ಕರ್ನಾಟಕ ಬಂದ್ : ಬಸ್ಸು, ಆಟೋ, ಟ್ಯಾಕ್ಸಿ ಸಂಚಾರವಿಲ್ಲ
ಬೆಂಗಳೂರು, ಸೆಪ್ಟೆಂಬರ್ 08 : ಕನ್ನಡ ಒಕ್ಕೂಟ ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಲಿವೆ. ಕರ್ನಾಟಕದಲ್ಲಿ ತಮಿಳಿನ ಎಲ್ಲಾ ಚಾನಲ್ಗಳ ಪ್ರಸಾರವನ್ನು ಸ್ಥಗಿತಗೊಳಿಸಲಾಗುತ್ತದೆ.
ಕರ್ನಾಟಕ ಬಂದ್ಗೆ ಚಿತ್ರೋದ್ಯಮವೂ ಬೆಂಬಲ ನೀಡಿದೆ. ಆದ್ದರಿಂದ, ಶುಕ್ರವಾರ ಯಾವುದೇ ಕನ್ನಡ ಚಿತ್ರಗಳು ತೆರೆ ಕಾಣುತ್ತಿಲ್ಲ. ಚಿತ್ರಮಂದಿರಗಳು ಬಾಗಿಲು ಮುಚ್ಚಲಿವೆ. ಸಂಜೆಯ ನಂತರ ಒಂದು ಅಥವ ಎರಡು ಶೋಗಳ ಪ್ರದರ್ಶನ ನಡೆಯುವ ಸಾಧ್ಯತೆ ಇದೆ.[ಕಾವೇರಿಗಾಗಿ ಕಾವೇರಿದ ಕರ್ನಾಟಕ, ಬಂದ್ ದಿನ ಏನೆಲ್ಲ ಬಂದ್ ?]
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಹೊಸೂರು ರಸ್ತೆ ಕಡೆ ಸಾಗುವ ಎಲ್ಲಾ ವಾಹನಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ. ಟ್ಯಾಕ್ಸಿ, ಆಟೋಗಳು ಬಂದ್ ಹಿನ್ನಲೆಯಲ್ಲಿ ರಸ್ತೆಗಿಳಿಯುವುದಿಲ್ಲ.[ಟೆಕ್ಕಿಗಳ ವೀಕೆಂಡ್ ರಜಾ ಹಾಳು ಮಾಡಿದ ಕರ್ನಾಟಕ ಬಂದ್!]
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಮಂಡ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ರಜೆ ನೀಡುವ ಕುರಿತು ಅಧಿಕೃತ ಆದೇಶ ಹೊರಬಿದ್ದಿಲ್ಲ. ಖಾಸಗಿ ಶಾಲೆಗಳು ರಜೆ ನೀಡುವ ಸಾಧ್ಯತೆ ಇದೆ.
ಮಂಡ್ಯದಲ್ಲಿ ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬಂದ್ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಕಡಿಮೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಬೆಂಗಳೂರು, ಮೈಸೂರ, ಮಂಡ್ಯ, ರಾಮನಗರ ಮುಂತಾದ ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ಸರ್ಕಾರ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲು ಸಿದ್ಧತೆ ನಡೆಸಿದೆ. ಸೋಮವಾರ ಸರ್ಕಾರ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳ ತಂಡ ಕಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.