ಜಾಣ್ಮೆಯ ನಡೆ : ರಂಗೋಲಿ ಕೆಳಗೆ ನುಸುಳಿದ ಕರ್ನಾಟಕ!
ಬೆಂಗಳೂರು, ಸೆಪ್ಟೆಂಬರ್ 23 : ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಸಿಗಬೇಕು, ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಂಗೂ ಆಗಿರಬಾರದು, ಸರ್ವೋಚ್ಚ ನ್ಯಾಯಾಲಯದ ನಿಂದನೆಯೂ ಆಗಿರಬಾರದು ಎಂಬಂತಹ ನಿರ್ಣಯವನ್ನು ವಿಶೇಷ ಜಂಟಿ ಅಧಿವೇಶನದಲ್ಲಿ ಶುಕ್ರವಾರ ತೆಗೆದುಕೊಳ್ಳಲಾಗಿದೆ.
ಕಾವೇರಿ ವಿವಾದದ ವಿಷಯದಲ್ಲಿ ತಮಿಳುನಾಡು ಚಾಪೆಯ ಕೆಳಗೆ ತೆವಳಲು ಯತ್ನಿಸುತ್ತಿದ್ದರೆ, ಕರ್ನಾಟಕ ರಂಗೋಲಿ ಕೆಳಗೆ ನುಸುಳಿದೆ! ತಮಿಳುನಾಡು ಮತ್ತು ಕರ್ನಾಟಕ ಅಣ್ಣತಮ್ಮ ಇದ್ದಂತೆ ಎಂದು ಹೇಳುತ್ತ, ಯಾವುದೇ ಆಕ್ರೋಶದ ನುಡಿಗಳನ್ನಾಡದೆ ಜಾಣತನವನ್ನು ಪ್ರದರ್ಶಿಸಿದೆ. [ಕುಡಿಯುವುದಕ್ಕೆ ಮಾತ್ರ ಕಾವೇರಿ ನೀರಿನ ಬಳಕೆ: ಒಮ್ಮತದ ನಿರ್ಣಯ]
ತಮಿಳುನಾಡಿನ ಸಾಂಬಾ ಬೆಳೆಗೆ ಬೇಕಿರುವ ನೀರನ್ನು ಬಿಡುವುದಿಲ್ಲವೆಂದು ಯಾವ ಹೇಳಿಕೆಯನ್ನೂ ನೀಡಲಾಗಿಲ್ಲ. ಕರ್ನಾಟಕದ ಜನರ ಕುಡಿಯುವ ನೀರಿಗೇ ತತ್ವಾರವಾಗಿರುವಾಗ ಎಲ್ಲಿಂದ ನೀರು ಬಿಡುವುದು? ಆದ್ದರಿಂದ, ಕೆಆರ್ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಜಲಾಶಯಗಳ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಬೇಕೆಂಬ ಒಮ್ಮತದ ನಿರ್ಣಯ ಮೂಡಿಬಂದಿದೆ.[ಯಡಿಯೂರಪ್ಪ ವಿರುದ್ಧ ಕೆಲ ಬಿಜೆಪಿ ನಾಯಕರ ಷಡ್ಯಂತ್ರ?]
ಈ ಸಂಕಷ್ಟಮಯ ಪರಿಸ್ಥಿತಿಯನ್ನು ಕರ್ನಾಟಕದ ಶಾಸಕರು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವುದಿಲ್ಲವೆಂದು ಎಲ್ಲೂ ಯಾರೂ ಸ್ಪಷ್ಟವಾಗಿ ಹೇಳಿಲ್ಲ. ಆದರೆ, ಇರುವ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಾಗುವುದು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟಿಗೂ, ತಮಿಳುನಾಡಿಗೂ ರವಾನಿಸಿದ್ದಾರೆ.
ಎಲ್ಲಿ ಎಷ್ಟಿದೆ? : ಒಂದು ಅಧ್ಯಯನದ ಪ್ರಕಾರ, ಕೃಷ್ಣರಾಜ ಸಾಗರದಲ್ಲಿ 13.5 (ಗರಿಷ್ಠ 49) ಟಿಎಂಸಿ, ಹಾರಂಗಿಯಲ್ಲಿ 3.5 (ಗರಿಷ್ಠ 8.5) ಟಿಎಂಸಿ, ಕಬಿನಿ 11.6 (ಗರಿಷ್ಠ 15.6) ಟಿಎಂಸಿ ಮತ್ತು ಹೇಮಾವತಿಯಲ್ಲಿ 7.3 (ಗರಿಷ್ಠ 37) ಟಿಎಂಸಿ ನೀರಿದೆ. ಇಷ್ಟು ನೀರಿರುವಾಗ ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕುಡಿಯಲು ಕೂಡ ಸಾಧ್ಯವಾಗುವುದಿಲ್ಲ. [ಪ್ರತಿಭಟನೆಗೆ ಬಂದ ಪ್ರತಾಪ್ ವಿರುದ್ಧ ರೈತರ ಆಕ್ರೋಶ]
ಈ ಜಾಣತನದ ನಿರ್ಣಯವನ್ನು ತಮಿಳುನಾಡು ಸರಕಾರ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ. ಹಾವು ಸಾಯಬಾರದು, ಕೋಲೂ ಮುರಿಯಬಾರದು ಎಂಬಂತಹ ನಿರ್ಣಯ ತಮಿಳುನಾಡಿಗೆ ಖಂಡಿತ ಬಿಸಿತುಪ್ಪವಾಗಲಿದೆ. ಇರುವ ನೀರನ್ನು ಮಾತ್ರ ರಕ್ಷಿಸಿಕೊಳ್ಳುವುದರಿಂದ ನ್ಯಾಯಾಂಗ ನಿಂದನೆಯೂ ಆಗುವುದಿಲ್ಲ ಎಂಬುದು ರಾಜ್ಯದ ಶಾಸಕರ ವಾದ.
ಅಲ್ಲದೆ, ಸರ್ವೋಚ್ಚ ನ್ಯಾಯಾಲಯದ ಆಜ್ಞೆಗೆ ವಿರುದ್ಧವಾಗಿ ತಮಿಳುನಾಡಿಗೆ ನೀರು ಬಿಡದಿರುವ ನಿರ್ಣಯವನ್ನು, ಸಂಪುಟ ಸಭೆಯಲ್ಲಿ ಅಥವಾ ಸರ್ವಪಕ್ಷ ಸಭೆಯಲ್ಲಿ ತೆಗೆದುಕೊಳ್ಳದೆ, ಕಾನೂನು ತಜ್ಞರ ಅಣಿತಿಯಂತೆ ಜಂಟಿ ಸದನದಲ್ಲಿ ವಿಶೇಷ ಅಧಿವೇಶನ ಕರೆದು ತೆಗೆದುಕೊಂಡರೆ ನ್ಯಾಯಾಂಗ ನಿಂದನೆಯೂ ಆಗುವುದಿಲ್ಲ ಎಂಬುದು ಕರ್ನಾಟಕದ ಪಾಲಿಗೆ ಶ್ರೀರಕ್ಷೆಯಾಗಲೂಬಹುದು.
ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯಸ್ಸು!