ಎಲ್ಲರ ಕಣ್ಣು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಮೇಲೆ
ಬೆಂಗಳೂರು, ಸೆಪ್ಟೆಂಬರ್ 19 : ಎಲ್ಲರ ಕಣ್ಣು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯ ಮೇಲಿದೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಇಂದು ನ್ಯಾಯ ಸಿಗುವ ವಿಶ್ವಾಸವಿದೆ.
ನವದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಕಾರ್ಯದರ್ಶಿ ಶಶಿಶೇಖರ್ ಅಧ್ಯಕ್ಷರಾಗಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದೆ. ಸರ್ಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್ ಅವರು, ಸಮಿತಿ ಮುಂದೆ ವಾದ ಮಂಡನೆ ಮಾಡಲಿದ್ದಾರೆ.[ಕಾವೇರಿ ವಿವಾದ : ಮಂಡ್ಯದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ]
ಮತ್ತೊಂದು ಕಡೆ ಸುಪ್ರೀಂಕೋರ್ಟ್ ಸೆ.20ರ ತನಕ ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಆದೇಶ ನೀಡಿದೆ. ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ಈ ಅರ್ಜಿ ವಿಚಾರಣೆ ನಡೆಯಲಿರುವ ಹಿನ್ನಲೆಯಲ್ಲಿ ಇಂದಿನ ಸಭೆ ಮಹತ್ವ ಪಡೆದಿದೆ.[ಸೆ.19ರಂದು ಹೊಸೂರು-ಕರ್ನಾಟಕ ಗಡಿ ಬಂದ್]
ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ. ಇಂದಿನ ಸಭೆಯಲ್ಲಿ ಕರ್ನಾಟಕ ಸುಪ್ರೀಂಕೋರ್ಟ್ ಆದೇಶದಂತೆ ನೀರು ಹರಿಸಿದ್ದೇವೆ ಎಂದು ಮಾಹಿತಿ ನೀಡಲಿದೆ.[ಕಾವೇರಿ ವಿವಾದ : ಪಕ್ಷ, ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ?]
ಹೆಚ್ಚು ನೀರನ್ನು ಹರಿಸುವುದು ಸಾಧ್ಯವಿಲ್ಲ ಎಂದು ಕರ್ನಾಟಕ ವಾದ ಮಂಡನೆ ಮಾಡಲಿದೆ. ನಾಲ್ಕು ರಾಜ್ಯಗಳು ನೀಡುವ ಅಂಕಿ ಸಂಖ್ಯೆಗಳನ್ನು ಪರಿಶೀಲಿಸಲಿರುವ ಸಮಿತಿ ತನ್ನ ತೀರ್ಪನ್ನು ನೀಡಲಿದೆ.
ಎಲ್ಲಾ ರಾಜ್ಯಗಳೂ ಆಗಿರುವ ಮಳೆಯ ಪ್ರಮಾಣ, ಜಲಾಶಯಗಳಲ್ಲಿರುವ ನೀರು ಮುಂತಾದ ಮಾಹಿತಿಗಳನ್ನು ಸಮಿತಿಗೆ ಸಲ್ಲಿಕೆ ಮಾಡಿವೆ. ರಾಜ್ಯವೇ ನೀರಿನ ಕೊರತೆ ಎದುರಿಸುತ್ತಿರುವಾಗ ತಮಿಳುನಾಡಿಗೆ ನೀರು ಹರಿಸುವುದಕ್ಕೆ ಸಾಧ್ಯವಿಲ್ಲ ಎಂದು ಕರ್ನಾಟಕ ವಾದ ಮಂಡನೆ ಮಾಡಲಿದೆ.
ಭಾನುವಾರ ಕರ್ನಾಟಕ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದೆ ಮತ್ತು ಸುಪ್ರೀಂಕೋರ್ಟ್ ಆದೇಶದಂತೆ 1,68,000 ನೀರನ್ನು ಹರಿಸಲಾಗಿದೆ ಎಂದು ಹೇಳಿದೆ. ಉಸ್ತುವಾರಿ ಸಮಿತಿ ಸಭೆಯ ಬಳಿಕ ತನ್ನ ತೀರ್ಪನ್ನು ನೀಡುವ ಸಾಧ್ಯತೆ ಇದೆ.