ಶುಕ್ರವಾರದ ಸಚಿವ ಸಂಪುಟ ಸಭೆ; ಪ್ರಮುಖ ಅಂಶಗಳು
ಬೆಂಗಳೂರು, ಆಗಸ್ಟ್ 12: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಶುಕ್ರವಾರ ನಡೆಯಿತು. ಕೆಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಯಿತು. ಹಲವು ಯೋಜನೆಗಳಿಗೆ ಒಪ್ಪಿಗೆಯನ್ನೂ ನೀಡಲಾಯಿತು. ಕುತೂಹಲ ಕೆರಳಿಸಿದ್ದ ಬಿಬಿಎಂಪಿ ಚುನಾವಣೆ ಹಾಗೂ ಎಸಿಬಿ ರದ್ದಿನ ಬಗ್ಗೆಯೂ ಸಭೆಯಲ್ಲಿ ಕೆಲ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕರ್ನಾಟಕ ಹೈಕೋರ್ಟ್ ಎಸಿಬಿಯನ್ನು ರದ್ದುಪಡಿಸಿ ಆದೇಶಿಸಿದೆ. ಪ್ರತ್ಯೇಕ ಸಂಸ್ಥೆ ಬೇಕಿಲ್ಲ, ಲೋಕಾಯುಕ್ತ ಅಧೀನದಲ್ಲೇ ಭ್ರಷ್ಟಾಚಾರ ನಿಗ್ರಹದಳ ಕಾರ್ಯನಿರ್ವಹಿಸಬೇಕೆಂದು ನಿರ್ದೇಶಿಸಿದೆ. ಆದರೆ ಹೈಕೋರ್ಟ್ ಆದೇಶ ಮಾಡಿದರೂ ಸರ್ಕಾರ ಎಸಿಬಿ ವಾಪಸ್ ಪಡೆಯೋಕೆ ಇನ್ನೂ ಹಿಂದೇಟು ಹಾಕುತ್ತಿದೆ.
ಹಿಂದೆ ಸಿದ್ದರಾಮಯ್ಯ ಸರ್ಕಾರ 2016ರಲ್ಲಿ ಎಸಿಬಿಯನ್ನು ತಂದಾಗ ಇದೇ ಬಿಜೆಪಿ ನಾಯಕರು ವಿರೋಧಿಸಿದ್ದರು. ಆದರೆ ಈಗ ಕೋರ್ಟ್ ರದ್ಧು ಪಡಿಸಿದರೂ ಸರ್ಕಾರ ಕಾಯ್ದೆ ವಾಪಸ್ ಪಡೆಯೋಕೆ ಮೀನಾಮೇಷ ಎಣಿಸುತ್ತಿದೆ.
ಎಸಿಬಿಯನ್ನು ಬಳಸಿಕೊಂಡೇ ಪ್ರತಿಪಕ್ಷಗಳು ಹಾಗೂ ಅಧಿಕಾರಿಗಳನ್ನು ಹಣಿಯಲು ಸರ್ಕಾರ ಮುಂದಾಗಿತ್ತು. ಇತ್ತೀಚೆಗಷ್ಟೇ ಕಾಂಗ್ರೆಸ್ನ ಶಾಸಕ ಜಮೀರ್ ಅಹಮದ್ ನಿವಾಸದ ಮೇಲೂ ಎಸಿಬಿ ದಾಳಿ ಆಗಿತ್ತು. ಕಾಂಗ್ರೆಸ್ ನಾಯಕರ ಬಾಯಿಮುಚ್ಚಿಸೋಕೆ ಹೊರಟಿತ್ತು.
ಈಗ ಎಸಿಬಿ ರದ್ಧಾಗಿರುವುದರಿಂದ ಸರ್ಕಾರ ಪ್ರತಿಪಕ್ಷಗಳನ್ನು ಹಣಿಯೋಕೆ ಸಾಧ್ಯವಾಗಲ್ಲ. ಅಷ್ಟೇ ಅಲ್ಲ ಈಗ ಇರುವ ಪ್ರಕರಣಗಳು ಲೋಕಾಯುಕ್ತಕ್ಕೇ ವರ್ಗಾವಣೆಯಾಗುತ್ತದೆ. ಆಗ ಸರ್ಕಾರ ಹಿಡಿತ ಸಾಧಿಸೋಕೆ ಬರಲ್ಲ. ಇದರ ಜೊತೆಗೆ ಲೋಕಾಯುಕ್ತ ಬಲಗೊಳ್ಳುವುದರಿಂದ ಇವರ ಶಾಸಕರಿಗೂ ಕುತ್ತು ಬರಲಿದೆ. ಹಾಗಾಗಿ ಸರ್ಕಾರ ಇನ್ನೂ ವಾಪಸ್ ಪಡೆಯುವುದಕ್ಕೆ ಹಿಂದೇಟು ಹಾಕುತ್ತಿದೆ ಎನ್ನುವ ಮಾಹಿತಿ ಇದೆ.

ಬಿಬಿಎಂಪಿ ಚುನಾವಣೆಗೆ ಸಿಗಲಿದ್ಯಾ ಗ್ರೀನ್ ಸಿಗ್ನಲ್?
ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಭಕ್ತವತ್ಸಲ ಕಮಿಟಿ ಸಲ್ಲಿಸಿದ್ದ ವರದಿಯನ್ನು ಸಚಿವ ಸಂಪುಟ ಒಪ್ಪಿಕೊಂಡಿದೆ. ಅಲ್ಲದೆ ಇದೇ ವರದಿಯನ್ನೇ ಯಥಾವತ್ ಸುಪ್ರೀಂಕೋರ್ಟ್ಗೂ ಸಲ್ಲಿಸಿದೆ. ಕೋರ್ಟ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದೇ ಆದರೆ ಸರ್ಕಾರ ಅನಿವಾರ್ಯವಾಗಿ ಬಿಬಿಎಂಪಿ ಚುನಾವಣೆ ನಡೆಸಬೇಕಾಗುತ್ತದೆ.
ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣೆ ನಡೆಸುವ ಉದ್ದೇಶ ಸರ್ಕಾರಕ್ಕಿರಲಿಲ್ಲ. ಬೆಲೆ ಏರಿಕೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ, ರಾಜ್ಯದಲ್ಲಿ ನಡೆದಿರುವ ಹಲವು ಘಟನೆಗಳಿಂದ ಜನ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಚುನಾವಣೆ ನಡೆಸಿದರೆ ಹಿನ್ನಡೆಯಾಗಲಿದೆ ಎಂಬ ಕಾರಣಕ್ಕೆ ಮುಂದಕ್ಕೆ ಹಾಕುತ್ತಲೇ ಬಂದಿತ್ತು. ಆದರೆ ಯಾವಾಗ ಸುಪ್ರೀಂ ಮೀಸಲಾತಿ ನಿಗದಿ ಪಡಿಸಿ ಚುನಾವಣೆ ನಡೆಸಿ ಅಂತ ಹೇಳಿತೋ ಸರ್ಕಾರ ಚುನಾವಣೆ ನಡೆಸುವ ಅನಿವಾರ್ಯತೆಗೆ ಸಿಲುಕಿದೆ.

ಸಂಘ ಪರಿವಾರದ ಸಂಸ್ಥೆಗೆ ನೀಡಿದ್ದಕ್ಕೆ ವಿರೋಧ
ಪ್ರತಿ ಕ್ಯಾಬಿನೆಟ್ ನಲ್ಲೂ ಸಂಘ ಪರಿವಾರದ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡುತ್ತಲೇ ಬರುತ್ತಿದೆ. ಕಳೆದ ಎರಡು-ಮೂರು ಸಂಪುಟದಲ್ಲಿ ಪರಿವಾರದ ಸಂಸ್ಥೆಗಳಿಗೆ ಭೂಮಿ ನೀಡಲಾಗಿದೆ. ಇಂದೂ ಸಹ ಜನಸೇವಾ ಟ್ರಸ್ಟ್ಗೆ ಬೆಂಗಳೂರು ದಕ್ಷಿಣ ತಾಲೂಕಿನ ಕುರಬರಹಳ್ಳಿಯಲ್ಲಿ 35.33 ಎಕರೆ ಭೂಮಿಯನ್ನು ಶೈಕ್ಷಣಿಕ, ಆರೋಗ್ಯ ಉದ್ದೇಶಕ್ಕೆಂದು ನೀಡಿದೆ. ಸರ್ಕಾರದ ಈ ನಡೆಗೆ ಅಪಸ್ವರವೂ ಕೇಳಿಬರುತ್ತಿದೆ. ಇದರ ಜೊತೆಗೆ ಕೆಲ ಕೇಸ್ ಸಹ ವಾಪಾಸ್ಸು ಪಡೆದಿರುವುದು ಸಹ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದ ವಿಷಯಗಳು
*ಕರ್ನಾಟಕವನ್ನು ರಕ್ಷಣಾ ಸಾಮಾಗ್ರಿ ತಯಾರಿಕಾ ಹಬ್ ಮಾಡುವ ಉದ್ದೇಶ, ಹೊಸ ರಕ್ಷಣಾ ನೀತಿಗೆ ಸಮ್ಮತಿ
*ನಂಜುಂಡಪ್ಪ ವರದಿ ಪರಿಷ್ಕರಣೆ. 100 ಹಿಂದುಳಿದ ತಾಲೂಕುಗಳಲ್ಲಿ ಆರೋಗ್ಯ, ಶಿಕ್ಷಣಕ್ಕೆ ಹೊಸ ಯೋಜನೆ
* ಶ್ರೀಶೈಲದಲ್ಲಿ 85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ್ ಭವನ ನಿರ್ಮಾಣ
*ಜಲಜೀವನ್ ಮಿಷನ್ ನಡಿ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಒಪ್ಪಿಗೆ
*ಹಿರಿಯೂರಿನ ಚರಂಡಿ ಕಾಮಗಾರಿಗೆ 100 ಕೋಟಿ, ಹರಪನಹಳ್ಳಿ ತಾಲೂಕಿನ ಗ್ರಾಮಗಳ ಕುಡಿಯುವ ನೀರಿಗೆ 270 ಕೋಟಿ
* ಚಡಚಣ,ಮನಗೂಳಿ,ಕೊಲ್ಹಾರ್ ಕುಡಿಯುವ ನೀರಿನ ಯೋಜನೆಗೆ 2077 ಕೋಟಿ
*ರಾಜ್ಯದ ಹಲವು ಕಡೆ ಮಹಿಳಾ ಸ್ವಾಸ್ಥ್ಯ ಕೇಂದ್ರಗಳ ಸ್ಥಾಪನೆಗೆ 19 ಕೋಟಿ ಅನುದಾನ
* ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ
*ಉತ್ತರ ಕರ್ನಾಟಕ ಸಂಘಕ್ಕೆ ಬೆಂಗಳೂರಿನಲ್ಲಿ 3.24 ಎಕರೆ ಜಮೀನು
*ಕೆಎಸ್ ಆರ್ ಟಿಸಿಗೆ 199 ಕೋಟಿ ವೆಚ್ಚದಲ್ಲಿ 650 ಬಸ್ ಖರೀದಿ, ಬಿಎಂಟಿಸಿಗೆ 336 ಕೋಟಿ ವೆಚ್ಚದಲ್ಲಿ 840 ಬಸ್ ಖರೀದಿಗೆ ಒಪ್ಪಿಗೆಯನ್ನು ಸಂಪುಟದಲ್ಲಿ ನೀಡಲಾಗಿದೆ.

ಅರೇ ಮನಸ್ಸಿನಲ್ಲೇ ಕೆಲವು ತೀರ್ಮಾನ
ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಹಲವು ನಿರ್ಣಯಗಳನ್ನು ತೆಗೆದುಕೊಂಡಿದೆ. ಎಸಿಬಿ ರದ್ಧು ವಾಪಸ್ ಪಡೆಯುವ ವಿಚಾರದಲ್ಲಿ ಹಿಂದೆ ಮುಂದೆ ನೋಡುತ್ತಿದೆ. ಬಿಬಿಎಂಪಿ ಚುನಾವಣೆ ನಡೆಸುವುದಕ್ಕೆ ಮನಸ್ಸಲ್ಲದ ಮನಸ್ಸಿನಲ್ಲಿ ಮುಂದಡಿಯಿಟ್ಟಿದೆ. ಹೀಗಾಗಿ ಇಂದಿನ ಸಭೆಯಲ್ಲಿ ಹಲವು ತೀರ್ಮಾನ ತೆಗೆದುಕೊಳ್ಳಲಾಗಿದೆ.












Click it and Unblock the Notifications