10ನೇ ತರಗತಿ ಪರೀಕ್ಷೆಗಳನ್ನು ರದ್ದುಮಾಡಿ: ಸರ್ಕಾರಕ್ಕೆ ಮನವಿ
ಬೆಂಗಳೂರು, ಮೇ 10: ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದುಮಾಡಿ ಶಾಲಾ ಹಂತದಲ್ಲಿ ನಡೆದಿರುವ ಸಿದ್ಧತಾ ಪರೀಕ್ಷೆ ಹಾಗು ಆಂತರಿಕ ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯನ್ನು ಆಧರಿಸಿ ತೇರ್ಗಡೆ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಗಮನ ಹರಿಸಲಿ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಮನವಿ ಮಾಡಲಾಗಿದೆ.
ಹೆಚ್ಚುತ್ತಿರುವ ಕೋರೋನ ಭೀತಿಯ ಹಿನ್ನೆಲೆಯಲ್ಲಿ 2019-20ರ ಶೈಕ್ಷಣಿಕ ಸಾಲಿನ 10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲು ಪಂಜಾಬ್ ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಈಗಾಗಲೇ 1 ರಿಂದ 9 ನೇ ತರಗತಿವರೆಗಿನ ಎಲ್ಲಾ ಮಕ್ಕಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಿರುವ ಪಂಜಾಬ್ ಸರಕಾರ ಈಗ 10 ನೇ ತರಗತಿ ಪರೀಕ್ಷೆಗಳನ್ನು ಸಹ ರದ್ದು ಮಾಡಿರುವುದು ಸಕಾಲಿಕ ತೀರ್ಮಾನವಾಗಿದೆ. ಈ ನಿರ್ಧಾರವನ್ನು ಅಲ್ಲಿನ ಮುಖ್ಯಮಂತ್ರಿಯವರು ಪ್ರಕಟಿಸಿದ್ದಾರೆ.
ಲಾಕ್ಡೌನ್ 3.0 ಮುಗಿಯುತ್ತಿದ್ದಂತೆ ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ
ಈ ಹಿನ್ನೆಲೆಯಲ್ಲಿ, ನಮ್ಮ ರಾಜ್ಯದಲ್ಲಿಯೂ ಮಕ್ಕಳ ಸುರಕ್ಷತೆ ಹಿತದೃಷ್ಟಿ ಹಾಗು ಮಕ್ಕಳನ್ನು ಮಾನಸಿಕ ಒತ್ತಡದಿಂದ ಬಿಡುಗಡೆ ಮಾಡಲು , ಈ ಹಿಂದೆ ಒತ್ತಾಯಿಸಿದ್ದಂತೆ ಶಾಲಾ ಹಂತದಲ್ಲಿ ನಡೆದಿರುವ ಸಿದ್ಧತಾ ಪರೀಕ್ಷೆ (Preparatory exam) ಹಾಗು ಆಂತರಿಕ ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯನ್ನು ಆಧರಿಸಿ ಮಕ್ಕಳನ್ನು ತೇರ್ಗಡೆ ಮಾಡುವ ಮೂಲಕ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಗಳನ್ನು ರದ್ದುಗೊಳಿಸಬೇಕೆಂದು ಮತ್ತೊಮ್ಮೆ ತಮ್ಮ ನೇತೃತ್ವದ ಸರ್ಕಾರವನ್ನು ಕಳಕಳಿಯಿಂದ ಒತ್ತಾಯಿಸುತ್ತೇನೆ ಎಂದು ಪ್ರಧಾನ ಸುಗಮಕಾರ ಹಾಗು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ ಪಿ ಮನವಿ ಮಾಡಿಕೊಂಡಿದ್ದಾರೆ.