ಸಂಪುಟ ರಚನೆ, ಇದೆಂತಹ ಪ್ರಾದೇಶಿಕತೆ? 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ
ಅಂತೂ, ಇಂತೂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆ ಅಂತಿಮ ಸ್ವರೂಪಕ್ಕೆ ಬಂದಿದೆ. ಆಗಸ್ಟ್ ನಾಲ್ಕರ ಮಧ್ಯಾಹ್ನ ನೂತನ ಸಚಿವರ ಪದಗ್ರಹಣ, ರಾಜಭವನದಲ್ಲಿ ನಡೆಯಲಿದೆ. 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಯಾಕೆ ಇನ್ನೂ ವರಿಷ್ಠರು ಕೊಟ್ಟಿಲ್ಲ ಎಂದು ಮಂಗಳವಾರ ದೆಹಲಿಯಲ್ಲಿ ಬೊಮ್ಮಾಯಿಯವರನ್ನು ಕೇಳಿದಾಗ, ಜಾತಿವಾರು, ಪ್ರಾದೇಶಿಕತೆಗೆ ಒತ್ತು ನೀಡಿ, ಸಂಪುಟ ರಚನೆ ಮಾಡಬೇಕಿದೆ ಎಂದು ಸಿಎಂ ಹೇಳಿದ್ದರು. ಆದರೆ, ನೂತನ ಸಚಿವರಾಗುವವರ ಪಟ್ಟಿಯನ್ನು ನೋಡಿದರೆ, ಸಿಎಂ ಮಾತಿಗೆ ಚ್ಯುತಿ ಬಂದಿದೆ.
ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ, ಹೈಕಮಾಂಡ್ ಹಲವು ಸಂದೇಶವನ್ನು ರಾಜ್ಯದ ಬಿಜೆಪಿ ಮುಖಂಡರಿಗೆ ಕಳುಹಿಸಿದಂತೂ ಅತ್ಯಂತ ಸ್ಪಷ್ಟ. ಉಪ ಮುಖ್ಯಮಂತ್ರಿ ಎನ್ನುವ ಪರಿಕಲ್ಪನೆಯಿಂದ ವರಿಷ್ಠರು ಹೊರ ಬಂದಿದ್ದಾರೆ.
ಮೂವರು ಉಪ ಮುಖ್ಯಮಂತ್ರಿಗಳು ಯಡಿಯೂರಪ್ಪನವರ ಸರಕಾರದಲ್ಲಿ ಇದ್ದರು. ಈಗ, ನೂತನ ಬೊಮ್ಮಾಯಿ ಸಂಪುಟದಲ್ಲಿ ವರಿಷ್ಠರು ಆ ಪದ್ದತಿಗೆ ಬ್ರೇಕ್ ಹಾಕಿದ್ದಾರೆ. ಜೊತೆಗೆ, ಶಿಸ್ತು ಮೀರಿದವರನ್ನು ಪರಿಗಣಿಸುವುದಿಲ್ಲ ಎನ್ನುವುದನ್ನೂ ಖಡಕ್ಕಾಗಿ ಸಾರಿದ್ದಾರೆ.

ಉಪ ಮುಖ್ಯಮಂತ್ರಿ ಪದ್ದತಿಗೆ ಪಕ್ಷ ಸದ್ಯಕ್ಕೆ ತಿಲಾಂಜಲಿ ಇಟ್ಟಂತೆ ಕಾಣುತ್ತದೆ
ಹಲವು ಹಿರಿಯ ಮುಖಂಡರನ್ನು ಬಿಜೆಪಿ ಪರಿಗಣಿಸಲಿಲ್ಲ, ಅವರಿಗೆಲ್ಲಾ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗುವುದು ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಉತ್ತರ. ಇವರೆಲ್ಲಾ, ಮುಂದಿನ ದಿನಗಳಲ್ಲಿ ಯಾವ ರೀತಿ ನಡೆದುಕೊಳ್ಲಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ. ಉಪ ಮುಖ್ಯಮಂತ್ರಿ ಪದ್ದತಿಗೆ ಪಕ್ಷ ಸದ್ಯಕ್ಕೆ ತಿಲಾಂಜಲಿ ಇಟ್ಟಂತೆ ಕಾಣುತ್ತದೆ. ಪ್ರಮುಖವಾಗಿ, ಆರ್.ಅಶೋಕ್ ಮತ್ತು ಬಿ.ಶ್ರೀರಾಮುಲು ಹೆಸರು ಈ ಪಟ್ಟಿಯಲ್ಲಿ ಕೇಳಿ ಬರುತ್ತಿತ್ತು.

ರಾಜ್ಯದ ಹದಿಮೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗದೇ ಇರುವುದು
ಜಾತಿವಾರು ಲೆಕ್ಕಾಚಾರದ ಪ್ರಕಾರ ಸಚಿವ ಸ್ಥಾನ ನೀಡಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ರಾಜ್ಯದ ಹದಿಮೂರು ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಗದೇ ಇರುವುದು ಪಕ್ಷಕ್ಕೆ ಯಾವ ರೀತಿ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎನ್ನುವುದಕ್ಕೆ ಮುಂದಿನ ಚುನಾವಣೆಯಲ್ಲಿ ಉತ್ತರ ಸಿಗಬಹುದು. ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ಈ ಜಿಲ್ಲೆಗಳಿಂದ ಬರದೇ ಇರುವುದೂ ಒಂದು ಕಾರಣವಾಗಿರಬಹುದು.

ಬಿಜೆಪಿ ಪ್ರಾಭಲ್ಯವಿರುವ ಜಿಲ್ಲೆಗಳಲ್ಲೂ ಸಚಿವರು ಯಾರೂ ಹೊಸ ಸಂಪುಟದಲ್ಲಿ ಇಲ್ಲ
ಬಿಜೆಪಿ ಪ್ರಾಭಲ್ಯವಿರುವ ಜಿಲ್ಲೆಗಳಲ್ಲೂ ಸಚಿವರು ಯಾರೂ ಹೊಸ ಸಂಪುಟದಲ್ಲಿ ಇಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಪಕ್ಷಕ್ಕೆ ಉತ್ತಮ ನೆಲೆಯಿರುವ ದಾವಣಗೆರೆ, ವಿಜಯಪುರ, ಕೊಡಗು, ಯಾದಗೀರಿ, ಚಿಕ್ಕಮಗಳೂರು ಜಿಲ್ಲೆಯ ಶಾಸಕರನ್ನು ನೂತನ ಸಂಪುಟಕ್ಕೆ ಪರಿಗಣಿಸಲಿಲ್ಲ. ದಾವಣಗೆರೆ, ಚಿಕ್ಕಮಗಳೂರು, ಕೊಡಗು ಮುಂತಾದ ಜಿಲ್ಲೆಗಳು ಬಿಜೆಪಿಯ ಬಲಾಢ್ಯ ಕೋಟೆಯಾದರೂ ಸಚಿವ ಸ್ಥಾನ ಈ ಜಿಲ್ಲೆಗಳಿಗೆ ಸಿಗಲಿಲ್ಲ.
Recommended Video

ಸಂಪುಟ ರಚನೆ, ಇದೆಂತಹ ಪ್ರಾದೇಶಿಕತೆ? 13 ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲ
ಇನ್ನು, ಕಲಬುರಗಿ, ಮೈಸೂರು, ಕೋಲಾರ, ಚಾಮರಾಜನಗರ, ರಾಮನಗರ, ಹಾಸನ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಾರೊಬ್ಬ ಶಾಸಕರೂ, ಬಸವರಾಜ ಬೊಮ್ಮಾಯಿಯವರ ನೂತನ ಸಂಪುಟದಲ್ಲಿ ಇಲ್ಲ ಎನ್ನುವುದು ಗಮನಿಸಬೇಕಾದ ವಿಚಾರ. ಈ ಜಿಲ್ಲೆಯ ಜನಪ್ರತಿನಿಧಿಗಳ ಒತ್ತಡಕ್ಕೆ ಮುಂದಿನ ದಿನಗಳಲ್ಲಿ ಬೊಮ್ಮಾಯಿ ತೇಪೆ ಹಚ್ಚಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications