ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾಪಾರ ಮಾಡದಂತೆ ಅಮಿತ್ ಶಾ ಮಗನಿಗೆ ಹೇಳಲು ಸಾಧ್ಯವೇ?
ಬೆಂಗಳೂರು, ಮಾ.30: ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯವಹಾರ ಮಾಡದಂತೆ ಅಮಿತ್ ಶಾ ಅವರ ಪುತ್ರ ಜಯ್ ಶಾ ಗೆ ಬಿಜೆಪಿಯವರು ಹೇಳಲು ಸಾಧ್ಯವೇ? ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಜಯ್ ಶಾ ಅವರು ಇಸ್ಲಾಂ ದೇಶಗಳ ಜತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಅವರ ಬಳಿ ಹೋಗಿ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳಿ. ಇಲ್ಲಿ ಕೊರೋನಾ ಇದ್ದಾಗ ಐಪಿಎಲ್ ಎಲ್ಲಿ ನಡೆದಿತ್ತು? ಯಾರು ಹೋಗಿದ್ದರು ಅಲ್ಲಿಗೆ? ಅಲ್ಲಿ ದುಬೈ ಶೇಕ್ ಜತೆ ಕೈ ಮಿಲಾಯಿಸಿ ಇಲ್ಲಿ ಬಂದು ಇಸ್ಲಾಂ ವಿರೋಧಿ ಹೇಳಿಕೆ ನೀಡುತ್ತಾರಾ? ಎಂದು ಬುಧವಾರ ವಿಧಾನಸೌಧದದಲ್ಲಿ ಪ್ರಶ್ನಿಸಿದರು.
ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ಸಣ್ಣಪುಟ್ಟ ವ್ಯಾಪಾರಿಗಳನ್ನು ಮಾತ್ರ ಯಾಕೆ ಗುರಿ ಮಾಡುತ್ತಿದ್ದೀರಿ. ಅನೇಕ ಬಿಜೆಪಿ ನಾಯಕರು ಸೇರಿ ಮುಸ್ಲಿಂ ರಾಷ್ಟ್ರಗಳ ಜತೆಗೆ ವ್ಯವಹಾರ ಮಾಡುತ್ತಿದ್ದಾರೆ. ಮೋದಿ ಅವರ ಆತ್ಮನಿರ್ಭರ ಭಾರತದ ಕೂಗಿಗೆ ಮಾದರಿಯಾಗಬೇಕು ಎಂದು ನಾನು ಈಗಾಗಲೇ ಆಗ್ರಹಿಸಿದ್ದೆ. ಆದರೆ ಈ ವಿಚಾರವಾಗಿ ಬಿಜೆಪಿ ನಾಯಕರು ಇದುವರೆಗೂ ಯಾವುದೇ ಉತ್ತರ ನೀಡಿಲ್ಲ ಎಂದರು.

ನೀವು ಭಾರತವನ್ನು ವಿಶ್ವಗುರು ಮಾಡಲು ಹೊರಟಿದ್ದೀರೋ? ಪಾಕಿಸ್ತಾನ ಮಾಡಲು ಹೊರಟಿದ್ದೀರೋ? ಕರ್ನಾಟಕವನ್ನು ಉತ್ತರ ಪ್ರದೇಶ ಮಾಡುತ್ತಿದ್ದೀರೋ? ಒಂದು ಸಮುದಾಯದವರ ಅಂಗಡಿಯಲ್ಲಿ ಕೋಳಿ ಖರೀದಿ ಮಾಡಬೇಡಿ ಎನ್ನುತ್ತೀರಾ? ಅಲ್ಲಿರುವ ಕೋಳಿಗಳನ್ನು ಎಲ್ಲಿ ಸಾಕಿರುತ್ತಾರೆ ಎಂದು ಗೊತ್ತಾಗುತ್ತಿದೆಯೇ? ನಿಮಗೆ ಆರ್ಥಿಕ ಲಾಭ ಆಗುವಾಗ ಇಸ್ಲಾಂ, ಅಲ್ಪಸಂಖ್ಯಾತರು, ಹಿಂದುಳಿದವರು ಎಲ್ಲರ ಜತೆ ಚೆನ್ನಾಗಿರುತ್ತೀರಿ. ನಿಮ್ಮ ಮಕ್ಕಳಿಗೆ ಕಾನ್ವೆಂಟ್ಗಳಲ್ಲಿ ಸೀಟು ಬೇಕಾದಾಗ ಕ್ರೈಸ್ತ ಸಮುದಾಯದವರ ಜತೆ ಚೆನ್ನಾಗಿರುತ್ತೀರಿ. ಕೆಲಸ ಆಗಬೇಕಾದಾಗ ದಲಿತರೂ ಚೆನ್ನಾಗಿರುತ್ತಾರೆ. ಆದರೆ ಚುನಾವಣೆ ಬಂದಾಗ ಇವೆಲ್ಲ ವಿಚಾರ ನಿಮ್ಮ ಮುಂದೆ ಬರುತ್ತದೆ ಎಂದು ಕಿಡಿಕಾರಿದರು.

ಬೊಮ್ಮಾಯಿ ನಡೆ- ನುಡಿಯಲ್ಲಿ ವ್ಯತ್ಯಾಸ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಬಹಳ ಗೌರವವಿತ್ತು. ನಾನು ನೋಡಿರುವಂತೆ ಅವರು ಆರ್ಥಿಕ ಪ್ರಗತಿ ಬಗ್ಗೆ ಮಾತನಾಡುತ್ತಾರೆ. ಆದರೆ ಅವರ ನಡೆ ನುಡಿಯಲ್ಲಿ ವ್ಯತ್ಯಾಸ ಇದೆ. ಈ ವಿಚಾರವಾಗಿ ಅವರು ಯಾವುದಾದರೂ ಒಂದು ಹೇಳಿಕೆ ಕೊಟ್ಟಿದ್ದಾರಾ? ಈ ಬೆಳವಣಿಗೆಗಳ ದುಷ್ಪರಿಣಾಮದ ಬಗ್ಗೆ ಹೇಳಲು ಪ್ರಯತ್ನಿಸಿದ್ದಾರಾ?
ಯಾವುದೋ ಕಿಡಿಗೇಡಿಗಳು ಬಂದು ಒಂದು ಸಮುದಾಯ ವ್ಯಾಪಾರ ಮಾಡಬಾರದು ಎಂದರೆ ಸರ್ಕಾರ ಸುಮ್ನೇ ಕೂತಿದೆ. ಅವರು ನಾಗರೀಕರಲ್ಲವೇ? ಅವರೇನು ಸಮಾಜ ವಿರೋಧಿಗಳೇ? ನೀವು ಯುವಕರ ವಿರುದ್ಧ ಉದ್ಯೋಗ ಜಿಹಾದ್ ನಡೆಸಿದ್ದೀರಿ.
ಬಂಡವಾಳ ಹೂಡಿಕೆ ಆಗುವುದಿಲ್ಲ:
ಇನ್ವೆಸ್ಟ್ ಕರ್ನಾಟಕ ಎಂದು ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುತ್ತೀರಿ? ಈ ರೀತಿ ಪರಿಸ್ಥಿತಿ ನಿರ್ಮಾಣವಾದರೆ ಯಾರು ಬಂಡವಾಳ ಹೂಡಲು ಮುಂದೆ ಬರುತ್ತಾರೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಇಂತಹ ವಾತಾವರಣ ಇದ್ದರೆ 1 ರೂ. ಬಂಡವಾಳ ಬರುವುದಿಲ್ಲ. ಮೇಕ್ ಇಂಡಿಯಾ ಎಂದು ಹೇಳಿ ಫೇಕ್ ಇನ್ ಇಂಡಿಯಾ ಮಾಡುತ್ತಿದ್ದೀರಿ. ವಾಟ್ಸಪ್, ಫೇಸ್ ಬುಕ್ ನಲ್ಲಿ ಸುಳ್ಳು ಸಂದೇಶ ಕಳುಹಿಸುವುದು, ಮುಖ್ಯಮಂತ್ರಿಗಳೇ ಆ ಮೌನ ಯಾಕೆ? ರಾಜ್ಯದ ಪ್ರಗತಿ ತ್ಯಾಗ ಮಾಡುವಷ್ಟು ಕುರ್ಚಿ ಮೇಲೆ ವ್ಯಾಮೋಹವೇ? ಅವರು ಈ ಹಿಂದೆ ಈ ರೀತಿ ಇರಲಿಲ್ಲ. ಬಿಜೆಪಿಯಲ್ಲಿ ಹೈಕಮಾಂಡ್ ಮನವೊಲಿಸುವ ಸ್ಪರ್ಧೆಗೆ ಇಳಿದಿದ್ದಾರೆ. ಸ್ಪೀಕರ್ ಅವರು ತಮ್ಮ ಸ್ಥಾನದಲ್ಲಿ ಕೂತು ನಾನು ಆರ್ ಎಸ್ಎಸ್ ನಿಂದ ಬಂದಿದ್ದೇನೆ ಎಂದು ಹೇಳುತ್ತಾರೆ. ಆರ್ ಎಸ್ಎಸ್ ಇತಿಹಾಸ ಅವರಿಗೆ ಗೊತ್ತಿದೆಯೇ? ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಮಾಡಿ ನಮಗೆ ಸಂವಿಧಾನ ಬೇಡ, ಮನುಸ್ಮೃತಿ ಬೇಕು ಎಂದು ಹೇಳಿ ಸಂವಿಧಾನ ಸುಟ್ಟಿರುವ ಇತಿಹಾಸವಿದೆ ಎಂದರು.












Click it and Unblock the Notifications