ಗೃಹಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಟ್ವಿಟರ್ ಅಭಿಯಾನ!
ಬೆಂಗಳೂರು, ಏ. 29: ಬೆಳಗಾವಿಯಲ್ಲಿ ಸಿಆರ್ಪಿಎಫ್ ಕೊಬ್ರಾ ಕಮಾಂಡೊ ಸಚಿನ್ ಸಾವಂತ್ ಅವರ ಬಂಧನ, ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಗೆ ಆಗ್ರಹಿಸಿ ಟ್ವೀಟರ್ನಲ್ಲಿ ಅಭಿಯಾನ ಶುರುವಾಗಿದೆ.
#ResignHMBommai ಹ್ಯಾಶ್ಟ್ಯಾಗ್ನಲ್ಲಿ ನೆಟ್ಟಿಗರು ಟ್ವೀಟ್ ಮಾಡುತ್ತಿದ್ದು ಬಹಳಷ್ಟು ಜನರು ಪೊಲೀಸರ ನಡೆಯನ್ನು ಖಂಡಿಸಿದ್ದಾರೆ. ಮಾಸ್ಕ್ ಹಾಕಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಿದ್ದ ಪೊಲೀಸರು ನಂತರ ಬಾಸುಂಡೆ ಬರುವಂತೆ ಥಳಿಸಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೆ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಳಗಾವಿ ಜೈಲಿನಲ್ಲಿದ್ದ ಸಿಆರ್ ಪಿಎಫ್ ಯೋಧ ಬಿಡುಗಡೆ
ಟ್ವಿಟರ್ನಲ್ಲಿ ಪೊಲೀಸರ ವಿರುದ್ಧ ಜನರು ಕಿಡಿಕಾರುತ್ತಿದ್ದು, ದೇಶ ಕಾಯುವ ಯೋಧನನ್ನು ಅಮಾನವೀವಾಗಿ ನಡೆಸಿಕೊಂಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಮನೆ ಎದುರು ಬೈಕ್ ತೊಳೆಯುತ್ತಿದ್ದ ಸಿಆರ್ಪಿಎಫ್ ಯೋಧ ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ಕರ್ತವ್ಯ ನಿರತ ಪೊಲೀಸರು ಸಿಆರ್ಪಿಎಫ್ ಯೋಧ ಸಚಿನ್ ಸಾವಂತ್ ಅವರನ್ನು ಬಂಧಿಸಿ ಕೈಕೊಳ ತೊಡಿಸಿ ಮನ ಬಂದಂತೆ ಥಳಿಸಿದ್ದರು.
ಬೊಮ್ಮಾಯಿ ರಾಜೀನಾಮೆ ಪಡೆಯಲು ಸಿಎಂಗೆ ಸೂಲಿಬೆಲೆ ಆಗ್ರಹ
ಸಿಆರ್ಪಿಎಫ್ ಕೊಬ್ರಾ ಕಮಾಂಡೊ ಬಂಧನ, ಹಲ್ಲೆ ಸಮಸ್ಯೆಯನ್ನು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸ್ಥಳೀಯ ನಾಯಕರು ಪರಿಹರಿಸಬಹುದಿತ್ತು. ಕೊನೆಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರಾದರೂ ಮಧ್ಯೆ ಪ್ರವೇಶಿಸಿ ಸಮಸ್ಯೆ ಪರಿಹರಿಸಬಹುದಿತ್ತು. ಆದರೆ ಪ್ರಕರಣದಲ್ಲಿ ಗೃಹಸಚಿವರ ಅಸಾಮರ್ಥ್ಯ ಎದ್ದು ಕಾಣುತ್ತಿದೆ.
ಕೇವಲ ಯೋಧನ ಮೇಲೆ ಹಾಕಿರುವ ಪ್ರಕರಣ ವಾಪಾಸ್ ಪಡೆಯುವುದು ಮಾತ್ರ ಸಾಕಾಗುವುದಿಲ್ಲ. ಅಸಮರ್ಥ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆ ಪಡೆದು ಬೆಳಗಾವಿ ಎಸ್ಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಅಮಾನತು ಮಾಡಬೇಕೆಂದು ಹಿಂದುಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಟ್ವೀಟರ್ನಲ್ಲಿ ಒತ್ತಾಯಿಸಿದ್ದಾರೆ.
ತಬ್ಲಿಘಿಗಳ ಮೇಲೆ ಗೃಸಚಿವರ ಮೃಧು ಧೋರಣೆ
ಗೃಹಸಚಿವ ಬಸವರಾಜ್ ಬೊಮ್ಮಾಯಿ ಕಾರ್ಯವೈಖರಿ ಕುರಿತು ಚಿಂತಕ ಚಕ್ರವರ್ತಿ ಸೂಲಿಬೆಲೆ ಕಿಡಿಕಾರಿದ್ದಾರೆ. ತಬ್ಲಿಘಿಗಳ ಮೇಲೆ ಲಾಠಿ ಎತ್ತದಂತೆ ರಾಜ್ಯ ಸರ್ಕಾರ ಪೊಲೀಸರಿಗೆ ಆದೇಶ ಮಾಡಿತ್ತು. ಕೊರೊನಾ ವೈರಸ್ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಸೇವೆ ಮಾಡುತ್ತಿದ್ದ ಆಶಾ ಕಾರ್ಯಕರ್ತರಿಗೆ ಸೂಕ್ತ ಭದ್ರತೆಯನ್ನೂ ಕೊಡಲೇ ಇಲ್ಲ. ಪಾದರಾಯನಪುರ ಪ್ರವೇಶ ಮಾಡುವ ಮೊದಲು ಸಾಕಷ್ಟು ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳಲೇ ಇಲ್ಲ. ಹಿಂದುಗಳಿಗೆ ಜಾತ್ರೆಗಳನ್ನು ನಿಲ್ಲಿಸುವಂತೆ ಆದೇಶ ಮಾಡಲಾಯ್ತು.
CRPF ಯೋಧನಿಗೆ ಹಿಂಸೆ: ಸದಲಗಾ ಪಿಎಸ್ಐ ಅಮಾನತು
ಆದರೆ ಇದೇ ಸಂದರ್ಭದಲ್ಲಿ ಮುಸ್ಲಿಮರಿಗೆ ಒಂದೆಡೆ ಸೇರದಂತೆ ಕೇವಲ ಮನವಿ ಮಾಡಲಾಯ್ತು. ಇವೆಲ್ಲ ಕಾರಣಗಳ ಹಿನ್ನೆಲೆಯಲ್ಲಿ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ರಾಜೀನಾಮೆಯನ್ನು ಪಡೆಯಬೇಕೆಂದು ಚಕ್ರವರ್ತಿ ಸೂಲಿಬೆಲೆ ಆಗ್ರಹಿಸಿದ್ದಾರೆ.
ಹಿಂಡಲಗಾ ಜೈಲಿಗೆ ಕಳಿಸಿದ್ದ ಪೊಲೀಸರು
ಇನ್ನು ಏಪ್ರಿಲ್ 23ರಂದು ಸಿಆರ್ಪಿಎಫ್ ಕೊಬ್ರಾ ಕಮಾಂಡೊ ಬಂಧಿಸಿದ್ದ ಪೊಲೀಸರು ಐಪಿಸಿ ಸೆಕ್ಷನ್ 353, 323, 504 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು. ಜಾಮೀನು ಸಿಗದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಹಾಕಿದ್ದರು. ಕೊನೆಗೆ 5 ದಿನಗಳ ನಂತರ ಸಿಆರ್ಪಿಎಫ್ ಅಧಿಕಾರಿಗಳು ಬಂದು ಜಾಮೀನು ಕೊಟ್ಟು ಯೋಧನನ್ನು ಬಿಡಿಸಿ ಕೊಂಡಿದ್ದರು. ನಂತರ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿರುವ ಸಿಆರ್ಪಿಎಫ್ ಕೋಬ್ರಾ ಟ್ರೈನಿಂಗ್ ಸೆಂಟರ್ಗೆ ಸಿಆರ್ಪಿಎಫ್ ಡೆಪ್ಯೂಟಿ ಕಮಾಂಡೆಂಟ್ ರಘುವಂಶಿ ಉಪಾಧ್ಯ ಕರೆದುಕೊಂಡು ಹೋಗಿದ್ದರು.
ಯೋಧನಿಗೆ ವೈದ್ಯಕೀಯ ತಪಾಸಣೆ
ಪೊಲೀಸರು ಯೋಧನನ್ನು ಬಂಧಿಸಿ ಬಾಸುಂಡೆ ಬರುವ ಹಾಗೆ ಥಳಿಸಿದ್ದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೆ ಸಿಆರ್ಪಿಎಫ್ ಅಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಜಾಂಬೋಟಿಯಲ್ಲಿರುವ ಸಿಆರ್ಪಿಎಪ್ ಕೋಬ್ರಾ ಟ್ರೈನಿಂಗ್ ಸೆಂಟರ್ನಿಂದ ಯೋಧ ಸಚಿನ್ ಸಾವಂತ್ ಅವರನ್ನು ಅಧಿಕಾರಿಗಳು ಕರೆದುಕೊಂಡು ಬಂದು ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ.
ಸೈನಿಕರಿಗೆ ಮಾಡಿದ ಅವಮಾನ
ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಸಿಆರ್ಪಿಎಫ್ ಯೋಧನನ್ನು ಬಂಧಿಸಿರುವುದು ಖಂಡನೀಯ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದರು. ಒಬ್ಬ ಯೋಧ ಎನ್ನುವುದನ್ನೂ ಗಮನಿಸದೇ ಸಾರ್ವಜನಿಕವಾಗಿ ಹಿಂಸಿಸಿದ್ದಾರೆ. ಕೈದಿಯಂತೆ ಕೈಗೆ ಕೋಳ ತೊಡಿಸಿ ಬಂಧಿಸಿರುವುದನ್ನ ಸಮರ್ಥನೆ ಮಾಡಲು ಸಾಧ್ಯವಿಲ್ಲ. ನಿರಪರಾಧಿ ಯೋಧನನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿ, ಬಂಧಿಸಿರುವುದು ಸಮವಸ್ತ್ರ ಧರಿಸಿದ ಸೈನಿಕರಿಗೆ ಮಾಡಿದ ಅವಮಾನ. ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರವನ್ನು ಆಗ್ರಹಿಸಿದ್ದರು.
ಸಬ್ಇನ್ಸ್ಪೆಕ್ಟರ್ ಸಸ್ಪೆಂಡ್ ಮಾಡಿ ಕೈತೊಳೆದುಕೊಂಡ ಸರ್ಕಾರ
ಇಷ್ಟೆಲ್ಲಾ ಅವಾಂತರವಾದ ಬಳಿಕ ಸರ್ಕಾರವೀಗ ಸದಲಗಾ ಸಬ್ಇನ್ಸ್ಪೆಕ್ಟರ್ ಅನಿಲ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿ ಕೈತೊಳೆದುಕೊಂಡಿದೆ. ಸಿಆರ್ಪಿಎಫ್ ಕೊಬ್ರಾ ಕಮಾಂಡೊ ಸಚಿನ್ ಸಾವಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಆರೋಪದಡಿ ಅನಿಲ್ ಕುಮಾರ್ ಅಮಾನತು ಮಾಡಲಾಗಿದೆ ಎಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಹೇಳಿಕೆ ಕೊಟ್ಟಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪಿಎಸ್ಐ ಅನಿಲಕುಮಾರ್ ಕರ್ತವ್ಯ ಲೋಪ ಕಂಡುಬಂದಿದ್ದು ಅವಮಾನತು ಮಾಡಲಾಗಿದೆ. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಅವರಿಂದ ಹೇಳಿಕೆ ಪಡೆಯಲಾಗಿದೆ. ತನಿಖೆ ಮುಂದುವರೆದಿದ್ದು ಪೇದೆಗಳ ತಪ್ಪು ಮಾಡಿರುವ ಕುರಿತು ಕೂಡ ವಿಚಾರಣೆ ನಡೆದಿದೆ ಎಂದು ರಾಘವೇಂದ್ರ ಸುಹಾಸ್ ಹೇಳಿದ್ದಾರೆ.
ಟ್ವಿಟರ್ನಲ್ಲಿಯ ಅಭಿಪ್ರಾಯಗಳು
ಟ್ವಿಟರ್ನಲ್ಲಿ ಅಭಿಯಾನ ಮುಂದುವರೆದಿದ್ದು ಗೃಹಸಚಿವ ಬೊಮ್ಮಾಯಿ ಅವರ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ. ಟ್ವಿಟ್ಟಿಗರು ಅಭಿಯಾನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಹೀಗಿವೆ:
ನಮ್ಮ ರಾಜ್ಯದಲ್ಲಿ ಪಾಪಿಗಳಿಗೆ ಬಿರಿಯಾನಿ ಊಟ, ರಾಜಕಾರಣಿಗಳ ಮಕ್ಕಳಿಗೆ ನಿಂತಲ್ಲೇ ಬೇಲ್ (ಇದರಲ್ಲಿ ಪಕ್ಷಭೇದನು ಇಲ್ಲ), ಆದರೆ ಸೈನಿಕನ ಇಲ್ಲದ ತಪ್ಪಿಗೆ ಲಾಟಿಯೇಟು #ResignHMBommai
ಸ್ವಾಮಿ ಬೊಮ್ಮಾಯಿ ಕೇಸ್ ಕೇಳಿ ಸಾಕಾಗಿತ್ತು ಇವಾಗ ಬೊಮ್ಮಾಯಿ ಅವರು ಗೃಹಖಾತೆ ನಿಭಾಯಿಸುವ ಬದಲು ಮನೆಯ ಸಾಸಿವೆ ಡಬ್ಬಿಯಲ್ಲಿ ಚಿಲ್ಲರೆ ಹುಡುಕುವ ಕೆಲಸ ಮಾಡಿದರೆ ಒಳ್ಳೇದು ಅನ್ನೋ ಭಾವನೆ ಬಂದಿದೆ ಸಮಯ ಇದ್ದರೆ ವಾರ್ತೆ ನೋಡಿ ಹೇಗೆ ನಿಮ್ಗೆ ಉಗಿತಾ ಇದ್ದಾರೆ ಅಂತ ಇನ್ನಾದ್ರೂ ಬದಲಾಗಿ ಸ್ವಾಮಿ #ResignHMBommai
14 ಜನ ಪೊಲೀಸರು & ಒಬ್ಬರು ಲೇಡಿ ಪೊಲೀಸ್ ಒಟ್ಟು 15 ಜನಾ ಸೇರಿ ಸತತ ಎರಡು ದಿನಾ ಮೃಗಕ್ಕೆ ಹೊಡೆದಂತೆ ಬಾಸುಂಡೆ ಬರೋ ಹಾಗೆ ಯೋಧನಿಗೆ ಥಳಿಸಿದ್ದಾರೆ. ಕಾನೂನು ಸುವ್ಯವಸ್ಥೆ ಎಲ್ಲರಿಗೂ ಒಂದೇ ಅನ್ನೋದಾದ್ರೆ ಬಾಕಿ 14 ಜನ ಸಹಿತ ಸಸ್ಪೆಂಡ್ ಆಗಬೇಕು. ಯೋಧನ ಪರವಾಗಿ ಇಡೀ ದೇಶವೇ ನಿಂತಿದೆ. #ResignHMBommai
ನೀವು ಕ್ವಾರಂಟೈನಲ್ಲೆ ಇರಿ ಸಾರ್.. ನಿಮಗ್ಯಾಕೆ ಗೃಹ ಖಾತೆ ಬೇರೆ ಯಾರಿಗಾದ್ರು ಹಸ್ತಾಂತರ ಮಾಡಿ, ಪಾದರಾಯನಪುರದಲ್ಲಿ ಪೋಲಿಸ್ ಪವರ್ ಏನೂಂತ ತೊರಿಸ್ತೀವಿ ಅಂದಿದ್ರಿ ಯಾರ್ಮೇಲೆ ತೋರ್ಸಿದ್ದೀರ? ಏನಾದ್ರೂ ಗೊತ್ತಾ. ಯೋಧ ಅಂತ ಗೊತ್ತಿದ್ದು ಹೊಡ್ದಿದ್ದಾರೆ, sp ರಾಜಿನಾಮೆ ಕೊಡ್ಸಿ. #ResignHMBommai
ಸ್ವಾಮಿ ಗೃಹ ಸಚಿವರ ಸೇವೆ ನಮಗೆ ಸಾಕಾಗಿದೆ. ಸೈನಿಕನನ್ನು ನೆಡೆಸಿಕೊಂಡ ರೀತಿ ನೋಡಿ ಸರ್ಕಾರದ ಮೇಲೆ ನಂಬಿಕೆ ಇಲ್ಲವಾಗಿದೆ. ಸಮರ್ಥಿಸಿದ ಎಸ್ಪಿ ಯವರ ಮೇಲೆ ಕ್ರಮ ಕೈಗೊಳ್ಳಿ... #ResignHMBommai
ಮಾನ್ಯ @CMofKarnataka ರವರೆ ನಿಮಗೆ ಸಮರ್ಥ ಅನಿಸುವ, ಮತ್ತು ನಿಭಾಯಿಸುವರಿಗೆ ಗೃಹಖಾತೆ ನೀಡಿ.! ಬೊಮ್ಮಾಯಿ ರವರಿಗೆ ಬೇಕಾದರೆ ಯಾವುದಾದರೂ ಬೇರೆ ಖಾತೆ ನೀಡಿಬಿಡಿ.! ರಾಷ್ಟ್ರ ಮಟ್ಟದಲ್ಲಿ ನಮ್ಮ ರಾಜ್ಯದ ಮರ್ಯಾದೆಯನ್ನು ಹರಾಜಾಕಿರುವುದು ಸಾಕು.! #ResignHMBommai
ಒಬ್ಬ ದೇಶ ಕಾಯುವ ಯೋಧನಿಗೆ ಈ ರೀತಿ ಆದರೆ ಇನ್ನು ಉಳಿದವರ ಕತೆ ಹೇಗೆ? ಜವಾಬ್ದಾರಿಯುತ ನಾಯಕರೇ ಸಂಬಂಧವಿಲ್ಲದ ಹಾಗೆ ನಡೆಕೊಂಡರೆ ಹೇಗೆ? ಸಾಕು ನಿಮ್ಮ ಸಹಾಯ please #ResignHMBommai
#ResignHMBommai ಠಾಣೆಯ ಸಬ್ ಇನ್ಸ್ಪೆಕ್ಟರ್ ಅಮಾನತುಗೊಂಡರೆ ಸಾಲದು,ಯೋಧನ ಮೇಲೆ ದರ್ಪ ತೋರಿದ ಪೊಲೀಸ್ ಪೇದೆ ಹಾಗೂ ಬೆಳಗಾವಿ ಎಸ್ಪಿ ಅವರನ್ನು ಅಮಾನತು ಮಾಡಬೇಕು , ಆಗಿಲ್ಲ ಎಂದರೆ ಮಾನ್ಯ ಗೃಹ ಸಚಿವರೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಇರಿ #StayHome #StayHome #Minister