ಅವರ ಬೆಂಬಲಿಗನಾಗಿರುವ ಕುಳ್ಳ ದೇವರಾಜ್ ತನ್ನ ಗುರುವಿಗೆ ಹತ್ತಿರವಾಗಲು ಗೋಪಾಲಕೃಷ್ಣನ ಬಳಿ ಹೋಗಿ ಹತ್ಯೆ ಮಾಡುವ ಪ್ಲಾನ್ ಕೊಟ್ಟು ಮಾತುಕತೆ ಮಾಡಿದ್ದಾನೆ. ಗೋಪಾಲಕೃಷ್ಣಗೆ ಕುಳ್ಳ ದೇವರಾಜ್ ತೋಡಿದ್ದ ಹಳ್ಳಕ್ಕೆ ಆತನೇ ಬಿದ್ದಂತಾಗಿದೆ. ಎಸ್ ಆರ್. ವಿಶ್ವನಾಥ್ ವಿರುದ್ಧ ವಿಡಿಯೋ ಮಾಡಿಸಿ ಗೋಪಾಲಕೃಷ್ಣನನ್ನು ಬಂಧಿಸುವ ಪ್ಲಾನ್ ಮಾಡಿದ್ದ ದೇವರಾಜ್ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದಾನೆ.
ಇನ್ನು ಗೋಪಾಲಕೃಷ್ಣ ಹತ್ಯೆ ಬಗ್ಗೆ ಆಡಿರುವ ಮಾತುಗಳ ಸಂಗತಿಯನ್ನು ಸಿಸಿಬಿ ಅಧಿಕಾರಿಯೊಬ್ಬರು ಶಾಸಕರ ಭವನದಲ್ಲಿ ವಿಶ್ವನಾಥ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಗೋಪಾಲಕೃಷ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ನೀಡಿದ ಮಾಹಿತಿ ಮೇರೆಗೆ ಕುಳ್ಳ ದೇವರಾಜ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯಾಂಶ ಬಯಲಿಗೆ ಬಂದಿದೆ. ಗೋಪಾಲಕೃಷ್ಣನನ್ನು ರಾಜಕೀಯವಾಗಿ ಮುಗಿಸಿ ವಿಶ್ವನಾಥ್ ಗೆ ಹತ್ತಿರವಾಗಲು ಕುಳ್ಳ ದೇವರಾಜ್ ಮಾಡಿದ ಪ್ಲಾನ್ ಇದೀಗ ಆತನನ್ನೇ ಕಂಬಿ ಎಣಿಸುವಂತೆ ಮಾಡಿದೆ.
ಪ್ರತಿಕ್ರಿಯೆಗೆ ವಿಶ್ವನಾಥ್ ನಕಾರ:
ಹತ್ಯೆಗೆ ಸ್ಕೆಚ್ ಹಾಕಿರುವ ಬಗ್ಗೆ ಶಾಸಕ ಎಸ್. ಆರ್. ವಿಶ್ವನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಂಜೆ ವೇಳೆಗೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ. ಎಲ್ಲದಕ್ಕೂ ಅಲ್ಲಿಯೇ ಉತ್ತರ ಕೊಡುತ್ತೆನೆ ಎಂದು ಎಂಎಲ್ ಸಿ ಚುನಾವಣೆ ಸಂಬಂಧ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕುಳ್ಳದೇವರಾಜ್ ವಿಚಾರಣೆ:
Recommended Video
ಶಾಸಕ ಎಸ್.ಅರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ರೂಪಿಸಿರುವ ಸಂಬಂಧ ವಿಡಿಯೋ ಮಾಡಿದ್ದ ಕುಳ್ಳ ದೇವರಾಜ್ ನನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೌಡಿ ಶೀಟರ್ ಕುಳ್ಳ ದೇವರಾಜ್ ಈ ಹಿಂದೆ ಉದ್ಯಮಿ ಭರತ್ ಶೆಟ್ಟಿಗೆ ಧಮ್ಕಿ ಹಾಕಿದ್ದ. ಭೂ ಕಬಳಿಕೆ ಪ್ರಕರಣದಲ್ಲಿ ಪ್ರಾಣ ಬೆದರಿಕೆ ಹಾಕಿದ್ದ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಭರತ್ ಶೆಟ್ಟಿ ದೂರು ನೀಡಿದ್ದರು. ಸ್ಟಿಂಗ್ ವಿಡಿಯೋ ಮಾಡಿ ಇಬ್ಬರ ನಡುವೆ ದ್ವೇಷ ಬಿತ್ತನೆ ಮಾಡಿದ ಆರೋಪದಡಿ ದೇವರಾಜ್ ನನ್ನು ವಿಚಾರಣೆ ನಡೆಸುತ್ತಿದ್ದು ಸಂಜೆ ವೇಳೆಗೆ ಬಂಧನಕ್ಕೆ ಒಳಗಾಗುವ ಸಾಧ್ಯತೆಯಿದೆ.
ಹತ್ಯೆ ಸಂಚು ಕುರಿತು ಗಂಭೀರ ತನಿಖೆ
ಶಾಸಕ ಎಸ್.ಆರ್. ವಿಶ್ವನಾಥ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು, ಎಂಬ ವಿಷಯವನ್ನು, ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಈ ಬಗ್ಗೆ, ಸೂಕ್ತ ತನಿಖೆ ನಡೆಸಲಾಗುವುದು ಎಂದು, ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
"ಈ ಬಗ್ಗೆ ಸ್ವತಃ ವಿಶ್ವನಾಥ್ ಅವರು ನನ್ನ ಜೊತೆ ಮಾತನಾಡಿದ್ದಾರೆ. ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಶಾಸಕರ ಮನವಿಯಂತೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದೂ ಗೃಹ ಸಚಿವರು ಹೇಳಿದ್ದಾರೆ.