ವನ್ಯಜೀವಿಗಳಿಂದ ಪ್ರಾಣ ಹಾನಿ ಆದವರಿಗೆ ರೂ.5 ಲಕ್ಷದ ಜೊತೆ ರೂ.2000 ಮಾಸಾಶನ
Recommended Video

ಬೆಂಗಳೂರು, ಅಕ್ಟೋಬರ್ 05: ಮೈತ್ರಿ ಸರ್ಕಾರವು ನಿನ್ನೆ ರಾತ್ರಿ ಸಂಪುಟ ಸಭೆ ನಡೆಸಿದ್ದು, ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಸಂಪುಟವು ತೆಗೆದುಕೊಂಡಿತು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಖಾಸಗಿ ಹೊಟೆಲ್ನಲ್ಲಿ ನಡೆದ ಸಭೆಯಲ್ಲಿ ಸರ್ಕಾರದ ಎಲ್ಲ ಸಚಿವರು ಭಾಗವಹಿಸಿದ್ದರು. ಸಭೆಯ ನಂತರ ಸಂಪುಟ ಸಭೆಯ ನಿರ್ಣಯಗಳನ್ನು ಸಚಿವ ಕೃಷ್ಣಭೈರೇಗೌಡ ಅವರು ಮಧ್ಯಮಗಳಿಗೆ ತಿಳಿಸಿದರು.
ತೋಟಗಾರಿಕಾ ಬೆಳೆಯಾದ ತೆಂಗು, ಮಳೆ ಹಾಗೂ ವಿವಿಧ ಕಾರಣಗಳಿಂದ ಫಲಸು ಸರಿಯಾಗಿ ಬರದೆ ಬೆಳೆಗಾರರು ನಷ್ಟ ಅನುಭವಿಸಿರುವ ಕಾರಣ, 44542 ಹೆಕ್ಟೆರ್ ತೆಂಗು ಬೆಳೆ ನಷ್ಟಕ್ಕೆ 178 ಕೋಟಿ ರೂಪಾಯಿಯನ್ನು ರೈತರಿಗೆ ಬೆಳೆ ಪರಿಹಾರದ ರೂಪದಲ್ಲಿ ವಿತರಿಸಲು ಸಂಪುಟ ಒಪ್ಪಿಗೆ ನೀಡಿದೆ.
ವನ್ಯಜೀವಿಗಳಿಂದ ಮೃತರಾದ ಕುಟುಂಬಗಳಿಗೆ ಈಗ ನೀಡುತ್ತಿರುವ 5 ಲಕ್ಷ ಪರಿಹಾರದ ಜೊತೆಗೆ ಪ್ರತಿ ತಿಂಗಳು ಎರಡು ಸಾವಿರ ಮಾಸಾಶನ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ಮಾಸಾಶನವನ್ನು ಐದು ವರ್ಷಗಳ ವರೆಗೆ ನೀಡಲಾಗುತ್ತದೆ.

ಹಾಸನಕ್ಕೆ ಈ ಬಾರಿಯೂ ಭರಪೂರ ಅನುದಾನ
ಹಾಸನಕ್ಕೆ ಈ ಬಾರಿಯೂ ಭರಪೂರ ಅನುದಾನ ನೀಡಿದ್ದು, ಹಾಸನದಲ್ಲಿ ಎಂಜಿನಿಯಂರಿಂಗ್ ಕಾಲೇಜು ಹಾಸ್ಟೆಲ್, ಗ್ರಂಥಾಲಯ ಇತರೆ ಮೂಲಭೂತ ಸೌಕರ್ಯ ಕಲ್ಪಿಸಲು 50 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಸನದ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮೊದಲ ಹಂತವಾಗಿ ರೂ. 50 ಕೋಟಿ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ತರಬೇತಿ ಕೇಂದ್ರ ಸ್ಥಾಪನೆಗೆ 144 ಕೋಟಿ
ರಾಜ್ಯದಲ್ಲಿ ಯಾದಗಿರಿ, ಹುಮ್ನಾಬಾದ್, ಹೊಸಪೇಟೆ, ಲಿಂಗಸಗೂರಿನಲ್ಲಿ ಸಿಲ್ಕ್ ಟ್ರೈನಿಂಗ್ ಸೆಂಟರ್ ತೆರೆಯಲಾಗುತ್ತದೆ. ಆಟೋಮೊಬೈಲ್, ಏರೋಸ್ಪೇಸ್ ಕುರಿತು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು 144 ಕೋಟಿ ಮೀಸಲಿಡಲು ಸಚಿವರು ಒಪ್ಪಿಗೆ ನೀಡಿದೆ. ಬೀದರ್ ಮತ್ತು ಶಿವಮೊಗ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೃದ್ರೋಗ ಚಿಕಿತ್ಸಾ ಘಟಕ ಸ್ಥಾಪನೆ ಮಾಡಲು ಬೀದರ್ಗೆ 7.25 ಕೋಟಿ ರೂ. ಹಾಗೂ ಶಿವಮೊಗ್ಗಕ್ಕೆ 7.81 ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ.

ತೋಟಗಾರಿಗೆ ಉತ್ಕೃಷ್ಟ ಕೇಂದ್ರ ಸ್ಥಾಪನೆ
ಬಾಗಲಕೋಟೆ, ಧಾರವಾಡ, ಕೋಲಾರ, ಮಂಡ್ಯ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ತೋಟಗಾರಿಕಾ ಉತ್ಕೃಷ್ಟ ಕೇಂದ್ರ ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ. ಇವುಗಳ ನಿರ್ವಹಣೆಗೆ ಕರ್ನಾಟಕ ರಾಜ್ಯ ತೋಟಗಾರಿಕೆ ಉತ್ಕೃಷ್ಟ ಕೇಂದ್ರ ಏಜೆನ್ಸಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕೆ 60 ಕೋಟಿ ರೂ. ಗಳನ್ನು ಒದಗಿಸಲು ಸಂಪುಟ ಒಪ್ಪಿದೆ.

108 ಆಂಬುಲೆನ್ಸ್ಗೆ ಹೊಸ ಟೆಂಡರ್ ಪ್ರಕ್ರಿಯೆ
108 ಆಂಬ್ಯುಲೆನ್ಸ್ ಸೇವೆಗೆ 2009ರಲ್ಲಿ ಜಿವಿಕೆ ಜೊತೆ ಮಾಡಿಕೊಳ್ಳಲಾಗಿದ್ದ ಒಪ್ಪಂದ ಅವಧಿ ಮುಗಿದ್ದಿದ್ದು, ಮುಂದಿನ ಒಂದು ವರ್ಷದ ಅವಧಿಯೊಳಗೆ ಹೊಸ ಟೆಂಡರ್ ಪ್ರಕ್ರಿಯೆ ಮುಗಿಸಲು ಹಾಗೂ ಅದುವರೆಗೂ ಈಗಿರುವ ಒಪ್ಪಂದವನ್ನೇ ಮುಂದು ವರೆಸಲು ಸಚಿವ ಸಂಪುಟ ತೀರ್ಮಾನಿಸಿದೆ.

14 ಕ್ರಿಮಿನಲ್ ಪ್ರಕರಣ ವಾಪಸ್
ರೈತ ಸಂಘಟನೆ ಮೇಲಿನ ಪ್ರಕರಣ ಸೇರಿದಂತೆ ವಿವಿಧ ಠಾಣೆಗಳಲ್ಲಿ ಸಂಘ ಸಂಸ್ಥೆಗಳ ಮೇಲೆ ದಾಖಲಾಗಿದ್ದ ಒಟ್ಟು 14 ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯಲು ಸಂಪುಟ ಸಭೆ ತೀರ್ಮಾನ ಮಾಡಿದೆ. ಹಾಸನದ ಕೆಎಸ್ಆರ್ಟಿಸಿಗೆ ಸೇರಿದ 4 ಎಕರೆ ಜಮೀನನ್ನು ಹಾಸನ ಹಾಲು ಒಕ್ಕೂಟಕ್ಕೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ.












Click it and Unblock the Notifications